ಈ ಹುಡುಗನ ಜೊತೆ ಎಷ್ಟೊಂದು ಭೇಟಿಗಳ ನೆನಪುಗಳು: ಟ್ವಿಟರ್ ನಲ್ಲಿ ಪುನೀತ್ ಜೊತೆಗಿನ ಹಳೇಯ ಪೋಟೊ ಹಂಚಿಕೊಂಡ ಸಿದ್ದರಾಮಯ್ಯ

Update: 2021-10-30 08:19 GMT

ಬೆಂಗಳೂರು: ಶುಕ್ರವಾರ  ಹೃದಯಾಘಾತದಿಂದ ನಿಧನರಾದ ನಟ‌ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆ ಇಂದು ಸಂಜೆ ಕಂಠೀರವ‌ ಸ್ಟುಡಿಯೊ ಬಳಿ‌ ನೆರವೇರಲಿದೆ. 

ಇಂದು ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್ ಅವರ ಅಂತಿ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ತಮ್ಮ ಜೊತೆಗಿದ್ದ ಪುನೀತ್ ಅವರ ಹಳೇಯ ಪೋಟೊ ಟ್ವಟರ್ ನಲ್ಲಿ ಹಂಚಿಕೊಂಡಿದ್ದಾರೆ.

''ಈ ಹುಡುಗನ ಜೊತೆ ಎಷ್ಟೊಂದು ಭೇಟಿಗಳ ನೆನಪುಗಳು.... ಪ್ರತಿ ಭೇಟಿಯಲ್ಲಿಯೂ ಅದೇ ವಿನಯ, ಸಮ್ಮೋಹನಗೊಳಿಸುವ ನಗು, ಪುಟಿಯುವ ಜೀವನೋತ್ಸಾಹ, ಹಿರಿಯರಿಗೆ ಕೊಡುತ್ತಿದ್ದ ಗೌರವ, ನಮ್ಮವನೆಂದು ಭಾವಿಸುವ ಹಾಗೆ ಮಾಡುವ ಆತ್ಮೀಯ ನಡವಳಿಕೆ.... ಈಗ ಎಲ್ಲವೂ ಬರೀ ನೆನಪುಗಳು...'' ಎಂದು ತಿಳಿಸಿದ್ದಾರೆ.  

'ಸದಾ ಕ್ರೀಯಾಶೀಲವಾಗಿ ಉತ್ಸಾಹದ ಬುಗ್ಗೆಯಂತಿದ್ದ ನಟ ಪುನೀತ್ ರಾಜ್‌ಕುಮಾರ್, ಪಾರ್ಥೀವ ಶರೀರವಾಗಿ ಶಾಂತ ಮುಖಮುದ್ರೆಯೊಂದಿಗೆ ಮಲಗಿರುವುದನ್ನು ಕಂಡು ವೇದನೆಯಾಯಿತು' ಎಂದು ಹೇಳಿದ್ದಾರೆ.

'ವರನಟ ಡಾ. ರಾಜ್ ಕುಮಾರ್ ಅವರು ನನ್ನನ್ನು ಭೇಟಿಯಾದಾಗೆಲ್ಲ ‘ನಮ್ಮ ಕಾಡಿನವರು’ ಎಂದೇ ಮಾತು ಶುರುಮಾಡುತ್ತಿದ್ದರು. ಈ ಸ್ನೇಹ ಸಂಬಂಧ ಮಕ್ಕಳ ಕಾಲದಲ್ಲಿಯೂ ಮುಂದುವರಿದಿದೆ. ಪ್ರತಿ ಬಾರಿ ಪುನೀತ್ ಭೇಟಿಯಾದಾಗಲೂ ತನ್ನ ಸೌಜನ್ಯದ ನಡವಳಿಕೆಯಿಂದ ಅವರ ಅಪ್ಪಾಜಿ ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಡುತ್ತಿದ್ದರು' ಎಂದು ಪುನೀತ್ ರಾಜ್ ಕುಮಾರ್ ಅವರ ಭೇಟಿಯ  ಹಳೇಯ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News