ಗ್ರಾಮ ಪಂಚಾಯತ್ ಗಳಿಗೆ ಕಟ್ಟಡಗಳ ಮೇಲೆ ಶೇ.1 ತೆರಿಗೆ ವಸೂಲಿ ಮಾಡಲು ರಾಜ್ಯ ಸರಕಾರ ಆದೇಶ
ಬೆಂಗಳೂರು, ಅ.28: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುವ ಕಟ್ಟಡ ಅಂದಾಜು ಮೊತ್ತ 10 ಲಕ್ಷಗಳನ್ನು ಮೀರಿದ ಕಟ್ಟಡಗಳ ನಿರ್ಮಾಣ ವೆಚ್ಚದ ಮೇಲೆ ಶೇ.1 ತೆರಿಗೆಯನ್ನು ವಸೂಲಿ ಮಾಡಲು ಹಾಗೂ ವಸೂಲಿ ಮಾಡಿದ ಮೊತ್ತ ಕಾರ್ಮಿಕ ಕಲ್ಯಾಣ ಮಂಡಳಿ ಖಾತೆಗೆ ಒಂದು ತಿಂಗಳ ಒಳಗೆ ಜಮೆ ಸರಕಾರವು ಆದೇಶ ಮಾಡಿದೆ.
ಕಾರ್ಮಿಕ ಇಲಾಖೆಯು 2007ರಲ್ಲಿ ಕಟ್ಟಡದಲ್ಲಿ ನಿರ್ಮಾಣದ ವೆಚ್ಚ 10 ಲಕ್ಷ ರೂ ಮೀರಿದ ಪ್ರಕರಣಗಳಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996ರನ್ವಯ ಕಟ್ಟಡ ನಿರ್ಮಾಣ ಮಾಡುವವರಿಂದ ವಸೂಲಿ ಮಾಡಲು ಮತ್ತು ವಸೂಲಿ ಮಾಡಿದ ಮೊತ್ತವನ್ನು 30 ದಿನಗಳ ಒಳಗಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಖಾತೆಗೆ ಜಮೆ ಮಾಡಲು ತಿಳಿಸಿದೆ ಆದೇಶಿಸಲಾಗಿತ್ತು.
ಆದರೆ, ಬೆಂಗಳೂರು ನಗರ, ಗ್ರಾಮಾಂತರದ ಕೆಲವು ಗ್ರಾಮ ಪಂಚಾಯಿತಿಗಳು ಹೊರತು ಪಡಿಸಿ, ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದೇ ಮಂಡಳಿಗೆ ತೆರಿಗೆ ಹಣವನ್ನು ಪಾವತಿ ಮಾಡಿರುವುದಿಲ್ಲ. ಒಂದು ವೇಳೆ ಗ್ರಾಮ ಪಂಚಾಯಿತಿಗಳು ಸುಂಕ ವಸೂಲಿ ಮಾಡಿದ್ದರೆ, ಆ ಸುಂಕವನ್ನು ಕಾರ್ಮಿಕ ಕಲ್ಯಾಣ ಮಂಡಳಿ ಖಾತೆಗೆ 30 ದಿನಗಳೊಳಗಾಗಿ ಮಂಡಳಿಯ ಬ್ಯಾಂಕ್ ಖಾತೆಗೆ ಜಮೆ ಮಾಡುಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರ ಅಧೀನ ಕಾರ್ಯದರ್ಶಿ ಚೇತನ ಎಂ ಸುತ್ತೋಲೆ ಹೊರಡಿಸಿದ್ದಾರೆ.