ಎಸಿಬಿ ಬಲೆಗೆ ಬಿದ್ದಿದ್ದ ಪಿಎಸ್‌ಐ ಠಾಣೆಯಿಂದ ಪರಾರಿಯಾದ ವೀಡಿಯೊ ವೈರಲ್

Update: 2021-11-03 16:46 GMT

ತುಮಕೂರು: ಲಂಚ ಪಡೆಯುವಾಗಲೇ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದ ಗುಬ್ಬಿ ತಾಲ್ಲೂಕು ಚಂದ್ರಶೇಖರಪುರ (ಸಿ.ಎಸ್.ಪುರ) ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಸೋಮಶೇಖರ್ ಠಾಣೆಯಿಂದ ಓಡಿ ಹೋಗಿದ್ದಾರೆ. ಠಾಣೆಯಿಂದ ಓಡಿ ಹೋಗುತ್ತಿದ್ದ ಅವರನ್ನು ಹಿಡಿಯಲು ಸಾರ್ವಜನಿಕರು ಬೆನ್ನಟ್ಟಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಪಿಎಸ್‌ಐ ಸೋಮಶೇಖರ್ ಮತ್ತು ಕಾನ್ಸ್ಟೆಬಲ್ ನಯಾಜ್ ಎಸಿಬಿ ಬಲೆಗೆ ಬಿದ್ದಿದ್ದರು. ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿದ್ದ ವೇಳೆ ಪಿಎಸ್‌ಐ ಮೊಬೈಲ್ ಫೋನ್ ನೊಂದಿಗೆ ಪರಾರಿಯಾಗಿದ್ದಾರೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಎಸಿಬಿ ಬಲೆಗೆ ಪಿಎಸ್‌ಐ ಸೋಮಶೇಖರ್ ಮತ್ತು  ಕಾನ್ಸ್ಟೆಬಲ್ ನಯಾಜ್ ಅಹಮ್ಮದ್ ಅವರ ಬಲೆಗೆ ಬಿದ್ದಿದ್ದರು.

ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವರ ವಿರುದ್ಧ ಕಳೆದ ಅಕ್ಟೋಬರ್ 22 ರಂದು ದೂರು ದಾಖಲಾಗಿತ್ತು. ಇದನ್ನೇ ದಾಳವಾಗಿಸಿಕೊಂಡು ಪೊಲೀಸರು ಚಂದ್ರಣ್ಣನ ಕಾರು ಮುಟ್ಟುಗೋಲು ಹಾಕಿಕೊಂಡಿದ್ದರು. ಕೋರ್ಟ್ ನಲ್ಲಿ ಜಾಮೀನು ಪಡೆದು ಕಾರು ಬಿಡಿಸಿಕೊಳ್ಳಲು ಬಂದಿದ್ದ ಚಂದ್ರಣ್ಣ ಅವರ ಬಳಿ ಕಾರು ಬಿಡಲು ಪಿಎಸ್‌ಐ 28 ಸಾವಿರಕ್ಕೆ ಹೆಡ್ ಕಾನ್ಸ್ಟೆಬಲ್ ನಯಾಝ್ ಅಹಮದ್ ಮೂಲಕ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಈ ಪೈಕಿ ಮೊದಲ ಕಂತಿನಲ್ಲಿ 12 ಸಾವಿರ ರೂ. ಲಂಚವನ್ನು ಪಿಎಸ್‌ಐ ಪಡೆದುಕೊಂಡಿದ್ದರು. ಉಳಿದ 16 ಸಾವಿರ ಪಡೆಯುವ ವೇಳೆ ಪಿಎಸ್‌ಐ ಎಸಿಬಿ ಬಲೆಗೆ ಬಿದ್ದಿದ್ದರು. ಪಿಎಸ್‌ಐ ಲಂಚ ಕೇಳುತ್ತಿರುವ ಬಗ್ಗೆ ಚಂದ್ರಣ್ಣ ಎಸಿಬಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಇನ್ಸ್ಪೆಕ್ಟರ್ ವಿಜಯಲಕ್ಷ್ಮಿ ನೇತೃತ್ವದಲ್ಲಿ ದಾಳಿ ನಡೆದಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News