ಬೆಂಗಳೂರಿನ ರಸ್ತೆಗಳ ಗುಂಡಿಗಳು ಲೆಕ್ಕಕ್ಕೆ ಸಿಗುತ್ತಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪ

Update: 2021-10-28 09:47 GMT

ಬೆಂಗಳೂರು: ನಗರದ ರಸ್ತೆಗಳಲ್ಲಿ ಗುಂಡಿಗಳು ಲೆಕ್ಕಕ್ಕೆ ಸಿಗದ ದುಸ್ಥಿತಿಗೆ ತಲುಪಿವೆ. 2008ರಿಂದ 2013ರವರೆಗೆ ಅಧಿಕಾರ ನಡೆಸಿದ್ದ ಬಿಜೆಪಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬೀಳಿಸಿತ್ತು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾನು ಬೆಂಗಳೂರು ಉಸ್ತುವಾರಿಯಾದ ನಂತರ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದೆವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ನಂತರ ರಸ್ತೆಗಳು ಮತ್ತೇ ದುಸ್ಥಿತಿ ತಲುಪಿವೆ. ಅವರಿಗೆ ಆಡಳಿತ ಮಾಡಲು ಬರುವುದಿಲ್ಲ. ಬೆಂಗಳೂರಿನ ರಸ್ತೆ ಸ್ಥಿತಿ ಕಂಡು ಹೈಕೋರ್ಟ್ ಚಿಮಾರಿ ಹಾಕುವಂತಾಗಿದೆ. ನಮ್ಮ ಸರ್ಕಾರ ಇದ್ದಾಗ ರಸ್ತೆಗುಂಡಿಗಳು ಇದ್ದವು ಆದರೆ ಈ ರೀತಿ ಹೈಕೋರ್ಟ್ ನಿಂದ ಛಿಮಾರಿ ಹಾಕಿಸಿಕೊಳ್ಳುವ ಸ್ಥಿತಿಗೆ ಹೋಗಿರಲಿಲ್ಲ. ಆಗಿದ್ದಾಗೆ ನಾವು ಗುಡಿ ಮುಚ್ಚಿಸುತ್ತಿದ್ದೆವು ಎಂದರು.

ಈಗ ರಸ್ತೆಗುಂಡಿಯಿಂದ ಅಪಘಾತ ಹೆಚ್ಚಾಗಿದ್ದು, ಜನ ಸಾಯುತ್ತಿದ್ದಾರೆ, ಗಾಯಗೊಳ್ಳುತ್ತಿದ್ದಾರೆ. ಜನ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಪಾಲಿಕೆ ಆಯುಕ್ತರು, ಸಚಿವ ಆರ್.ಅಶೋಕ್ ಸೇರಿದಂತೆ ಹಲವರು ಗುಂಡಿ ಮುಚ್ಚಲು ಗಡುವು ಕೊಟ್ಟರೂ ಇದುವರೆಗೂ ಗುಂಡಿಗಳು ಮುಚ್ಚಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದು 2 ವರ್ಷ 5 ತಿಂಗಳಾಗಿವೆ ಈ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ ಕಡೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನಮ್ಮ ಸರ್ಕಾರ ಇದ್ದಾಗ ಬೆಂಗಳೂರಿನ ರಸ್ತೆಗಳಿಗೆ ವಿಶೇಷ ಒತ್ತು ನೀಡಿದ್ದೆವು. ಉತ್ತಮ ಗುಣಮಟ್ಟದ ರಸ್ತೆ ನೀಡಬೇಕು ಎಂಬ ಉದ್ದೇಶದಿಂದ ನಾವು ಕಾಂಕ್ರೀಟ್ ರಸ್ತೆ ಮಾಡಲು ಮುಂದಾಗಿದ್ದೆವು. ಆದರೆ ಬಿಜೆಪಿಯವರು ಅದರಲ್ಲಿ ಅಕ್ರಮ ನಡೆದಿದೆ ಎಂದು ಬೊಬ್ಬೆ ಹಾಕಿದರು. ನಂತರ ತನಿಖಾ ಸಮಿತಿ ಯಾವುದೇ ಅಕ್ರಮ ಇಲ್ಲ ಎಂದು ವರದಿ ಕೊಟ್ಟಿದೆ. ಬಿಜೆಪಿ ಕೇವಲ ದೂರುವುದಷ್ಟೇ ಗೊತ್ತು. ಅವರಿಗೆ ಅಭಿವೃದ್ಧಿ ಕೆಲಸ ಮಾಡುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ 7 ಸಚಿವರಿದ್ದಾರೆ, ಅವರ ಕೈಯಲ್ಲಿ ಈ ನಗರದ ನಿರ್ವಹಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳೇ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಈ ಜವಾಬ್ದಾರಿ ತಾವೇ ಇಟ್ಟುಕೊಂಡ ಮೇಲೆ ಅವರು ಸಿಟಿ ರೌಂಡ್ ಹಾಕಬೇಕು. ಎಲ್ಲಿ ಏನೇನು ಸಮಸ್ಯೆ ಇದೆ ಎಂದು ಪರಿಶೀಲನೆ ನಡೆಸಬೇಕು. ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ವಾರಕ್ಕೆ 3 ದಿನ ಸಿಟಿ ರೌಂಡ್ ಹಾಕುತ್ತಿದ್ದೆ. ಎಲ್ಲೆ ಸಮಸ್ಯೆ ಇದ್ದರೂ ಒಂದು ವಾರದ ಒಳಗಾಗಿ ಸರಿ ಪಡೆಸುವಂತೆ ನೋಡಿಕೊಳ್ಳುತ್ತಿದ್ದೆ ಎಂದರು.

ಈಗ ಬೆಂಗಳೂರಿನಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಇತ್ತೀಚೆಗೆ ಅತಿಯಾದ ಮಳೆ ಸುರಿದಾಗ ಸಚಿವರು ತಮ್ಮ ಕ್ಷೇತ್ರ ಬಿಟ್ಟು ಹೊರಬರಲೇ ಇಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸಚಿವರಾಗಿದ್ದಾರೆ ಎಂದು ಭಾವಿಸಿದಂತೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಮಳೆ ಹಾನಿ ವೀಕ್ಷಣೆಗೆ ಎಂದು ಹೋಗಿ 2 ರಸ್ತೆ ನೋಡಿ, ಮಡಿವಾಳ ಕೆರೆ ನೋಡಿ ಎರಡೂವರೆ ಗಂಟೆಗಳಲ್ಲಿ ತಮ್ಮ ಪರಿಶೀಲನೆ ಮುಗಿಸಿ ಮನೆಗೆ ಹೋಗುತ್ತಾರೆ. ಈ ರೀತಿ ಬೇಜವಾಬ್ದಾರಿಯಾಗಿದ್ದರೆ ಬೆಂಗಳೂರಿನ ರಸ್ತೆಗಳು ಗುಂಡಿ ಬೀಳದೇ ಇರುತ್ತದಾ? ಜಿಲ್ಲಾ ಉಸ್ತುವಾರಿಗಳು ಆದೇಶ ನೀಡಿದರೆ 48 ಗಂಟೆಗಳಲ್ಲಿ ರಸ್ತೆ ಮುಚ್ಚಿಸಬಹುದು. ಇವರು ಬೆಂಗಳೂರು ನಗರ ನಿರ್ವಹಣೆ ಮಾಡಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಲಿ. ನಮಗೆ ಅಧಿಕಾರ ನೀಡಲಿ. ಮುಖ್ಯಮಂತ್ರಿಗಳು ಉಸ್ತುವಾರಿ ಹೊತ್ತಿದ್ದರೂ 1 ವಾರದಲ್ಲಿ ರಸ್ತೆ ಗುಂಡಿ ಮುಚ್ಚಲಿಲ್ಲ ಎಂದರೆ ಇವರು ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಹಾಗೂ ಕುಮಾರಸ್ವಾಮಿ ಅವರು 1 ಸಾವಿರ ಕೋಟಿ ಕೊಟ್ಟಿದ್ದರು.ಒಟ್ಟು 7 ಸಾವಿರ ಕೋಟಿ ನೀಡಲಾಗಿತ್ತು. ಇದು ಹೊರತಾಗಿ ಕಳೆದ ಎರಡೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. 2019-20 ಸಾಲಿನಲ್ಲಿ ಬಿಬಿಎಂಪಿಯ  198 ವಾರ್ಡ ಗಳಿಗೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. 2020-21ರಲ್ಲಿ ಬಿಬಿಎಂಪಿಯಿಂದ ಪ್ರತಿ ವಾರ್ಡಿಗೆ 60 ಲಕ್ಷ ಘೋಷಿಸಿದ್ದು, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಅನುದಾನ ನೀಡದೇ ರಸ್ತೆ ಗುಂಡಿ ಮುಚ್ಚಿ ಎಂದರೆ ಹೇಗೆ ಮುಚ್ಚಲು ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ನಗರ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಮಾಹಿತಿ ನೀಡಲಿ. ಬೆಂಗಳೂರು ನಗರ ರಸ್ತೆಗುಂಡಿ ಮುಕ್ತ ನಗರವಾಗಬೇಕು ಎಂಬುದು ನಮ್ಮ ಆಗ್ರಹ. ಬೆಂಗಳೂರು ರಸ್ತೆ ಗುಂಡಿ ಮುಚ್ಚಿ ತಾತಾ ಎಂದು ಪುಟ್ಟ ಬಾಲಕಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೂ ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ತಿಳಿಸಿದ್ದಾರೆ.  

ಗುತ್ತಿಗೆದಾರರ ವೈಫಲ್ಯದಿಂದ ಈ ಪರಿಸ್ಥಿತಿ ಬಂದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ಸರ್ಕಾರ ಇದ್ದಾಗ ಇದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈಗಲೂ ಇದ್ದಾರೆ. ಆಡಳಿತ ನಡೆಸುವರರು ಕೆಲಸ ಹೇಗೆ ಮಾಡಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಬಿಬಿಎಂಪಿ ಗ್ರ್ಯಾಂಟ್ಸ್ ನಲ್ಲಿ ಗುತ್ತಿಗೆದಾರರು ಕೆಲಸ ಮಾಡಿದರೆ ಮೂರು ವರ್ಷಗಳ ನಂತರ ಬಿಲ್ ಪಾಸ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಸೀನಿಯಾರಿಟಿ ಮೇಲೆ ಬೇಗನೆ ಬಿಲ್ ಕ್ಲಿಯರ್ ಆಗುತ್ತಿತ್ತು. ದೇಶದ ಎಲ್ಲ ರಾಜ್ಯಗಳಿಂದ ಐಎಎಸ್ ಅಧಿಕಾರಿಗಳು ಇರುತ್ತಾರೆ. ಅವರಿಂದ ಕೆಲಸ ಮಾಡಬೇಕಾಗಿರುವುದು ಸರ್ಕಾರದ್ದಾಗಿದೆ. ಬೆಂಗಳೂರಿನ 7 ಜನ ಮಂತ್ರಿಗಳಾಗಿದ್ದು ಅವರು ಏನು ಮಾಡುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಬಿಬಿಎಂಪಿ ಮೂಲಕ ಮಂಗಳಮುಖಿಯರಿಗೆ ಪ್ರತಿ ವರ್ಷ 2 ಕೋಟಿ ಅನುದಾನ ಮೀಸಲಿಡಲಾಗಿತ್ತು. ಲಾಕ್ ಡೌನ್ ಸಮಯದಲ್ಲಿ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಲಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಬಿಎಂಪಿಯಲ್ಲಿ ಮಂಗಳಮುಖಿಯಾರಿಗೆ ನೀಡಲಾಗುತ್ತಿದ್ದ ಅನುದಾನ ನಿಂತಿದೆ. ಜತೆಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಡಲಾಗುತ್ತಿದ್ದ ಟೈಲರಿಂಗ್ ಯಂತ್ರ ನೀಡುವುದು, ಸೈಕಲ್ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದೆ’ ಎಂದರು.

ಬೆಂಗಳೂರಿನಲ್ಲಿ ಅತಿಯಾದ ಮಳೆಯಿಂದ 36 ಮನೆಗಳಿಗೆ ನೀರು ನುಗ್ಗಿದಾಗ ತಕ್ಷಣವೇ 10 ಸಾವಿರದಂತೆ ಪರಿಹಾರ ನೀಡಿ ಎಂದು ಭರವಸೆ ನೀಡಿದ್ದರು. ಆದರೂ ಇದುವರೆಗೂ ನಯಾಪೈಸೆ ಬಿಡುಗಡೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಸರ್ಕಾರ ಕೇವಲ ಪರಿಹಾರ ಘೋಷಣೆ ಮಾಡುತ್ತದೆಯೇ ಹೊರತು, ಅದನ್ನು ನೀಡುವುದಿಲ್ಲ. ಅವರ ಘೋಷಣೆ ಕನ್ನಡಿಯೊಳಗಿನ ಗಂಟಾಗಿದೆ. ಅದು ಕೇವಲ ಕಾಣಿಸುತ್ತದೆ ನಮ್ಮ ಕೈಗೆ ಸಿಗುವುದಿಲ್ಲ ಅಷ್ಟೇ. ಕೋವಿಡ್ ಸಮಯದಲ್ಲಿ ಅಸಂಘಟಿತ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಚಾಲಕರಿಗೆ ಪರಿಹಾರ ನೀಡಲಾಗುವುದು ಎಂದರು. ಹೆಚ್ಚೆಂದರೆ ಕೇವಲ 10ಪಷ್ಟು ಜನರಿಗೆ ಮಾತ್ರ ಹಣ ಸಿಕ್ಕಿದೆ. ಉಳಿದ ಶೇ.90ರಷ್ಟು ಮಂದಿಗೆ ಸಿಕ್ಕಿಲ್ಲ. ಬಿಜೆಪಿಯವರು ಘೋಷಣೆ ಮಾಡುವುದರಲ್ಲಿ ನಿಪುಣರು. ಆದರೆ ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದರು.

ಬಿಟ್ ಕಾಯಿನ್ ಅಕ್ರಮದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವಿಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಟ್ ಕಾಯಿನ್ ದಂಧೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ರಾಜ್ಯದ ಇಬ್ಬರು ಪ್ರಭಾವಿ ನಾಯಕರ ಭಾಗಿ ಬಗ್ಗೆ ವರದಿ ನೋಡಿದ್ದೆ. ಸುಮಾರು 10 ಸಾವಿರ ಕೋಟಿ ವಹಿವಾಟಿನ ಅನುಮಾನ ಇದೆ. ಇದು ಪ್ರಧಾನಿ ಕಾರ್ಯಾಲಯಕ್ಕೆ ಹೋಗಿದ್ದು, ಅಲ್ಲಿಂದ ವರದಿ ಕೇಳಲಾಗಿದೆ. ಈ ಬಿಟ್ ಕಾಯಿನ್ ಪ್ರಕರಣ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಭಾವಿಸುತ್ತೇನೆ. ಸಿದ್ದರಾಮಯ್ಯ ಅವರು ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. ಈ ಪ್ರಕರಣದ ತನಿಖೆ ಸತ್ಯಾಂಶ ಹೊರಬಂದರೆ, ಅನೇಕ ನಾಯಕರ ಕುರ್ಚಿ ಅಲುಗಾಡುತ್ತದೆ. ಶೀಕ್ರಿ ಅವರನ್ನು ಬಂಧಿಸಲು ಸರ್ಕಾರ ಹಿಂದುಮುಂದೆ ನೋಡಿದ್ದು ಯಾಕೆ? ಈ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡೆಸಬೇಕು. ಉಳಿದ ಯಾವುದೇ ತನಿಖಾ ಸಂಸ್ಥೆ ಮೇಲೆ ನಂಬಿಕೆ ಇಲ್ಲವಾಗಿದೆ’ ಎಂದರು.

ರಾಜ್ಯ ಸರ್ಕಾರ ಕನ್ನಡಕ್ಕಾಗಿ ನಾವು ಎಂದು ಕಾರ್ಯಕ್ರಮ ನಡೆಸುತ್ತಿದೆ. ಆದರೆ ಪ್ರವಾಸೋದ್ಯಮ ಸಚಿವಾಲಯ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆಯಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಈ ಕಾರ್ಯಕ್ರಮ ಒಳ್ಳೆಯದೇ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಎಲ್ಲರೂ ಬರೆಯಲು, ಓದಬೇಕು’ ಎಂದರು.  

ಬೊಮ್ಮಾಯಿ ಅವರು ಸಿಎಂ ಆಗಿ 100 ದಿನ ಪೂರೈಸುತ್ತಿದ್ದು, ಸಂಭ್ರಮಾಚರಣೆಗೆ ಮುಂದಾಗಿದ್ದಾರೆ ಎಂಬ ಬಗ್ಗೆ ಕೇಳಿದಾಗ, ‘ಬೊಮ್ಮಾಯಿ ಅವರು ಏನು ಮಾಡಿದ್ದಾರೆ ಅಂತಾ 100 ದಿನದ ಸಂಭ್ರಮ ಮಾಡುತ್ತಿದ್ದಾರೆ. ಅವರ ಸಾಧನೆ ಏನು ಎಂದು ಮಾಧ್ಯಮಗಳು ದಿನನಿತ್ಯ ತೋರಿಸುತ್ತಿವೆ’ ಎಂದರು.

ಉಪಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಿದ್ದು, ಪಕ್ಷ ಗೆಲ್ಲುವ ವಿಶ್ವಾಸವಿದೆ. ಚುನಾವಣೆಯಲ್ಲಿ ಬೆಲೆ ಏರಿಕೆ ಬಹುತೇಕ ಚರ್ಚೆಯಾಗಿದ್ದು, ಜನ ಸರ್ಕಾರದ ವಿರುದ್ಧ ಬೆಲೆ ಏರಿಕೆ ವಿಚಾರವಾಗಿ ಬೇಸತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದರು’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News