ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ಜಾತಿ ಒಡೆದ ಕಾಂಗ್ರೆಸ್: ಬಸವರಾಜ ಬೊಮ್ಮಾಯಿ

Update: 2021-10-26 15:55 GMT

ಹಾನಗಲ್, ಅ.26: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಒಂದು ಆಯೋಗವನ್ನು ರಚಿಸಿತು. ಆಯೋಗದ ಮೂಲಕ ಯಾವುದೇ ಸಮೀಕ್ಷೆ ನಡೆಸದೆ ಕೇವಲ ಜಾತಿ ಉಪಜಾತಿಗಳ ಪಟ್ಟಿ ತಯಾರಿಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದರು.

ಮಂಗಳವಾರ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ್ಪುಣಶಿ ಗ್ರಾಮದಲ್ಲಿ ಚುನಾವಣೆ ಪ್ರಚಾರ ಭಾಷಣ ಮಾಡಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಮತ ನೀಡುವಂತೆ ಕೋರಿದ ಅವರು, ಸಮೀಕ್ಷೆ ಹೆಸರಲ್ಲಿ ಜಾತಿ ಉಪಜಾತಿಗಳನ್ನು ಪತ್ತೆ ಹಚ್ಚಿದರು ಎಂದು ಟೀಕಿಸಿದರು.

ಅಲ್ಪಸಂಖ್ಯಾತರಲ್ಲಿ 50ಕ್ಕೂ ಹೆಚ್ಚು ಉಪಜಾತಿಗಳಿವೆ ಎಂಬುದನ್ನು ಕಾಂಗ್ರೆಸ್ ಪತ್ತೆ ಮಾಡಿತು ಈ ಮೂಲಕ ಮತ ಗಳಿಸುವ ಹುನ್ನಾರವನ್ನು ಮಾಡಿದೆ. ಹೀಗಾಗಿ ಯಾರನ್ನು ಕಾಂಗ್ರೆಸ್ ಪಕ್ಷ ಗುತ್ತಿಗೆ ಪಡೆದಿಲ್ಲ ಅದಕ್ಕೆ ಅವಕಾಶವನ್ನು ಕೊಡಬೇಡಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.

ಅಧಿಕಾರ ಬಂದಾಗ ಕೆಲಸ ಮಾಡಬಹುದೆಂಬ ತವಕ ಬಿಜೆಪಿ ಪಕ್ಷಕ್ಕೆ ಇದೆ. ಅಧಿಕಾರ ಬಂದಾಗ ಅದನ್ನು  ಚಲಾಯಿಸುವುದಲ್ಲ ಅಧಿಕಾರ ಬಂದರೆ ಅದನ್ನು ಜನರಿಗಾಗಿ ಬಳಸುವ ಧರ್ಮ ಮತ್ತು ಸಂಸ್ಕøತಿ ನಮ್ಮದು. ಇನ್ನೊಂದು ಕಡೆ ಕಾಂಗ್ರೆಸ್ ಪಕ್ಷದವರು ನೀರಾವರಿ, ಕೆರೆ ತುಂಬಿಸುವ ಯೋಜನೆ, ಅಭಿವೃದ್ಧಿ ಬಗ್ಗೆ ಮಾತಾಡೋಲ್ಲ. ಶಾಲೆ, ಆಸ್ಪತ್ರೆ ಕಟ್ಟಡಗಳು ಸಿ.ಎಂ ಉದಾಸಿ ಅವರ ಹೆಸರು ಹೇಳುತ್ತವೆ. ಐದು ವರ್ಷ ಆಡಳಿತ ಮಾಡಿದ ಸಿದ್ದರಾಮಯ್ಯ ಹಾನಗಲ್ ತಾಲ್ಲೂಕಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಅವರು ಪ್ರಶ್ನಿಸಿದರು.

ದಾಖಲೆ ಸಮೇತ ನಾವು ಮಾಡಿರುವ ಸಾಧನೆ ತೋರುತ್ತೇವೆ. ಮುಂದಿನ ಚುನಾವಣೆಯ ವೇಳೆಗೆ  7500 ಸಾವಿರ ಮನೆಗಳನ್ನು ಕಟ್ಟಲಾಗುವುದು. ದಣಿವರಿಯದೇ ಸಿ.ಎಂ.ಉದಾಸಿ ಅವರು ಈ ಭಾಗದ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಶಿವಕುಮಾರ್ ಉದಾಸಿಯವರು ತಂದೆಯ ಹಾದಿಯಲ್ಲೇ ನಡೆದು, ಅಡಿಕೆ, ಮೆಣಸು ಮತ್ತು ಶುಂಠಿಗೆ ವಿಮೆ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಕಷ್ಟಕ್ಕಾಗುವವರೇ ನಿಜವಾದ ಬಂಧುಗಳು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವು  ಆರ್ಥಿಕ ಸಮೀಕ್ಷೆ ಆಯೋಗ ರಚಿಸಿ, ಜಾತಿ ಜಾತಿಗಳ ನಡುವೆ ಜಗಳ ತಂದು ಅದರ ಲಾಭ ಪಡೆಯಲು ನೋಡಿದರು. ಎಲ್ಲಾ ಸಮಾಜಗಳ ಉಪಜಾತಿಗಳ ಉಪಜಾತಿಗಳನ್ನು ಗುರುತಿಸುವ ಕೆಲಸವನ್ನು ಮಾಡಿದರು. ಇದನು ಅರಿತಿರುವ ಜನ ಹಾನಗಲ್ ತಾಲ್ಲೂಕಿನ ಜನ ಒಟ್ಟಾಗಿ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ನೋಟು ತೆಗೆದುಕೊಳ್ಳಿ ನಮಗೆ ಮತ ಹಾಕಿ ಅನ್ನುತ್ತಾರೆ ಕಾಂಗ್ರೆಸ್ ನವರು. ಅಡ್ಡದಾರಿ ಹಿಡಿಸುವ ಕೆಲಸ ಅವರದ್ದು. ನಿಮ್ಮ ಸ್ವಾಭಿಮಾನ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮತ ಹಾಕಿ ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News