ಪ್ರೀತಿಗೆ ವಿರೋಧ: ತಂದೆಯಿಂದಲೇ ಮಗಳ ಹತ್ಯೆ; ಆರೋಪಿ ಬಂಧನ

Update: 2021-10-28 16:54 GMT

ಚಿಕ್ಕಮಗಳೂರು, ಅ.28: ತಂದೆಯೇ ಮಗಳನ್ನು ಹತ್ಯೆ ಮಾಡಿರುವ ಘಟನೆ ಬೀರೂರು ಪಟ್ಟಣದಲ್ಲಿ ಬುಧವಾರ ರಾತ್ರಿ ವರದಿಯಾಗಿದ್ದು, ಪಟ್ಟಣದ ಬಿ.ಎಚ್.ರಸ್ತೆಯ ರೈಲ್ವೇಗೇಟ್ ಬಳಿ ನಡೆದಿರುವ ಕೃತ್ಯ ಗುರುವಾರ ಬೆಳಕಿಗೆ ಬಂದಿದೆ.

ರಾಧ (18) ತಂದೆಯಿಂದಲೇ ಹತ್ಯೆಯಾದ ದುರ್ದೈವಿಯಾಗಿದ್ದು, ಶಿಕಾರಿಪುರದ ಕೆಂಚಿನಕೊಪ್ಪ ಗ್ರಾಮದ ಚಂದ್ರಪ್ಪ ಎಂಬಾತನೇ  ಆರೋಪಿಯಾಗಿದ್ದಾನೆ. ಚಂದ್ರಪ್ಪ ಅವರ ಮಗಳು ರಾಧ ಅದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರ ಪ್ರೀತಿ ಮನೆಯವರಿಗೆ ಇಷ್ಟವಿಲ್ಲದ ಕಾರಣದಿಂದ ಯುವಕನಿಂದ ದೂರವಿರುವಂತೆ ಮಗಳಿಗೆ ಚಂದ್ರಪ್ಪ ಎಚ್ಚರಿಸಿದ್ದ.

ಆದರೂ ರಾಧ ಯುವಕನೊಂದಿಗೆ ಪ್ರೇಮವನ್ನು ಮುಂದೂವರಿಸಿದ್ದು, ಅದೇ ಯುವಕನನ್ನು ಮದುವೆ ಯಾಗುವುದಾಗಿ ಹಠ ಹಿಡಿದಿದ್ದಾಳೆ. ಸ್ವಲ್ಪದಿನ ಯುವಕನಿಂದ ದೂರ ಉಳಿದರೆ ಮರೆಯ ಬಹುದು ಎಂದು ಭಾವಿಸಿ ಚಂದ್ರಪ್ಪ ಮಗಳನ್ನು ಚನ್ನಗಿರಿಯ ಆತನ ಅಕ್ಕನ ಮನೆಯಲ್ಲಿ ರಾಧಳನ್ನು ಬಿಟ್ಟಿದ್ದ. ಊರಿನಲ್ಲಿ ಹಬ್ಬವಿದ್ದ ಕಾರಣ ಬುಧವಾರ ಬೈಕ್‍ನಲ್ಲಿ ಮಗಳನ್ನು ಕರೆಕೊಂಡು ಹೋಗಲು ಚನ್ನಗಿರಿಗೆ ಬಂದಿದ್ದು, ಮಗಳನ್ನು ಕರೆದುಕೊಂಡು ಹೋಗುವಾ ಗ ಮಗಳಿಗೆ ಬುದ್ಧಿಮಾತು ಹೇಳಿದ್ದಾನೆ.

ತಂದೆಯ ಮಾತಿಗೆ ಒಪ್ಪದ ರಾಧ ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಇದರಿಂದ ಸಿಟ್ಟುಗೊಂಡ ಚಂದ್ರಪ್ಪ ಬೀರೂರು ಮಾರ್ಗವಾಗಿ ಬಂದು ಪಟ್ಟಣದ ಹೊರವಲಯದ ರೈಲ್ವೇಗೇಟ್ ಬಳಿ ಜನಸಂಚಾರವಿಲ್ಲದನ್ನು ಗಮನಿಸಿ ಮಗಳು ರಾಧ ಧರಿಸಿದ್ದ ಚೂಡಿದಾರ್‍ನ ವೇಲ್‍ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆಂದು ತಿಳಿದು ಬಂದಿದೆ.

ತಂದೆಯ ಕೃತ್ಯದಿಂದ ಮಗಳು ರಾಧ ಸ್ಥಳದಲ್ಲಿ ಮೃತಪಟ್ಟಿದ್ದು, ರಾಧಾ ಮೃತಪಟ್ಟಿರುವುದನ್ನು ಖಾತ್ರಿಪಡಿಸಿಕೊಂಡ ಚಂದ್ರಪ್ಪ, ಅಲ್ಲೇ ಸಮೀಪದಲ್ಲಿದ್ದ ಟ್ರಾಕ್ಟರ್ ಚಲಿಸಿ ಹೊಂಡ ಬಿದ್ದಿದ್ದ ಗುಂಡಿಯಲ್ಲಿ ರಾಧಾಳ ಮೃತದೇಹ ಇರಿಸಿ ಶಿಕಾರಿಪುರದ ಕೆಂಚಿನಕೊಪ್ಪ ಗ್ರಾಮಕ್ಕೆ ತೆರಳಿದ್ದಾನೆ. ನಡೆದ ಘಟನೆಯನ್ನು ಕುಟುಂಬದವರಿಗೆ ತಿಳಿಸಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಕುಟುಂಬಸ್ಥರು ಚಂದ್ರಪ್ಪನನ್ನು ರಕ್ಷಿಸಿದ್ದಾರೆಂದು ತಿಳಿದುಬಂದಿದೆ.

ತಕ್ಷಣ ಕುಟುಂಬಸ್ಥರು ಚಂದ್ರಪ್ಪ ಅವರನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದು, ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲಿನ ಪೊಲೀಸರು ಬೀರೂರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಪರಿಶೀಲಿಸಿದಾಗ ಯುವತಿಯ ಮೃತದೇಹ ಪತ್ತೆಯಾಗಿದೆ.

ಕೊಲೆ ಮಾಡಿದ ಆರೋಪಿ ಚಂದ್ರಪ್ಪನನ್ನು ಬೀರೂರು ಪೊಲೀಸ್ ಠಾಣೆಗೆ ಕರೆತಂದು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News