ಜೆಡಿಎಸ್ ಮತ್ತು ನಮ್ಮ ಕುಟುಂಬದ ವಿರುದ್ಧ ಒಳಸಂಚು: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆರೋಪ

Update: 2021-10-26 14:28 GMT

ವಿಜಯಪುರ, ಅ.26: ಜೆಡಿಎಸ್ ಬೆಳವಣಿಗೆಯನ್ನು ಸಹಿಸಲಾಗದೇ ಉಪ ಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ನಾಯಕರು ಒಳಸಂಚು ಮಾಡಿ ನಮ್ಮ ಕುಟುಂಬ ಮತ್ತು ಜೆಡಿಎಸ್ ವಿರುದ್ಧ ದಾಳಿ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ವಿರುದ್ಧ ಟೀಕೆ ಟಿಪ್ಪಣಿ ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಝಮೀರ್ ಅಹಮದ್ ಮೇಲೆ ವಾಗ್ದಾಳಿ ನಡೆಸಿದರಲ್ಲದೆ ಸಿದ್ದರಾಮಯ್ಯ ನನ್ನ ಬಗ್ಗೆ ನೇರವಾಗಿ ಮಾತನಾಡಲಾಗದೇ ಇನ್ನೊಬ್ಬರ ಮೂಲಕ ಮಾತನಾಡಿಸುತ್ತಿದ್ದಾರೆಂದು ದೂರಿದರು.

ರಾಜ್ಯದಲ್ಲಿ ನಡೆದ ಆಪರೇಷನ್ ಕಮಲ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಹಾಗೂ ಜಾತ್ಯತೀತ ಶಕ್ತಿಗಳು ದುರ್ಬಲವಾಗಿ ಬಿಜೆಪಿ ಪುಟಿದೇಳಲು ಸಿದ್ದರಾಮಯ್ಯ ಅವರೇ ನೇರ ಕಾರಣ. ರಾಜ್ಯದಲ್ಲಿ ಬಿಜೆಪಿ ಈ ಪ್ರಮಾಣದಲ್ಲಿ ಬೆಳೆಯಲು ಸಿದ್ದರಾಮಯ್ಯ ಅವರೇ ಮೂಲ ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದರು.

ಯಡಿಯೂರಪ್ಪ ಕೊಟ್ಟ ಸೂಟ್‍ಕೇಸ್ ಪಡೆದವರು ಯಾರು?: 2008-13ರ ನಡುವಿನ ರಾಜಕೀಯ ಬೆಳವಣಿಗೆಗಳನ್ನು ಒಮ್ಮೆ ಮೆಲುಕು ಹಾಕಿ. ಆಪರೇಷನ್ ಕಮಲದ ಮೂಲಕ ತೆರವಾದ ಇಪ್ಪತ್ತು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಾಗ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಒಳಸಂಚು ರೂಪಿಸಿದ್ದರು. ಆಗ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಹಿನ್ನಡೆಯಾಗಿ ಎಲ್ಲಡೆ ಬಿಜೆಪಿಯೇ ಗೆದ್ದಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ತಮ್ಮ ಆತ್ಮೀಯ ಸ್ನೇಹಿತರೊಬ್ಬರನ್ನು ಯಡಿಯೂರಪ್ಪ ಅವರ ಬಳಿಗೆ ಕಳಿಸಿ ಎಷ್ಟು ಕೋಟಿ ಪಡೆದುಕೊಂಡರು ಸಿದ್ದರಾಮಯ್ಯ ಎಂಬುದು ಗೊತ್ತಿದೆ. ನನ್ನ ಬಗ್ಗೆ ಸೂಟ್‍ಕೇಸ್ ಆರೋಪ ಮಾಡಿಸುತ್ತಾರಲ್ಲಾ? ಇಪ್ಪತ್ತು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎಷ್ಟು ಕಡೆ ಗೆದ್ದಿತು ಆಗ? ಆಗ ಬಿಜೆಪಿ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ಬಹಳ ದೊಡ್ಡದು ಎಂದು ಅವರು ದೂರಿದರು.

ಯಡಿಯೂರಪ್ಪ ಅವರಿಂದ ಅವರು ಕೋಟ್ಯಂತರ ರೂಪಾಯಿ ಪಡೆದರು. ಯಾರು ಯಡಿಯೂರಪ್ಪ ಅವರ ಬಳಿ ಹೋಗಿ ಹಣ ತೆಗೆದುಕೊಂಡು ಬಂದರೋ ಅವರೇ ನನ್ನ ಬಳಿ ಈ ವಿಷಯವನ್ನು ಹತ್ತಾರು ಸಲ ಹೇಳಿದ್ದಾರೆ. ಎಷ್ಟು ಹಣ ತಂದಿದೀವಿ ಅಂತ ಕೂಡ ಹೇಳಿದ್ದಾರೆ. ನಾನು ಜಾತ್ಯತೀತ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ನಿಜವಾದ ಜಾತ್ಯತೀತ ಬಣ್ಣ ಇದು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

2013ರಲ್ಲಿ ಕೇವಲ 40 ಸೀಟು ಪಡೆದಿದ್ದ ಬಿಜೆಪಿ ಅದೇ 2018ರಲ್ಲಿ 105 ಸೀಟು ಪಡೆಯಲು ಸಾಧ್ಯವಾಗಿದ್ದು ಹೇಗೆ? ಅದಾದ ಮೇಲೆ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸಿದ್ದು ಯಾರು? ಭೈರತಿ ಬಸವರಾಜ, ಮುನಿರತ್ನ, ಸೋಮಶೇಖರ್ ಅವರಂಥ ನಿಷ್ಠರು ಬಿಜೆಪಿಗೆ ಹೋಗಿದ್ದು ಯಾಕೆ? ಅಂದಿನ ಸಚಿವ ಕೆ.ಜೆ.ಜಾರ್ಜ್ ಮತ್ತು ಭೈರತಿ ಬಸವರಾಜ ನಡುವಿನ ಗಲಾಟೆಯನ್ನು ಶಾಸಕಾಂಗ ಪಕ್ಷದ ನಾಯಕರಾಗಿಯೂ ಸರಿ ಮಾಡಲಿಲ್ಲ ಯಾಕೆ? ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಗೆ ಉಂಟಾದ ಅಸಮಾಧಾನವನ್ನು ಶಮನ ಮಾಡಲಿಲ್ಲ, ಕಾರಣವೇನು? ಎಂದು ಸಿದ್ದರಾಮಯ್ಯ ವಿರುದ್ಧ ಅವರು ಕಿಡಿಗಾರಿದರು.

ಮತ್ತೊಬ್ಬರಿಂದ ಮಾತನಾಡಿಸುತ್ತಿದ್ದಾರೆ: ಕಾರ್ಯಾಗಾರ ಆದ ಮೇಲೆ ಜೆಡಿಎಸ್ ಪಕ್ಷವು ಜನರಿಗೆ ಹತ್ತಿರವಾಗುತ್ತಿದೆ ಮಾತ್ರವಲ್ಲದೆ, ಉಪ ಚುಣಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇದನ್ನು ಸಹಿಸಿಕೊಳ್ಳುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಈ ಕಾರಣಕ್ಕೆ ನಮ್ಮ ಮೇಲೆ ಸೂಟ್‍ಕೇಸ್ ಆರೋಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಆಡಿಯೋ ಬಿಡಲು ಸವಾಲು: ತಮ್ಮ ಬಗ್ಗೆ ಕೀಳಾಗಿ ಟೀಕಿಸಿರುವ ಝಮೀರ್ ಅಹಮದ್ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಕೊಚ್ಚೆ ಮೇಲೆ ಕಲ್ಲು ಹಾಕಿ ಮೈಮೇಲೆ ಕೆಸರು ಹಾಕಿಕೊಳ್ಳಲಾರೆ. ಅವರು ನನ್ನ ಬಳಿ ಆಡಿಯೋ ಇದೆ ಎಂದು ಹೇಳಿದ್ದಾರಲ್ಲ, ಅದನ್ನು ಹೊರಗೆ ಬಿಡಲಿ. ಯಾವ ಯಾವ ಆಡಿಯೋಗಳು ಇವೆ ಎಂಬುದನ್ನು ಬಹಿರಂಗ ಮಾಡಲಿ ಎಂದು ಝಮೀರ್ ಅಹಮದ್‍ಗೆ ಸವಾಲು ಹಾಕಿದರು.

ಇವರು ಈಗ ಫಾರೂಕ್ ಬಗ್ಗೆ ಮಾತನಾಡುತ್ತಿದ್ದಾರೆ, ಅದೇ ಫಾರೂಕ್ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರನ್ನು ಗೆಲ್ಲಿಸಲು ಮಾತೃಪಕ್ಷಕ್ಕೆ ದ್ರೋಹ ಮಾಡಿದವರು ಯಾರು? ಈಗ ರಾಮಮೂರ್ತಿ ಅವರು ಎಲ್ಲಿದ್ದಾರೆ? ಇದಕ್ಕೆ ಉತ್ತರ ನೀಡಲಿ ಎಂದು ಎಂದು ಕುಮಾರಸ್ವಾಮಿ ಹೇಳಿದರು.

ಹೌದು. ನಾನು ಕಸ ತೆಗೆಸುತ್ತಿದ್ದೆ. ಓದುವಾಗಲೇ ಈ ಕೆಲಸ ಮಾಡುತ್ತಿದ್ದೆ. ಇದರಲ್ಲಿ ಅವಮಾನ ಏನಿದೆ? ಆಮೇಲೆ ನಮ್ಮ ತಂದೆಯವರು ಬೇಡವೆಂದರು. ಆ ಕೆಲಸವನ್ನು ಅಲ್ಲಿಗೇ ಬಿಟ್ಟೆ. ಆಮೇಲೆ ಓದು ಮುಗಿದ ಮೇಲೆ ಸಿನಿಮಾ ಹಂಚಿಕೆದಾರನಾದೆ. ನಾನು ನನ್ನ ಸ್ವಂತ ದುಡಿಮೆಯಿಂದ ಮೇಲೆ ಬಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News