ಸರಕಾರಿ ನೌಕರರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಿ: ಹೈಕೋರ್ಟ್

Update: 2021-10-26 13:30 GMT

ಬೆಂಗಳೂರು, ಅ.26: ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪಕ್ಕೆ ಒಳಗಾದ ರಾಜ್ಯ ಸರಕಾರಿ ನೌಕರರ ವಿರುದ್ಧ ಲೋಕಾಯುಕ್ತ ಮತ್ತು ಉಪ ಲೊಕಾಯುಕ್ತರು ಸಲ್ಲಿಸಿರುವ ವಿಚಾರಣಾ ವರದಿಗಳ ಮೇಲೆ ಸಂಬಂಧಪಟ್ಟ ಸರಕಾರಿ ಇಲಾಖೆ ಮತ್ತು ಸಂಸ್ಥೆಗಳು ಕೈಗೊಂಡ ಕ್ರಮಗಳ ಅನುಪಾಲನಾ ವರದಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಈ ವಿಚಾರವಾಗಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಸರಕಾರದ ಪರ ವಕೀಲರು ವಾದ ಮಂಡಿಸಿ, 24 ಇಲಾಖೆಗಳ ಪೈಕಿ 19 ಇಲಾಖೆಗಳು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಿವೆ. ಕಂದಾಯ ಸೇರಿದಂತೆ ನಾಲ್ಕು ಇಲಾಖೆಗಳು ವರದಿ ಸಲ್ಲಿಸಬೇಕಿದೆ. ಕಂದಾಯ ಇಲಾಖೆಯ ಮಾಹಿತಿ ತುಂಬಾ ಇದ್ದು, ಬಾಕಿ ಇಲಾಖೆಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ನವೆಂಬರ್ ಕೊನೆ ವೇಳೆಗೆ ಸಂಪೂರ್ಣ ಮಾಹಿತಿ ಪಡೆದು ಅನುಪಾಲನಾ ವರದಿ ಸಲ್ಲಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದನ್ನು ದಾಖಲಿಸಿಕೊಂಡು ನ್ಯಾಯಪೀಠ ಅನುಪಾಲನ ವರದಿ ಸಲ್ಲಿಸಲು ನಾಲ್ಕು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿತು. ದುರ್ನಡತೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿರುವ ಸರಕಾರಿ ನೌಕರರ ವಿರುದ್ಧದ ವಿಚಾರಣೆ ನಡೆಸಿ ಕ್ರಮ ಜರುಗಿಸಲು ಶಿಫಾರಸ್ಸು ಮಾಡಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು `ಲೋಕಾಯುಕ್ತ ಕಾಯ್ದೆ-1984'ರ ಸೆಕ್ಷನ್ 12(1) ಅಡಿಯಲ್ಲಿ ಸಲ್ಲಿಸಿದ ವರದಿ ಆಧರಿಸಿ ಸಕ್ಷಮ ಪ್ರಾಧಿಕಾರ ಕೈಗೊಂಡ ಕ್ರಮಗಳ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಮತ್ತು ಈ ವಿಚಾರದಲ್ಲಿ ಸಮನ್ವಯತೆ ಸಾಧಿಸಲು ಡಿಪಿಎಆರ್ ಜಂಟಿ  ಕಾರ್ಯದರ್ಶಿಯನ್ನು ನೋಡೆಲ್ ಅಧಿಕಾರಿಯಾಗಿ ರಾಜ್ಯ ಸರಕಾರ ನೇಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News