ಚಿಕ್ಕಮಗಳೂರು : ದುಷ್ಕರ್ಮಿಗಳ ತಂಡದಿಂದ ಯುವಕನ ಕೊಲೆ
Update: 2021-11-03 13:12 IST
ಚಿಕ್ಕಮಗಳೂರು : ಕಾಫಿತೋಟಕ್ಕೆ ಹೋಗಿ ಹಿಂದಿರುಗುತ್ತಿದ್ದ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರ ಗಳಿಂದ ಕಡಿದು ಕೊಲೆಗೈದ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮೃತ ಯುವಕನನ್ನು ಇಲ್ಲಿನ ನಿವಾಸಿ ಪ್ರಕೃತ್ (29) ಎಂದು ಗುರುತಿಸಲಾಗಿದೆ.
ಹತ್ಯೆಯಾದ ಪ್ರಕೃತ್ ಕೃಷಿಕನಾಗಿದ್ದು, ಈತನ ಕುಟುಂಬ ಹಾಗೂ ಕೊಲೆ ಆರೋಪಿ ಸಂಬಂಧಿಗಳು ಎಂದು ತಿಳಿದುಬಂದಿದ್ದು, ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿತ್ತು. ಪ್ರಕೃತ್ ತಂದೆ ಅವರು ಆರೋಪಿ ನಾಗರಾಜ್ ಗೆ ಇತ್ತೀಚೆಗೆ 7 ಎಕರೆ ಜಮೀನು ಬಿಟ್ಟು ಕೊಟ್ಟಿದ್ದರು. ಆದರೂ ಜಾಗದ ವಿಚಾರಕ್ಕೆ ನಾಗರಾಜ್ ಪ್ರಕೃತ್ ಕುಟುಂಬಸ್ಥರೊಂದಿಗೆ ಜಗಳ ಕಾಯುತ್ತಿದ್ದ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.