ನೇತ್ರದಾನ ಜನಾಂದೋಲನ ಆಗಬೇಕು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2021-11-10 04:16 GMT
Editor : ✍️ Anon Suf

ಬೆಂಗಳೂರು, ನ.9: ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಿ ಜನಾಂದೋಲನವಾಗುವಂತೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸೋಮವಾರ ಚಾಮರಾಜಪೇಟೆಯಲ್ಲಿರುವ ಮಿಂಟೋ ಕಣ್ಣಿನ ಆಸ್ಪತ್ರೆಯ 125ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್‌ಕುಮಾರ್ ನೇತ್ರದಾನ ಮಾಡಿ ನಾಲ್ಕು ಜನರಿಗೆ ದೃಷ್ಟಿ ನೀಡಿದ್ದಾರೆ. ತಂತ್ರಜ್ಞಾನ ವಿಶಿಷ್ಟವಾಗಿ ಬೆಳೆದಿರುವುದರಿಂದ ಒಬ್ಬರು ನಾಲ್ಕು ಜನರಿಗೆ ದೃಷ್ಟಿ ನೀಡಲು ಸಾಧ್ಯವಾಗುತ್ತದೆ ಎಂದರು.

ದೇಶದಲ್ಲಿ 3-4 ಕೋಟಿ ಜನರಿಗೆ ಅಂಧತ್ವ ಇದೆ. ಆದುದರಿಂದ, ದಾನಿಗಳ ಸಂಖ್ಯೆ ಹೆಚ್ಚಬೇಕಿದೆ. ಮರಣ ಹೊಂದಿದ ನಂತರವೂ ನಾಲ್ಕು ಜನರಿಗೆ ದೃಷ್ಟಿ ನೀಡಿ ಅವರಿಗೆ ಜಗತ್ತು ನೋಡಲು ಅವಕಾಶ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ನಾನು ಕೂಡ ಕಳೆದ ವರ್ಷವೇ ನೇತ್ರದಾನ ಮಾಡಲು ಪ್ರತಿಜ್ಞೆ ಮಾಡಿದ್ದೇನೆ. ಇದನ್ನು ಆಂದೋಲನದಂತೆ ನಡೆಸಿ ನೇತ್ರದಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.

ಕೋವಿಡ್ ಸಮಯದಲ್ಲಿ ಮಿಂಟೋ, ವಿಕ್ಟೋರಿಯಾ ಆಸ್ಪತ್ರೆಯನ್ನು ಮೀಸಲಿಡಲಾಗಿತ್ತು. ಆದರೆ ಈಗ ಎಲ್ಲ ಬಗೆಯ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಧೈರ್ಯವಾಗಿ ಬಂದು ಇತರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದು. ಅನೇಕ ವೈದ್ಯರು, ಶುಶ್ರೂಷಕರು, ವೈದ್ಯಕೀಯೇತರ ಸಿಬ್ಬಂದಿಯ ಶ್ರಮದಿಂದಾಗಿ ಮಿಂಟೋ ಕಣ್ಣಾಸ್ಪತ್ರೆಯು 125 ನೇ ವರ್ಷಕ್ಕೆ ಕಾಲಿಟ್ಟಿದೆ. ಇಂತಹ ಸಂಸ್ಥೆ ಇರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.

1896 ರಲ್ಲಿ ಡಿಸ್ಪೆನ್ಸರಿಯಾಗಿ ಆರಂಭವಾದ ಸಂಸ್ಥೆ 125 ವರ್ಷದವರೆಗೂ ಸೇವೆ ನೀಡಿದೆ. ಪ್ಲೇಗ್‌ನಿಂದ ಆರಂಭವಾಗಿ ಇತ್ತೀಚೆಗೆ ಕೋವಿಡ್ ತಡೆಗಟ್ಟುವವರೆಗೂ ಈ ಸಂಸ್ಥೆ ಕಾರ್ಯನಿರ್ವಹಿಸಿದೆ. ಇಂದು ಒಪಿಡಿಗೆ ಸುಮಾರು 800 ರೋಗಿಗಳು ಬರುತ್ತಿದ್ದಾರೆ. ವರ್ಷಕ್ಕೆ ಸುಮಾರು 10 ಸಾವಿರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೋವಿಡ್ ಲಸಿಕೆ: ರಾಜ್ಯದಲ್ಲಿ ಕೊರೋನ ಲಸಿಕೆಯ ಮೊದಲ ಡೋಸ್ ಶೇ.89 ಹಾಗೂ ಎರಡನೇ ಡೋಸ್ ಶೇ.48 ರಷ್ಟು ಪ್ರಗತಿ ಕಂಡಿದೆ. ಎರಡನೇ ಡೋಸ್ ಪಡೆಯಲು ಜನರು ಉದಾಸೀನ ಮಾಡಬಾರದು. ಕೋವಿಡ್ ವಿರುದ್ಧ ಸಂಪೂರ್ಣ ರೋಗ ನಿರೋಧಕ ಶಕ್ತಿ ಬರಲು ಎರಡೂ ಡೋಸ್ ಪಡೆಯಬೇಕು. ಕೋವಿಡ್ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಎಚ್ಚರವಾಗಿರಬೇಕು ಎಂದು ಸುಧಾಕರ್ ತಿಳಿಸಿದರು.

ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಮಕ್ಕಳ ಲಸಿಕೆ ನೀಡಲಿದೆ. ಮಕ್ಕಳಲ್ಲಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು. ಆರೋಗ್ಯ ನಂದನ ಕಾರ್ಯಕ್ರಮದಡಿ ಈಗಾಗಲೇ ಆರೋಗ್ಯ ಶಿಬಿರ ಮಾಡಿ ಪಟ್ಟಿ ಮಾಡಲಾಗಿದೆ. ಮುಂದಿನ ವಾರ ಲಸಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ಆರೂಮುಕ್ಕಾಲು ಕೋಟಿ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ. ಲಸಿಕೆ ವಿತರಣೆ ಈಗ ಕಷ್ಟದ ವಿಚಾರವಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ✍️ Anon Suf

contributor

Editor - ✍️ Anon Suf

contributor

Similar News