×
Ad

ಅಭಿವೃದ್ಧಿ ಯೋಜನೆಗಳಲ್ಲೂ ಜಾತಿ ತುರುಕಿದ ಕಾಂಗ್ರೆಸ್: ಸಿ.ಟಿ.ರವಿ ಆರೋಪ

Update: 2021-11-09 17:09 IST

ಬೆಂಗಳೂರು, ನ. 9: ‘ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಯೋಜನೆಯಲ್ಲಿ ಜಾತಿಯನ್ನು ತುರುಕಿಲ್ಲ. ಕಾಂಗ್ರೆಸ್ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಜಾತಿಯನ್ನು ತುರುಕಿದರೆ, ಅದನ್ನು ಪರಾಕಾಷ್ಠೆಗೆ ಒಯ್ದವರು ಸಿದ್ದರಾಮಯ್ಯ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೂರಿದ್ದಾರೆ.

ಮಂಗಳವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯಾರು ಕೊಳಕು ಎಂಬುದನ್ನು ಅಂತರಂಗದ ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಯಾರು ಎಲ್ಲರಿಗೂ ಅವಕಾಶ ನೀಡಿದ್ದಾರೋ ಅವರನ್ನು ಕೊಳಕರು ಎನ್ನುವವರ ಮನಸ್ಥಿತಿಯೇ ಕೊಳಕಾಗಿದೆ. ಯಾರ ಕನ್ನಡಕ ಕೊಳಕಾಗಿರುತ್ತೋ ಅವರು ನೋಡೋದೆಲ್ಲ ಕೊಳಕಾಗಿಯೇ ಕಾಣುತ್ತದೆ ಎಂದು ಟೀಕಿಸಿದರು. 

ನಾವು ಜಾತಿ ರಾಜಕಾರಣ ಮಾಡಿದ ಕಾರಣಕ್ಕಾಗಿಯೇ ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆದುದಲ್ಲವೇ? ನಮ್ಮ ಜಾತಿ ರಾಜಕಾರಣಕ್ಕಾಗಿಯೇ ಕಾಲಿಗೆ ಚಪ್ಪಲಿಯೂ ಹಾಕದ ಹಾಜಬ್ಬ ಮತ್ತು ತುಳಸಿ ಗೌಡರಿಗೆ ಪದ್ಮ ಪ್ರಶಸ್ತಿ ಸಿಕ್ಕಿದ್ದಲ್ಲವೇ? ಎಂದು ವ್ಯಂಗ್ಯವಾಗಿ ಕೇಳಿದ ಅವರು, ಇವರ ಕಾಲದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಬಹಳಷ್ಟು ಜನ ಬಾಟಲಿಮೇಟ್‌ಗಳಿಗೆ ಪ್ರಶಸ್ತಿ ಸಿಗುತ್ತಿತ್ತು. ಈಗ ತಳಮಟ್ಟದವರಿಗೆ ಸಿಗುತ್ತಿದೆ. ನಾವು ಕೊಳಕು ಮನಸ್ಸಿನವರು. ಅದಕ್ಕಾಗಿಯೇ ತಳಮಟ್ಟದವರನ್ನು ಹುಡುಕಿ ಪದ್ಮ ಪ್ರಶಸ್ತಿ ಕೊಡುತ್ತಿದ್ದೇವೆ ಎಂದು ರವಿ ಹೇಳಿದರು.

ಇವರು ಜಾತಿವಾದಿಗಳಲ್ಲ. ಅದಕ್ಕಾಗಿಯೇ ಶಾದಿ ಭಾಗ್ಯ ಒಂದು ಕೋಮಿಗೆ ಮಾತ್ರ ಕೊಟ್ಟಿದ್ದಾರೆ. ಇವರು ಜಾತಿವಾದಿಗಳಲ್ಲ ಹಾಗೂ ಇವರು ಸ್ವಚ್ಛಜನ, ಅದಕ್ಕಾಗಿಯೇ ಜಾತಿ ಹೆಸರಿನಲ್ಲಿ ಮಕ್ಕಳ ಪ್ರವಾಸ ಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ಬೆಂಗಳೂರಿಗೆ ಜಾರಿಯಾಗುವ ಯೋಜನೆ ಎಂದರೆ ಅಲ್ಲಿ ಕನ್ನಡಿಗರು ಮಾತ್ರ ಇದ್ದಾರಾ? ಎಲ್ಲ ಜನಾಂಗದವರು ಇಲ್ಲವೇ? ತಮಿಳು, ತೆಲುಗು, ಹಿಂದಿ ಸೇರಿ ಎಲ್ಲ ಭಾಷೆಯವರೂ ಇದ್ದಾರೆ. ಚೆನ್ನೈ ಕುಡಿಯುವ ನೀರಿನ ಯೋಜನೆ ಎಂದರೆ ಅಲ್ಲಿ ಎಲ್ಲ ಭಾಷೆಯವರೂ ಇಲ್ಲವೇ? ರಾಜ್ಯ ಸರಕಾರ ತೆಗೆದುಕೊಳ್ಳುವ ನಿರ್ಧಾರದ ಜೊತೆ ಬಿಜೆಪಿ ಇದೆ. ಒಂದು ರಾಷ್ಟ್ರೀಯ ಪಕ್ಷವಾಗಿ ಎಲ್ಲ ರಾಜ್ಯಗಳ ರೈತರನ್ನು ಸಮಾನವಾಗಿ ನೋಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಇಲ್ಲೊಂದು, ತಮಿಳುನಾಡಿನಲ್ಲಿ ಇನ್ನೊಂದು ನಿಲುವು ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ಸಿಗರ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಎತ್ತಿನಹೊಳೆ ನೀರು ಒಂದು ವರ್ಷದೊಳಗೆ ಚಿಕ್ಕಬಳ್ಳಾಪುರಕ್ಕೆ ಬರುತ್ತದೆ ಎಂದರು. ಬಂದಿದೆಯೇ? ಎಲ್ಲಿ ಹೋಗಿದೆ? ಬದ್ಧತೆ ಇಲ್ಲದವರು ಪಾದಯಾತ್ರೆ ಮಾಡಿದರೇನು? ತಲೆ ಕೆಳಗಾಗಿ ನಿಂತರೇನು? ನಮ್ಮ ಸಿಎಂ ಯೋಜನೆ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ನುಡಿದರು.

ಕಾಂಗ್ರೆಸ್‌ಗೆ ಯಾರ ಮೇಲೆ ನಂಬಿಕೆ ಇದೆ? ನ್ಯಾಯಾಂಗದ ಮೇಲೆ ವಿಶ್ವಾಸವಿದ್ದರೆ ಅವರಿಗೆ ಆಧಾರಗಳನ್ನು ನೀಡಲಿ. ಸಿಬಿಐ ಬಗ್ಗೆ ನಂಬಿಕೆ ಇದ್ದರೆ ಅವರಿಗೆ ಆಧಾರ ಕೊಡಲಿ ಅಥವಾ ಪೊಲೀಸರ ಕುರಿತು ವಿಶ್ವಾಸವಿದ್ದಲ್ಲಿ ಅವರಿಗೆ ಸಾಕ್ಷ್ಯಾಧಾರ ಕೊಡಲಿ. ಶ್ರೀಕಿಯನ್ನು ಬಿಜೆಪಿ ಸರಕಾರ ಬಂಧಿಸಿದ್ದಲ್ಲವೇ? ಅದಕ್ಕೂ ಮೊದಲು ಯಾರ ಜೊತೆ ಶ್ರೀಕಿ ಸಂಬಂಧ ಇತ್ತು? ಮಲ್ಯ ಟವರ್‌ನಲ್ಲಿ ಯಾರ ಜೊತೆ ಆತ ಪಾರ್ಟಿ ಮಾಡ್ತ ಕುಳಿತಿದ್ದ? ಬಿಜೆಪಿ ಎಂಎಲ್‌ಎ ಮಗನ ಜೊತೆಗಾ? ಕಾಂಗ್ರೆಸ್ ಶಾಸಕನ ಮಗನ ಜೊತೆಗಾ? ಎಂದು ತಿಳಿಸಲಿ ಎಂದು ರವಿ ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಕೇವಲ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಸರಕಾರ ತನಿಖೆ ನಡೆಸುತ್ತಿದೆ. ಇಷ್ಟು ಮಾಡಿದ ಮೇಲೂ ತೃಪ್ತಿ ಇಲ್ಲದಿದ್ದರೆ ಆಧಾರವನ್ನು ನಂಬಿಕೆ ಇರುವವರಿಗೆ ನೀಡಲಿ. ಇಟಲಿ ಮೇಲೆ ನಂಬಿಕೆ ಇದ್ದರೆ ಇಟಲಿಗೆ ಹೋಗಿ ಕೊಡಲಿ. ಮಾಜಿ ಸಿಎಂವೊಬ್ಬರ ಮಗನ ಸಂಬಂಧ ಇದೆ ಎನ್ನಬಹುದು. ಆಗ ಎಲ್ಲ ಮಾಜಿ ಸಿಎಂಗಳೂ ಬೆನ್ನು ಮುಟ್ಟಿ ನೋಡಿಕೊಳ್ಳುತ್ತಾರೆ. ಜವಾಬ್ದಾರಿ ಇರುವವರು ಆರೋಪ ಮಾಡುವುದಾದರೆ ಆಧಾರ ಇಡಲಿ ಎಂದು ಸಿ.ಟಿ.ರವಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News