‘ಜನತಾ ಪತ್ರಿಕೆ’ ಜೆಡಿಎಸ್ ಪಕ್ಷದ ಮುಖವಾಣಿ ಅಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2021-11-08 13:56 GMT

ಬೆಂಗಳೂರು, ನ.8: ಜನತಾ ಪತ್ರಿಕೆ ಜೆಡಿಎಸ್ ಪಕ್ಷದ ಮುಖವಾಣಿ ಅಲ್ಲ. ಸಮಸ್ತ ಕನ್ನಡಿಗರ ಮುಖವಾಣಿ. ಕೃಷಿ ಕಾರ್ಮಿಕರು ಮತ್ತು ಶ್ರಮಿಕರ ಮುಖವಾಣಿ ಆಗಿ ಕೆಲಸ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸೋಮವಾರ ನಗರದಲ್ಲಿರುವ ಜೆಡಿಎಸ್ ರಾಜ್ಯ ಕಚೇರಿ ‘ಜೆಪಿ ಭವನ’ದಲ್ಲಿ ನಡೆದ ಜನತಾ ಪರ್ವ 1.0ದ ಎರಡನೇ ಹಂತದ ಸಂಘಟನಾ ಕಾರ್ಯಗಾರ ‘ಜನತಾ ಸಂಗಮ’ ಕಾರ್ಯಕ್ರಮದಲ್ಲಿ ನಡೆದ ‘ಜನತಾ ಪತ್ರಿಕೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಇಡೀ ರಾಜ್ಯದ, ದೇಶದ ಬೆಳವಣಿಗೆಗಳ ಬಗ್ಗೆ ಈ ಪತ್ರಿಕೆಯಲ್ಲಿ ವಿಶ್ಲೇಷಣೆ ಇರುತ್ತದೆ. ನಾಡಿನ ಹಿತದೃಷ್ಟಿಯಿಂದ ಜನರಿಗೆ ಬದ್ಧವಾಗಿ ಪತ್ರಿಕೆಯನ್ನು ರೂಪಿಸಲಾಗುವುದು. ಬೇರೆ ರಾಜ್ಯದಲ್ಲಿ ಹಲವಾರು ಪಕ್ಷಗಳ ಅವರದ್ದೇ ಆದ ಪಕ್ಷದ ಕಾರ್ಯಕ್ರಮಗಳನ್ನು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಅವರದ್ದೇ ಆದ ಪತ್ರಿಕೆಗಳನ್ನು ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿಯ ಪತ್ರಿಕೆ ಲೋಕಾರ್ಪಣೆ ಆಗುತ್ತಿದೆ. ಯಾವುದೇ ಕಾರಣಕ್ಕೂ  ‘ಜನತಾ ಪತ್ರಿಕೆ’ ಪಕ್ಷದ ಮುಖವಾಣಿ ಆಗೋದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಎಚ್.ಡಿ.ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದಾಗ ಪಿ.ರಾಮಯ್ಯ ಅವರು ವರದಿಗಾರರಾಗಿದ್ದರು. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದವರು. ಅಂತವರಿಂದ ಪತ್ರಿಕೆ ಲೋಕಾರ್ಪಣೆ ಆಗಿದ್ದು ಸಂತಸ ಉಂಟು ಮಾಡಿದೆ ಎಂದು ಅವರು ಹೇಳಿದರು.

ಗೌಡರ ಶುಭ ಹಾರೈಕೆ: ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ರಿಕೆಯನ್ನು ಹೊರತರುತ್ತಿರುವ ವಿಚಾರ ಒಳ್ಳೆಯದೇ. ಈ ಪತ್ರಿಕೆಯಿಂದ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನಮ್ಮ ಪಕ್ಷದಲ್ಲಿ ಸಮರ್ಥ ನಿಷ್ಠೆ ಇರುವ ನಾಯಕರು, ಕಾರ್ಯಕರ್ತರು ಇದ್ದಾರೆ. ಅವರೆಲ್ಲರ ಮನೆ ಬಾಗಿಲಿಗೆ ಈ ಪತ್ರಿಕೆ ಮುಟ್ಟಬೇಕು. ಪತ್ರಿಕೆ ಚೆನ್ನಾಗಿ ಬೆಳೆಯುತ್ತದೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದರು.

ಜನರಿಗೆ ಮುಟ್ಟಲಿ: ಜನತಾ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಪಿ.ರಾಮಯ್ಯ, ಇದು ಪಕ್ಷದ ಮುಖವಾಣಿಯಲ್ಲ. ಜನ ಸಾಮಾನ್ಯರ ಪತ್ರಿಕೆ ಆಗಿ ಮೂಡಿಬರಲಿದೆ. ಪತ್ರಿಕೆ ಜನ ಸಾಮಾನ್ಯರಿಗೆ ತಲುಪಬೇಕು. ಇದು ಪಾರ್ಟಿಯ ಮುಖವಾಣಿಯಲ್ಲ ಎಂದು ನನಗೆ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾಗಿ ನಾನು ಇಂದು ಈ ಪತ್ರಿಕೆ ಲೋಕಾರ್ಪಣೆಗೆ ಬಂದೆ. ಈಗ ಪತ್ರಿಕೆ ನಡೆಸೋದು ಅಷ್ಟು ಸುಲಭದ ಹಾದಿಯಲ್ಲ. ಎಲ್ಲವನ್ನೂ ದಾಟಿ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದರು.

ಎರಡನೇ ಹಂತದ ಕಾರ್ಯಾಗಾರ: ಈಗಾಗಲೇ ಬಿಡದಿಯಲ್ಲಿ ಏಳು ದಿನಗಳ ಕಾರ್ಯಾಗಾರವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಇಂದಿನಿಂದ ಎಂಟು ದಿನಗಳ ಕಾರ್ಯಾಗಾರ ನಡೆಯಲಿದೆ. ಇಂದಿನಿಂದ ನಿರಂತರವಾಗಿ ಪದಾಧಿಕಾರಿಗಳ ಸಭೆಗಳು ಆರಂಭವಾಗುತ್ತಿವೆ. ಪಕ್ಷ ಸಂಘಟನೆ ಹಾಗೂ ಮುಂದಿನ ಎಲ್ಲಾ ಚುನಾವಣೆಗಳಿಗೆ ಸಿದ್ಧತೆ ನಡೆಸಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ನಾಯಕರು ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News