ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋದ ಶಾಲಾ ಬಾಲಕ ಮೃತ್ಯು

Update: 2021-10-25 14:11 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ನಗರ ಸಮೀಪದ ಕೆಂಪನಹಳ್ಳಿ ಗ್ರಾಮದಲ್ಲಿರುವ ಚಂದ್ರಕಟ್ಟೆ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾಗಿರುವ ದಾರುಣ ಘಟನೆ ಸೋಮವಾರ ವರದಿಯಾಗಿದೆ. 

ಮೃತ ಬಾಲಕನನ್ನು ಚಿಕ್ಕಮಗಳೂರು ತಾಲೂಕಿನ ಲಕ್ಯಾ ಗ್ರಾಮದ ಹುಲಿಯಪ್ಪ ಎಂಬವರ ಪುತ್ರ ಸುಹಾಸ್ ಗುರುತಿಸಲಾಗಿದೆ. ಕೆಂಪನಹಳ್ಳಿಯ ತನ್ನ ತಾತನ ಮನೆಯಲ್ಲಿ ಇದ್ದುಕೊಂಡು ಕೆಂಪನಹಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಸುಹಾಸ್ ಸೋಮವಾರ ಮೂವರು ಸ್ನೇಹಿತರ ಜೊತೆಗೆ ಕೆರೆಗೆ ಈಜುಲು ತೆರಳಿದ್ದಾನೆ. ಈ ವೇಳೆ ಕೆರೆಯ ಮಧ್ಯೆ ಹೋಗಿದ್ದ ಬಾಲಕ ಅಲ್ಲಿಂದ ಈಜಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಮತ್ತಿಬ್ಬರು ಕೆರೆಯ ಬದಿಯಲ್ಲಿದ್ದ ಕಾರಣದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.

ಶಾಲಾ ಬಾಲಕ ಕೆರೆಯಲ್ಲಿ ಮುಳುಗಿದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಸ್ಥಳೀಯ ಈಜುಗಾರರ ನೆರವಿನಿಂದ ಕೆರೆಯಲ್ಲಿ ಶೋಧ ನಡೆಸಿದ್ದಾರೆ. ಒಂದು ಗಂಟೆಗಳ ಕಾಲ ಶೋಧ ನಡೆಸಿದ ಬಳಿಕ ಬಾಲಕ ಮೃತಪಟ್ಟ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕೆರೆಯ ದಂಡೆಯ ಮೇಲೆ ನೂರಾರು ಜನರು ಜಮಾಯಿಸಿದ್ದು, ಕುಟುಂಬಸ್ಥರ ರೋಧನ ಮುಗಿಲುಮುಟ್ಟಿತ್ತು. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News