ಬೆಂಗಳೂರು: ರೈಲ್ವೇ ಇಂಜಿನಿಯರ್ ಲಂಚ ಆರೋಪ ; ಸಿಬಿಐನಿಂದ ಪ್ರಕರಣ ದಾಖಲು
Update: 2021-11-02 21:53 IST
ಬೆಂಗಳೂರು, ನ.2: ಗುತ್ತಿಗೆದಾರರಿಂದ 1.29 ಕೋಟಿ ರೂ ಲಂಚ ಸ್ವೀಕರಿಸಿದ ಆರೋಪ ಪ್ರಕರಣ ಸಂಬಂಧ ನೈಋತ್ಯ ರೈಲ್ವೆ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ ಕೇಂದ್ರೀಯ ತನಿಖಾ ದಳ(ಸಿಬಿಐ) ಪ್ರಕರಣವನ್ನು ದಾಖಲಿಸಿದೆ ಎಂದು ವರದಿಯಾಗಿದೆ.
ನೈರುತ್ಯ ರೈಲ್ವೆ ಬೆಂಗಳೂರಿನ ಎಕ್ಸಿಕ್ಯೂಟಿವ್ ಇಂಜಿನಿಯರ್ ಘನ್ ಶ್ಯಾಮ್ ಪ್ರಧಾನ್ ಮತ್ತು ಇಬ್ಬರು ಗುತ್ತಿಗೆದಾರರನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ ಎಂದು ತಿಳಿದುಬಂದಿದೆ.
ಗುತ್ತಿಗೆದಾರರು ನಿರ್ವಹಿಸುವ ಕೆಲಸಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ಲಂಚವನ್ನು ಸ್ವೀಕರಿಸಿದ್ದಾರೆ. ತನಿಖೆಯ ಭಾಗವಾಗಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಹಾರಾಷ್ಟ್ರದ ಸಾಂಗ್ಲಿ, ನಂದ್ಯಾಲ ಮತ್ತು ತೆಲಂಗಾಣದ ರಂಗಾರೆಡ್ಡಿ ಸೇರಿದಂತೆ 16 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆದು, ಸಿಬಿಐ ತನಿಖೆ ಮುಂದುವರೆಸಲಾಗಿದೆ.