ಮತಬ್ಯಾಂಕ್ ಪರಿಕಲ್ಪನೆ ಹುಟ್ಟುಹಾಕಿದ್ದೇ ಕಾಂಗ್ರೆಸ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-10-26 13:25 GMT
photo: twitter@BSBommai
 

ಹಾನಗಲ್: ಪ್ರಜಾಪ್ರಭುತ್ವದಲ್ಲಿ ಮತಬ್ಯಾಂಕ್ ಪರಿಕಲ್ಪನೆಯೇ ತಪ್ಪು, ಮುಗ್ದ, ಹಿಂದುಳಿದ ಸಮುದಾಯಗಳ ಸಮಸ್ಯೆಗಳನ್ನು ಬಂಡವಾಳವಾಗಿಸಿಕೊಂಡು ಚುನಾವಣೆ ನಡೆಸುವ ಅವ್ಯವಸ್ಥೆಯನ್ನು ಕಾಂಗ್ರೆಸ್ ತಂದಿದೆ. ಇದರಿಂದಾಗಿ ಸಾಮಾಜಿಕ ಸಾಮರಸ್ಯ ಕದಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬೋವಿ ಸಮುದಾಯದ ಜನ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು. ''ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಶಿಕ್ಷಣ, ಉದ್ಯೋಗ ಹಾಗೂ ವಿವಿಧ ಅವಕಾಶಗಳಿಂದ ವಂಚಿತವಾದ ಸಮುದಾಯಗಳನ್ನು ಹಾನಗಲ್ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ತರುವುದೇ ನನ್ನ ಗುರಿ'' ಎಂದು ಅವರು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ದಾಳ ಉರುಳಿಸಿ ಮತ ಕೇಳುವ ಅವಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ. ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಚುನಾವಣೆಗಳಲ್ಲಿ ಸಮಾಜದ, ಸಮುದಾಯದ ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ ಅವರಿಗೆ ಬೇಕಾಗಿರುವುದು ಸಮುದಾಯಗಳಿಂದ ಮತ ಹಾಕಿಸಿಕೊಂಡು ಅಧಿಕಾರ ಅನುಭವಿಸುವುದು ಎಂದು ಅವರು ಟೀಕಿಸಿದರು.

ಹಾನಗಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ವಿಭಿನ್ನವಾದ ರೂಪರೇಷೆಯನ್ನು ಸಿದ್ದ ಪಡಿಸಿ ಸರ್ವರ ಏಳಿಗೆ ಸಮುದಾಯದ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಸಾಮರಸ್ಯದ ಬದುಕನ್ನು ಎಲ್ಲರೂ ಜಿಲ್ಲೆಯಲ್ಲಿ ನಡೆಸಬೇಕೆನ್ನುವುದೇ ನಮ್ಮ ಆಶಯ ಎಂದು ಅವರು ಮಾತನಾಡಿದರು.

ಭೋವಿ ಸಮುದಾಯದ ಜನರು ಅತ್ಯಂತ ಶ್ರಮಜೀವಿಗಳು ಅದರಂತೆಯೇ ಲಂಬಾಣಿ ಸಮುದಾಯದವರು ಕ್ರಿಯಾಶೀಲರು ಎಂದು ಅವರು ಹೇಳಿದರು. 

ವಿಶಿಷ್ಟ ಸಮುದಾಯಗಳ ಪಾರಂಪರಿಕ ಕಸುಬುಗಳನ್ನು ಕಾನೂನಿನ ಅಡಿಯಲ್ಲಿ ರಕ್ಷಣೆಗೆ ಅವಕಾಶವಿದೆ. ಈ ಎಲ್ಲ ಸಮುದಾಯದ ಅಭಿವೃದ್ಧಿಗೆ ಈಗಾಗಲೇ ಚಿಂತನೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ಸಿದ್ದಪಡಿಸಿ ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧ

ಮುಖ್ಯಮಂತ್ರಿ ಆಗುವುದಕ್ಕೂ ಮೊದಲು ನಾನು  ಈ ಕ್ಷೇತ್ರದ  ಸೋದರ. ಶಾಸಕನಾಗಿ, ಸಚಿವನಾಗಿ ಈಗ ಮುಖ್ಯಮಂತ್ರಿಯಾಗಿ ಈ ಭಾಗದ ಸೇವೆ ಮಾಡುವ ಅವಕಾಶ ದೊರೆತಿದೆ. 

ಈ ಭಾಗದ ಜನರ ಮೂಲಭೂತ ಬೇಕುಬೇಡಗಳ ಬಗ್ಗೆ ನನಗೆ ಅರಿವಿದೆ. ಈ ಚುನಾವಣೆಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಿ ಮುಂದಿನ ಚುನಾವಣೆಗೆ ಪಟ್ಟಿ ಸಮೇತ ಮತ ಕೇಳಲು ನಿಮ್ಮಮುಂದೆ ಬರುತ್ತೇನೆ ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News