ನೂತನ ಶಿಕ್ಷಣ ನೀತಿಯು ವೈವಿಧ್ಯಮಯ ಪರಂಪರೆಗೆ ಧಕ್ಕೆ ಉಂಟುಮಾಡುತ್ತದೆ: ಪ್ರಕಾಶ್ಭಾಯಿ ಶಾ
ಬೆಂಗಳೂರು, ಅ.30: ಭಾರತ ದೇಶವು ಸ್ವಾತಂತ್ರ್ಯಾಂದೋಲನ ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಚಿಂತನೆಗಳ ವೈವಿಧ್ಯತೆ ಮಧ್ಯೆದಲ್ಲೂ ಒಂದು ಭವ್ಯ ಶಿಕ್ಷಣ ಪರಂಪರೆಯನ್ನು ಹೊಂದಿದೆ. ನೂತನ ಶಿಕ್ಷಣ ನೀತಿಯು ವೈವಿಧ್ಯಮಯ ಪರಂಪರೆಗೆ ಧಕ್ಕೆ ಉಂಟುಮಾಡುತ್ತದೆ. ಈ ನೀತಿಯು ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡುವುತ್ತದೆ. ಭಾರತವನ್ನು ಫ್ಯಾಸಿವಾದಕ್ಕೆ ತಳ್ಳುತ್ತದೆ ಎಂದು ಎ.ಐ.ಎಸ್.ಇ.ಸಿಯ ಅಖಿಲ ಭಾರತ ಅಧ್ಯಕ್ಷ ಪ್ರಕಾಶ್ಭಾಯಿ ಶಾ ತಿಳಿಸಿದ್ದಾರೆ.
ಶನಿವಾರ ಎ.ಐ.ಎಸ್.ಇ.ಸಿ ಆಯೋಜಿಸಿದ್ದ ‘ಅಖಿಲ ಭಾರತ ಶಿಕ್ಷಣ ಉಳಿಸಿ ಸಮ್ಮೇಳನ’ದ ವೆಬಿನಾರ್ನಲ್ಲಿ ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿಯು ಧರ್ಮನಿರಪೇಕ್ಷತೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಪ್ರಜಾಸತ್ತಾತ್ಮಕ ವಿಚಾರಗಳ ಮೇಲೆ ಪ್ರಹಾರ ಮಾಡುತ್ತದೆ. ಸರಕಾರ ರಾಷ್ಟ್ರವಾದದ ಹೆಸರಿನಲ್ಲಿನ ನೀತಿಯನ್ನು ಬಲವಂತವಾಗಿ ಹೇರುತ್ತಿದೆ. ಆದುದರಿಂದ ದೇಶದ ಜನತೆ ನೂತನ ನೀತಿಯನ್ನು ವಿರೋಧಿಸುವುದು ಅನಿವಾರ್ಯವಾಗಿದೆ. ಈ ಮೂಲಕ ಕೇಂದ್ರವು ವಿರೋಧಿ ಅಭಿಪ್ರಾಯಗಳನ್ನು ಸ್ವೀಕರಿಸುವ ಪ್ರಜಾತಂತ್ರದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಬೇಕು ಎಂದರು.
ಖ್ಯಾತ ಇತಿಹಾಸ ತಜ್ಞ ರೋಮಿಲ್ಲಾ ಥಾಪರ್ ಮಾತನಾಡಿ, ಶಿಕ್ಷಣದ ಅತ್ಯಮೂಲ್ಯ ಭಾಗವಾದ ಪಠ್ಯಕ್ರಮವೂ ಹಿಂದಿನಿಂದಲೂ ಬಹಳ ನಿರ್ಲಕ್ಷಕ್ಕೊಳಗಾಗಿದೆ. ಇದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯು ಹೊರತಾಗಿಲ್ಲ. ಇತ್ತೀಚೆಗೆ ಬಂದ ಆನ್ಲೈನ್ ಶಿಕ್ಷಣವೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಜ್ಞಾನ ಒದಗಿಸುವುದಿಲ್ಲ. ಹಾಗೆಯೇ ಇತಿಹಾಸದ ವಿಷಯಕ್ಕೆ ಬಂದರೆ, ಇತಿಹಾಸದ ವ್ಯಾಖ್ಯಾನ ಎನ್ನುವುದು ಇತಿಹಾಸದಲ್ಲಿ ಸಿಕ್ಕ ಐತಿಹಾಸಿಕ ಸಂಗತಿಗಳ ಆಧಾರದ ಮೇಲೆ ನಿಂತಿರುತ್ತದೆ. ಇದು ಯಾರೊಬ್ಬರ ಅಭಿಪ್ರಾಯದ ಮೇಲೆ ನಿಂತಿಲ್ಲ. ಇತಿಹಾಸವೆಂದರೆ ಅದು ಕೇವಲ ಮೇಲ್ವರ್ಗದ ಇತಿಹಾಸವಲ್ಲ, ಅದು ಕೆಳ ವರ್ಗದ ಮತ್ತು ತುಳಿತಕ್ಕೊಳಗಾದ ಸಮುದಾಯದ ಕಥೆಯನ್ನೂ ಒಳಗೊಂಡಿರುತ್ತದೆ. ಈ ನೂತನ ಶಿಕ್ಷಣ ನೀತಿ ಇದನ್ನೆಲ್ಲಾ ಪರಿಗಣಿಸದೇ ಇತಿಹಾಸವನ್ನೇ ತಿರುಚುವ ಕೆಲಸ ಮಾಡುತ್ತದೆ ಎಂದರು.
ಇರ್ಫಾನ್ ಹಬೀಬ ಮಾತನಾಡಿ, ಸರಕಾರ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದೆ. ಹೊಸ ಶಿಕ್ಷಣ ನೀತಿಯು ದೇಶಭಕ್ತಿಯ ಹೆಸರಲ್ಲಿ ಇತಿಹಾಸದ ಬೆಳವಣಿಗೆಯ ಸಂಕುಚಿತತೆಯನ್ನು ಹರಡುತ್ತಿದೆ. ನೂತನ ಶಿಕ್ಷಣ ನೀತಿ ದಲಿತ, ಗ್ರಾಮೀಣ ಮತ್ತು ಹಿಂದುಳಿದ ಸಮುದಾಯದ ಜನಗಳ ವಿರೋಧಿಯಾಗಿದೆ. ಇದು ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣವನ್ನು ಇನ್ನಷ್ಟು ಉತ್ತೇಜಿಸುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಪ್ರೇಮಿ ಜನತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನೋಡಬೇಕಿದೆ ಎಂದರು.
ಬಳಿಕ ಮಾತನಾಡಿದ ಪ್ರೊ. ಕರುಣಾನಾಥನ್, ಈ ಹಿಂದಿನ ನೀತಿಗಳು ದೇಶದಲ್ಲಿ ಜಾರಿಗೊಂಡಿದ್ದವು. ಆದರೆ ಈ ನೀತಿಯು ದೇಶದ ಶಿಕ್ಷಣ ಕ್ಷೇತ್ರದ ಮೇಲೆ ಬಲವಂತವಾಗಿ ಹೇರಿಕೆಯಾಗಿದೆ. ಇದು ಜಾತಿ ಧರ್ಮ ಭಾಷೆ ಪ್ರಾದೇಶಿಕತೆಗಳಲ್ಲಿ ಸಮಾನತೆ ಸಾದಿಸುವ ಬದಲು ಅಸಮಾನತೆಯನ್ನು ಇನ್ನಷ್ಟು ಹೆಚ್ಚುಮಾಡುತ್ತದೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನೇ ಸರ್ವನಾಶ ಮಾಡಲಿದೆ. ಇಂಥ ಹೀನ ಉದ್ದೇಶವಿರುವಾಗ ರಾಜ್ಯ ವಿಶ್ವವಿದ್ಯಾಲಯಗಳ ಅವಶ್ಯಕತೆಯಾದರೂ ಯಾಕೆ? ಎಂದು ಪ್ರಶ್ನಿಸಿದರು.
ವೆಬಿನಾರ್ನಲ್ಲಿ ಅಖಿಲಭಾರತ ಶಿಕ್ಷಣ ಉಳಿಸಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ಆನಿಸ್ ರಾಯ್, ಪ್ರೊ. ಟಿ.ಕೆ ನಸ್ಕರ್, ನಿವೃತ್ತ ಕುಲಪತಿಗಳಾದ ಜವಾಹರ್ ನೇಸನ್, ತಫೋಧೀರ ಬಟ್ಟಾಚಾರ್ಯ ಉಪಸ್ಥಿತರಿದ್ದರು.