×
Ad

ಒಂದೇ ವೇದಿಕೆ ಹಂಚಿಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಟಿ. ದೇವೇಗೌಡ

Update: 2021-11-09 22:11 IST

ಮೈಸೂರು,ನ.9: ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಿರೋಧಿಗಳಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜ.ಟಿ.ದೇವೇಗೌಡ ಒಂದೇ ವೇದಿಕೆಯಲ್ಲಿ ಕುರ್ಚಿ ಹಂಚಿಕೊಳ್ಳವ ಮೂಲಕ ಒಬ್ಬರಿಗೊಬ್ಬರು ಗುಣಗಾನ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಹಿನಕಲ್‌ನಲ್ಲಿ ನಡೆದ ಅಂಬೇಡ್ಕರ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಈ ಇಬ್ಬರು ನಾಯಕರು ಭಾಗಿಯಾಗಿದ್ದಾರೆ. 

ಮೈಸೂರಿನ ಕೇರ್ಗಳ್ಳಿ ಹೊಂಬಾಳಮ್ಮ ಸಿದ್ದರಾಮೇಶ್ವರ ಸಮುದಾಯ ಭವನ ಉದ್ಘಾಟನೆಯಲ್ಲಿ ಕೂಡ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡರು ವೇದಿಕೆ ಹಂಚಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಕ್ಷೇತ್ರಕ್ಕೆ ಬರೋದಕ್ಕೆ ತುಂಬಾ ಬೇಸರ ಆಗಿತ್ತು. ಹಲವು ದಿನಗಳ ಬಳಿಕ ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದೇನೆ. ಚುನಾವಣೆಯಲ್ಲಿ ನಾನು ಜಿ.ಟಿ. ದೇವೇಗೌಡ ಪರಸ್ಪರ ಎದುರಾಗಿದ್ದೆವು. ಚುನಾವಣೆಯಲ್ಲಿ ನನ್ನನ್ನೇ ಸೋಲಿಸಿದ್ದ ಗಿರಾಕಿ ಈತ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸೋತ ಬಳಿಕ ಇಬ್ಬರೂ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುವ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಆದರೆ ಜನರು ಕರೆದ ಮೇಲೆ ಒಂದೇ ವೇದಿಕೆಗೆ ಬರಲೇ ಬೇಕು. ಜಿ.ಟಿ. ದೇವೇಗೌಡ ಕಾಂಗ್ರೆಸ್ ಗೆ ಬಂದಿದ್ದಾನೆ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಜಿ.ಟಿ. ದೇವೇಗೌಡಗೆ ಕಾಂಗ್ರೆಸ್ ಬರೋದಿಕ್ಕೆ ಮನಸ್ಸು ಇದೆ. ಆದರೆ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅಲ್ಲಿಯೇ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ವರ್ಷಗಳ ಇತಿಹಾಸ ಇದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬರೋದಾದರೆ ಬರಬಹುದು. ಯಾರೇ ಬಂದರು ಪಕ್ಷಕ್ಕೆ ಸ್ವಾಗತ ಎಂದು ಸಿದ್ದರಾಮಯ್ಯ ಅವರು ಜಿ.ಟಿ.ದೇವೇಗೌಡರಿಗೆ ಕಾಂಗ್ರೆಸ್ ಸೇರಲು ಬಹಿರಂಗವಾಗಿಯೇ ಆಹ್ವಾನ ನೀಡಿದರು.

ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ್ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್, ಕಾಂಗ್ರೆಸ್ ಮುಖಂಡರುಗಳಾದ ಕೆ.ಮರೀಗೌಡ, ರಾಕೇಶ್ ಪಾಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News