ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪ: ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ನಾರಾಯಣಸ್ವಾಮಿ ಸ್ಪಷ್ಟನೆ

Update: 2021-11-08 13:15 GMT
 ಛಲವಾದಿ ನಾರಾಯಣಸ್ವಾಮಿ                     ಚಿ.ನಾ. ರಾಮು

ಬೆಂಗಳೂರು, ನ. 8: ‘ನಾನು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದೇನೆಂಬುದು ಶುದ್ಧ ಸುಳ್ಳು. ನಾನು ಪರಿಶಿಷ್ಟ ಜಾತಿಗೆ ಸೇರಿದ್ದು, ಅಪ್ಪಟ ಡಾ.ಬಿ.ಆರ್.ಅಂಬೇಡ್ಕರ್ ವಾದಿ. ನಮ್ಮ ಪಕ್ಷದ ಮುಖಂಡ ಚಿ.ನಾ. ರಾಮು ನನ್ನ ವಿರುದ್ಧ ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ' ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯ ಪಕ್ಷ ಸಂಘಟನೆಯಲ್ಲಿ ನಾನು ತೊಡಗಿಸಿಕೊಂಡಿದ್ದು, ಉನ್ನತ ಸ್ಥಾನಕ್ಕೇರುತ್ತಿದ್ದೇನೆ. ಚಿ.ನಾ.ರಾಮು ನಮ್ಮ ಪಕ್ಷದಲ್ಲೇ ಇದ್ದರೆ ಅವರು ಕೆಲಸ ಮಾಡಿ ಸೂಕ್ತ ಸ್ಥಾನಮಾನ ಪಡೆದುಕೊಳ್ಳಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ಕಪೋಲಕಲ್ಪಿತ ಆರೋಪಗಳನ್ನು ಹರಿಯಬಿಡುವುದರಿಂದ ಯಾವುದೇ ಪ್ರಯೋಜನವಿಲ್ಲ' ಎಂದು ತಿರುಗೇಟು ನೀಡಿದರು.

‘ಮತಾಂತರ ಆಗಿದ್ದರೆ ಅದನ್ನು ನಾನು ಗುಟ್ಟಾಗಿಡುವ ಅಗತ್ಯವೇ ಇಲ್ಲ. ನನ್ನ ಹೆಸರೇ ಛಲವಾದಿ ನಾರಾಯಣಸ್ವಾಮಿ. ಆ ಹೆಸರನ್ನು ನಾನೇಕೆ ಇಟ್ಟುಕೊಳ್ಳಬೇಕಿತ್ತು. ನಾರಾಯಣಸ್ವಾಮಿ ತೆರೆದ ಪುಸ್ತಕ. ಯಾರೇ ಬಂದರೂ ನೋಡಿಕೊಳ್ಳಬಹುದು. ಇಂತಹ ಆರೋಪಗಳಿಂದ ನನ್ನ ತೇಜೋವಧೆ ಮಾಡಲು ಸಾಧ್ಯವಿಲ್ಲ' ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News