ಕಾಂಗ್ರೆಸ್ನವರು ತಡವಾಗಿ ಡಿಪಿಆರ್ ಮಾಡಿದ್ದಾರೆಂಬ ಮುಖ್ಯಮಂತ್ರಿ ಹೇಳಿಕೆ ಸರಿಯಲ್ಲ: ಸಿದ್ದರಾಮಯ್ಯ
ಮೈಸೂರು,ನ.9: ಮೇಕೆದಾಟು ಯೋಜನೆಯನ್ನು ಕೇಂದ್ರದಿಂದ ಒಪ್ಪಿಗೆ ಪಡೆದು ತುರ್ತಾಗಿ ಆರಂಭಿಸಬೇಕು. ಇದಕ್ಕಾಗಿ ನಾವು ಪಾದಯಾತ್ರೆ ಮಾಡುತ್ತೇವೆ. ಕಾಂಗ್ರೆಸ್ನವರು ತಡವಾಗಿ ಡಿಪಿಆರ್ ಮಾಡಿದ್ದಾರೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದ ಟಿ.ಕೆ.ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ನವರು ತಡವಾಗಿ ಡಿಪಿಆರ್ ಮಾಡಿದ್ದಾರೆ ಎಂಬ ಸಿಎಂ ಹೇಳಿಕೆ ಸರಿಯಲ್ಲ, ಡಿಪಿಆರ್ ಮಾಡುವುದು ತಡವಾಗಿತ್ತು. ಆದರು, ನಾವು ಡಿಪಿಆರ್ ಮಾಡಿ ಮುಗಿಸಿದ್ದೇವೆ. ಇವರು ಕಾಮಗಾರಿ ಆರಂಭಿಸಲು ವಿಳಂಬ ಮಾಡುತ್ತಿದ್ದಾರೆ. ಈಗ ಕಾಂಗ್ರೆಸ್ ನವರು ತಡವಾಗಿ ಡಿಪಿಆರ್ ಮಾಡಿದ್ದಾರೆ ಎಂಬ ಸಿಎಂ ಹೇಳಿಕೆ ಸರಿಯಲ್ಲ ಎಂದು ಹೇಳಿದರು.
ನಾವು ಸರ್ಕಾರದ ಮೇಲೆ ಒತ್ತಡ ಹೇರದಿದ್ದದರೆ, ಇವರು ಕೆಲಸ ಆರಂಭಿಸುವುದಿಲ್ಲ. ಕೋರ್ಟ್ ಅಡ್ಡಿ ಇದೆ ಎಂಬುದೆಲ್ಲ ಸುಳ್ಳು. ಕೇಂದ್ರದಿಂದ ಒಪ್ಪಿಗೆ ಪಡೆದು ತುರ್ತಾಗಿ ಯೋಜನೆ ಆರಂಭಿಸಬೇಕು. ಇದಕ್ಕಾಗಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಸದ್ದು ಮಾಡುತ್ತಿರೋ ಬಿಟ್ ಕಾಯಿನ್ ವಿಚಾರವನ್ನು ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ಆಡಳಿತ ವಿರೋಧ ಪಕ್ಷದವರು ಯಾರೆ ಇರಲಿ ನೀವು ಮೊದಲು ತನಿಖೆ ಆರಂಭಿಸಿ. ಚುರುಕಾಗಿ ಯಾಕೆ ತನಿಖೆ ಆರಂಭಿಸುತ್ತಿಲ್ಲ. ಸರ್ಕಾರ ನನ್ನ ಬಳಿಯೇ ಸಾಕ್ಷಿ ಕೇಳುತ್ತಿದೆ. ಅದರ ಸಾಕ್ಷಿ ಹುಡುಕಬೇಕಾದವರು, ತನಿಖೆ ಮಾಡಬೇಕಾದವರು ತನಿಖಾಧಿಕಾರಿಗಳು. ಆ ಕೆಲಸವನ್ನು ಸರ್ಕಾರ ಮಾಡಿಸಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನನ್ನ ಬಳಿ ಇರುವ ಮಾಹಿತಿಯನ್ನು ಅಗತ್ಯವಿದ್ದರೆ ಕೋರ್ಟ್ಗೆ ಕೊಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಇನ್ನು ಸಾಕ್ಷಿಗಳು ಬೇಕಿವೆ. ನಾನು ಸಾಕ್ಷಿಗಳ ಸಂಗ್ರಹದಲ್ಲಿ ಇದ್ದೇನೆ. ನಾನು ನನ್ನ ಬಳಿ ಇರುವ ವಿಚಾರವನ್ನ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಕೆ.ಮರೀಗೌಡ, ರವಿಶಂಕರ್, ಹಿನಕಲ್ ಪ್ರಕಾಶ್, ಶಿವಮಾದು ಸೇರಿದಂತೆ ಹಲವರು ಉಪಸ್ಥಿತರಿದ್ದರು.