ಕೈಗಾರಿಕೆಗಳಿಗೆ ಮಂಜೂರಾದ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ ಜಾರಿ: ಸಚಿವ ಮುರುಗೇಶ್ ನಿರಾಣಿ

Update: 2021-10-28 15:57 GMT
ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು, ಅ.28: ಕೈಗಾರಿಗಳಿಗೆ ಉತ್ತೇಜನ ನೀಡಲು ಮಂಜೂರಾದ ಭೂಮಿಯ ಕ್ರಯಪತ್ರವನ್ನು ಕೈಗಾರಿಕೆಗಳು ಆರಂಭವಾದ 10 ರಿಂದ 15 ದಿನಗಳ ಒಳಗೆ ಕೊಡಲು ರಾಜ್ಯ ಸರಕಾರ ಶೀಘ್ರದಲ್ಲಿಯೇ ಹೊಸ ನೀತಿ' ರೂಪಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಕಟಿಸಿದರು.

ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಇಂಡೋ-ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಉತ್ಪಾದನೆ’ ಕುರಿತ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕಾ ಯೋಜನೆಗಳು ವಿಳಂಬವಾಗುವುದನ್ನು ತಪ್ಪಿಸಲು ಉತ್ಪಾದನಾ ಕೈಗಾರಿಕೆಗಳು ತಮ್ಮ ಘಟಕಗಳನ್ನು ಸ್ಥಾಪಿಸಲು ಪ್ರಾರಂಭಿಸಿದ 10 ರಿಂದ 15 ದಿನಗಳಲ್ಲಿ ತಮಗೆ ಮಂಜೂರು ಮಾಡಿದ ಭೂಮಿಯ ಕ್ರಯ ಪತ್ರವನ್ನು ಪಡೆಯಲು ಅನುಕೂಲ ಮಾಡಿಕೊಡುವ ನೀತಿಯನ್ನು ಶೀಘ್ರದಲ್ಲೇ ಜಾರಿ ಮಾಡಲಿದ್ದೇವೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದ ಈ ನಿರ್ಧಾರದಿಂದ ಕೈಗಾರಿಕಾ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ವಿಳಂಬವನ್ನು ತಪ್ಪಿಸುವುದರ ಜೊತೆಗೆ ಪ್ರಕ್ರಿಯೆಯನ್ನು ವೇಗಗೊಳಿಸಲು ಹೆಚ್ಚಿನ ಅನುಕೂಲವಾಗಲಿದೆ. ಇದರಿಂದಾಗಿ ಉದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಅಭಿವೃದ್ಧಿಪಡಿಸಿದ ಜಮೀನನ್ನು ಮಾರುಕಟ್ಟೆಯ ಬೆಲೆ ಶೇ.15ರಿಂದ 20ಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು ಸರಕಾರದ ಗುರಿಯಾಗಿದೆ. ದೇಶದಲ್ಲೇ ‘ರಾಜ್ಯವು ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಪ್ರಮುಖ ಉತ್ಪಾದನಾ ಕೈಗಾರಿಕೆಗಳಿಗೆ ನೆಲೆಯಾಗಿದೆ’ ಎಂದು ಮುರುಗೇಶ್ ನಿರಾಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ವರ್ಷ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದಲ್ಲಿ ಸುಮಾರು 10 ಲಕ್ಷ ಕೋಟಿ ರೂ.ಹೂಡಿಕೆಯ ಗುರಿ ಹೊಂದಿದ್ದೇವೆ. ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಪರಸ್ಪರ ಒಪ್ಪಂದ ಮತ್ತು ಹೂಡಿಕೆ ಪ್ರಸ್ತಾಪಗಳ ರೂಪದಲ್ಲಿ 28,600 ಕೋಟಿ ರೂಪಾಯಿ ಮೌಲ್ಯದ ಹೂಡಿಕೆಗಳನ್ನು ಗಳಿಸಲಾಗಿದೆ. ವ್ಯಾಪಾರ ವಹಿವಾಟಿಗಳನ್ನು ಸರಳೀಕರಣಗೊಳಿಸಲು ನಾವು ಲಾಜಿಸ್ಟಿಕ್ಸ್ ಮತ್ತು ವೇರ್ ಸಿಂಗ್ ಕ್ಷೇತ್ರಗಳಿಗೆ ಉದ್ಯಮದ ಸ್ಥಾನಮಾನವನ್ನು ನೀಡಿದ್ದೇವೆ ಎಂದು ಅವರು ತಿಳಿಸಿದರು.

ಕರ್ನಾಟಕವು ಅನೇಕ ಜಾಗತಿಕ ಕಂಪನಿಗಳ ತಾಣವಾಗಿದೆ. ರಾಜ್ಯವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಸದುದ್ದೇಶದಿಂದ ಇಂತಹ ಸಂವಾದ ಹಾಗೂ ಚರ್ಚೆಗೆ ವೇದಿಕೆ  ಸೃಷ್ಟಿಸಿದ್ದಕ್ಕಾಗಿ ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳಿಗೆ ಮುರುಗೇಶ್ ನಿರಾಣಿ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಇಂಡೋ-ಅಮೇರಿಕನ್ ಚೇಂಬರ್ಸ್ ಆಫ್ ಕಾಮರ್ಸ್‍ನ ಅಧ್ಯಕ್ಷ ಶಜೋಸ್ ಜಾಕೋಬ್, ಐಎಸಿಸಿ ಶಾಖೆಯ ಮುಖ್ಯಸ್ಥರಾದ ಜಿತಿಕಾ ನಾರಂಗ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಐಎಸಿಸಿ ಹಿರಿಯ ಉಪಾಧ್ಯಕ್ಷ ಚಂದ್ರಕನಾಥ್ ಬಿ ಎನ್,ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News