×
Ad

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಿಸಲು ಸಭಾಪತಿ ಹೊರಟ್ಟಿ ಆಗ್ರಹ

Update: 2021-11-04 20:55 IST

ಬೆಂಗಳೂರು, ನ. 4: `ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.

ಗುರುವಾರ ಈ ಕುರಿತು ಸಿಎಂಗೆ ಪತ್ರವೊಂದನ್ನು ಬರೆದಿರುವ ಅವರು, `ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸರಕಾರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕದೊಳಗಾಗಿ ಈ ಹಿಂದೆ ಸರಕಾರ ನಿಗದಿಪಡಿಸಿದ್ದ ಸಾಮಾನ್ಯ ವರ್ಗ-40 ವರ್ಷ, ಇತರೆ ಹಿಂದುಳಿದ ವರ್ಗ-43 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 45 ವರ್ಷದ ವಯೋಮಿತಿಯೊಳಗೆ ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ಎರಡು ವರ್ಷಗಳಿಂದ ಇಡೀ ಜಗತ್ತನ್ನು ಆವರಿಸಿರುವ ಮಹಾಮಾರಿ ಕೊರೋನ ನಾಗರಿಕರ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಅಲ್ಲದೆ, ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿ ಕಾರಣದಿಂದ ಸರಕಾರ ಯಾವುದೇ ನೇಮಕಾತಿ ಮಾಡಿರುವುದಿಲ್ಲ. ಇದರಿಂದ ಹಲವಾರು ಜನ ಪ್ರಾಧ್ಯಾಪಕರ ಹುದ್ದೆಯ ವಯೋಮಿತಿ ಮೀರಿದ್ದಾರೆ. ಆದುದರಿಂದ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನೇಮಕಾತಿ ವಯೋಮಿತಿಯನ್ನು ಹೆಚ್ಚಿಸಿದಂತೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಯೋಮಿತಿಯನ್ನು ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕೋವಿಡ್ ಮಹಾಮಾರಿ ರೋಗದ ಕಾರಣ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದವರೂ(ಯುಜಿಸಿ) ಸಹ ಪ್ರಾಧ್ಯಾಪಕರ ಹುದ್ದೆಗೆ ಇರುವ ಡಾಕ್ಟರೇಟ್ ಪದವಿಯನ್ನು ಪಡೆಯಬೇಕೆಂಬ ಷರತ್ತನ್ನು ಎರಡು ವರ್ಷಗಳ ಮಟ್ಟಿಗೆ ರಿಯಾಯತಿ ನೀಡಿ ಆದೇಶಿಸಿದ್ದಾರೆ. ಈಗ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ವಯೋಮಿತಿ ಸಡಿಲಿಕೆ ಮಾಡದಿದ್ದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಮೀರುತ್ತಿರುವ ಹಲವಾರು ಅಭ್ಯರ್ಥಿಗಳು ವಂಚಿತರಾಗುತ್ತಿದ್ದಾರೆ.

ಆದುದರಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಿಗದಿಪಡಿಸಿರುವ ವಯೋಮಿತಿಯನ್ನು ಎರಡು ವರ್ಷಗಳ ಸಡಿಲಿಕೆ ಮಾಡಬೇಕೆಂದು ಹೊರಟ್ಟಿಯವರು ಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಕೂಡಲೇ ವಯೋಮಿತಿ ಸಡಿಲಿಕೆಯ ಕುರಿತ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಿ ಸಹಸ್ರಾರು ನಿರುದ್ಯೋಗಿ ಯುವಜನರಿಗೆ ನ್ಯಾಯ ಒದಗಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News