ಚಾಮರಾಜನಗರ: ಮಹಾದೇವ ಶಂಕನಪುರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

Update: 2021-10-31 15:01 GMT
 ಮಹಾದೇವ ಶಂಕನಪುರ

ಚಾಮರಾಜನಗರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ ನೀಡಲಾಗುವ ರಾಜ್ಯ ಸರ್ಕಾರದ,  2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ  ಸಾಹಿತ್ಯ ಕ್ಷೇತ್ರದಿಂದ ಜಿಲ್ಲೆಯ ಪ್ರಮುಖ ಸಾಹಿತಿ, ಕವಿ, ಮಹಾದೇವ ಶಂಕನಪುರ ಆಯ್ಕೆಯಾಗಿದ್ದಾರೆ.

ಮಹಾದೇವ ಅವರು ಕೊಳ್ಳೇಗಾಲ ಪಕ್ಕದ ಶಂಕನಪುರ ಗ್ರಾಮದವರು.  ನಿವೃತ್ತ ಸಹಾಯಕ ಪ್ರಾಧ್ಯಾಪಕರು. ವಿಶೇಷವಾಗಿ ಜಾನಪದ ಆಧಾರಿತ ಕೃತಿಗಳ ಲೇಖಕರು. ಮಾರಿಹಬ್ಬಗಳು, ಮಂಟೇಸ್ವಾಮಿ ಮೂವ್‌ಮೆಂಟ್, ಚಿಕ್ಕಲ್ಲೂರು ಜಾತ್ರೆ, ಚಾಮರಾಜನಗರ ಜಿಲ್ಲೆಯ ಜನಪದ ಕಲಾವಿದರ ಪರಿಚಯ, ನಾಲಿಗೆ ಮೇಲಿನ ಚರಿತೆ ಲೇಖನಗಳ ಸಂಗ್ರಹ, ಉರಿಗದ್ದಿಗೆ ಮೇಲೆ ಬೋಳು ಜಂಗಮನ ತಂಬೂರಿ ಪದ, ಮಲೆಯ ಮಾದಯ್ಯನ ಸಾಂಸ್ಕೃತಿಕ ಜಾತ್ರೆ, ಮಂಟೇಸ್ವಾಮಿ ಮೌಖಿಕ ಚರಿತ್ರೆ  ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಮಾರಿಹಬ್ಬಗಳೂ ಕೃತಿಗೆ 2002 ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2002 ಮೈಸೂರು ವಿಶ್ವವಿದ್ಯಾಲಯದ ತೀನಂಶ್ರೀ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ ಪ್ರಶಸ್ತಿ, ಮಂಟೇಸ್ವಾಮಿ ಪ್ರತಿಷ್ಠಾನ, ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗಳು ದೊರೆತಿವೆ. ಕವಿಯಾಗಿ ಸಾಹಿತ್ಯ ವಲಯದಲ್ಲಿ  ಚಿರಪರಿಚಿತರಾಗಿರುವ ಮಹಾದೇವ ಅವರ ಅನೇಕ ಕವಿತೆಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿ, ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ.

ಕೊಳ್ಳೇಗಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಈಶಾನ್ಯ ಭಾರತ ರಾಜ್ಯಗಳ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಪ್ರಶಸ್ತಿ ಬಂದಿದ್ದು ಸಂತಸ ತಂದರೂ, ನಮ್ಮ ಜಿಲ್ಲೆಯ ರಾಯಭಾರಿ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯ ಸನ್ನಿವೇಶದಲ್ಲಿ ಆ ಸಂಭ್ರಮವನ್ನು ಆಸ್ವಾದಿಸಲಾಗುತ್ತಿಲ್ಲ  ಎಂದು  ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಸಾಹಿತಿ, ಕವಿ ಮಹಾದೇವ ಶಂಕನಪುರ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News