ಡಿಮ್ಹಾನ್ಸ್ ಗೆ ಸೌಲಭ್ಯ ಒದಗಿಸದ ಸರಕಾರ: ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್

Update: 2021-11-08 13:23 GMT

ಬೆಂಗಳೂರು, ನ.8: ಉತ್ತರ ಕರ್ನಾಟಕ ಭಾಗದ ಜನರ ಪಾಲಿಗೆ ಪ್ರಮುಖ ಆರೋಗ್ಯ ಸಂಸ್ಥೆಯಾಗಿರುವ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ಡಿಮ್ಹಾನ್ಸ್)ಗೆ ಅಗತ್ಯ ಸೌಲಭ್ಯಗಳನ್ನು ಒದಗಿಸದ ಹಾಗೂ ಕೋರ್ಟ್ ಆದೇಶದ ಹೊರತಾಗಿಯೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಹೈಕೋರ್ಟ್ ರಾಜ್ಯ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ಡಿಮ್ಹಾನ್ಸ್ ಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನ.8ರಂದು ವಿಚಾರಣೆಗೆ ಹಾಜರಾಗಿ ಪ್ರಕರಣದ ಕುರಿತು ವಿವರಣೆ ನೀಡಬೇಕಿತ್ತು. ಆದರೆ, ಅಧಿಕಾರಿ ವಿಚಾರಣೆಗೆ ಹಾಜರಿರಲಿಲ್ಲ. ಇದಕ್ಕೆ ಸಮಜಾಯಿಷಿ ನೀಡಿದ ಸರಕಾರದ ಪರ ವಕೀಲರು ಅಧಿಕಾರಿ ಸಚಿವ ಸಂಪುಟ ಸಭೆಗೆ ತೆರಳಿರುವುದಾಗಿ ತಿಳಿಸಿದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಕೆಲಸವನ್ನೂ ಮಾಡಿಲ್ಲ. ಇತ್ತ ವಿವರಣೆ ಕೇಳಿದರೆ ಉತ್ತರಿಸಲು ಕೋರ್ಟ್‍ಗೂ ಬಂದಿಲ್ಲ. ಹಿಂದಿನ ವಿಚಾರಣೆ ವೇಳೆ ಖುದ್ದು ಹಾಜರಿರುವಂತೆ ಸೂಚಿಸಿದರೂ ಅಧಿಕಾರಿ ವಿಚಾರಣೆಗೆ ಹಾಜರಾಗಿಲ್ಲವೆಂದರೆ ಏನರ್ಥ? ಹೀಗೆ ನಡೆದುಕೊಂಡರೆ ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಅಲ್ಲದೇ, ವಿಚಾರಣೆಗೆ ಹಾಜರಾಗದಿದ್ದರೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಬೇಕಾಗುತ್ತದೆ ಎಂದಿತು.

ಮಧ್ಯಾಹ್ನದ ವೇಳೆಗೆ ವಿಚಾರಣೆಗೆ ಹಾಜರಾದ ಅಧಿಕಾರಿ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸಿದರು. ಈ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಕೋರ್ಟ್ ಆದೇಶದಂತೆ ಮುಂದಿನ ಹತ್ತು ದಿನಗಳಲ್ಲಿ ಡಿಮ್ಹಾನ್ಸ್‍ಗೆ ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡಲಾಗುವುದು. ಜತೆಗೆ ಎಂಆರ್ ಐ ಸಿಟಿ ಸ್ಕ್ಯಾನ್ ಯಂತ್ರವನ್ನು ಮೂರು ತಿಂಗಳಲ್ಲಿ ಅಳವಡಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮೂರು ತಿಂಗಳು ಯಾಕೇ ಬೇಕು. ಅಧಿಕಾರಿಯ ಸಂಬಳ ತಡೆಹಿಡಿದರೆ ಮತ್ತಷ್ಟು ಬೇಗ ಕೆಲಸ ಆಗುತ್ತದೆ ಎಂದಿತು. ಮತ್ತೆ ವಿವರಣೆ ನೀಡಿದ ಸರಕಾರದ ಪರ ವಕೀಲರು ಎಂಆರ್‍ಐ ಸ್ಯಾನಿಂಗ್ ಯಂತ್ರವನ್ನು ಆಮದು ಮಾಡಿಕೊಳ್ಳಬೇಕಿದೆ. ಅದು ಬರಲಿಕ್ಕೇ ಎರಡು ತಿಂಗಳು ಬೇಕಾಗಬಹುದು. ನಂತರ ಅದನ್ನು ಅಳವಡಿಸಲು ಒಂದು ತಿಂಗಳು ಸೇರಿ ಮೂರು ತಿಂಗಳ ಕಾಲಾವಕಾಶ ಅಗತ್ಯವಿದ್ದು, ಅಷ್ಟು ಸಮಯಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠ, ಅನುಪಾಲನಾ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News