ಬಿಟ್ ಕಾಯಿನ್ ಹಗರಣ; ತನಿಖೆ ಪಾರದರ್ಶಕವಾಗಿ ನಡೆಯಲಿ: ದಿನೇಶ್ ಗುಂಡೂರಾವ್ ಆಗ್ರಹ
Update: 2021-11-12 19:15 IST
ಬೆಂಗಳೂರು, ನ. 12: `ಬಿಟ್ ಕಾಯಿನ್ ಹಗರಣದ ಆರೋಪ ನಿರ್ಲಕ್ಷಿಸುವುದು ವ್ಯವಸ್ಥಿತ ತಂತ್ರ. ಈ ಹಗರಣ ಈಗಾಗಲೇ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ನಾಯಕರು ಪಾರದರ್ಶಕ ತನಿಖೆ ನಡೆಸಲು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಆಗ್ರಹಿಸಬೇಕು. ಅದರ ಬದಲು ನಿರ್ಲಕ್ಷಿಸಿ ಎಂದು ಸಲಹೆ ಕೊಟ್ಟರೆ ತನಿಖೆ ಹಳ್ಳ ಹಿಡಿದಂತೆ. ಹಗರಣದ ತನಿಖೆ ಪಾರದರ್ಶಕವಾಗಿ ನಡೆಯಲಿ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಕೇಂದ್ರ ಹಾಗೂ ರಾಜ್ಯದ ತನಿಖಾ ಸಂಸ್ಥೆಗಳು ನಡೆಸುತ್ತಿವೆ. ಈ ಹಗರಣದಲ್ಲಿ ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿದೆ. ಹೀಗಿರುವಾಗ ಆರೋಪ ನಿರ್ಲಕ್ಷಿಸಿದರೆ ಹಗರಣ ಮುಚ್ಚಿ ಹಾಕುವ ಯತ್ನವಲ್ಲವೇ? ಪ್ರಧಾನಿಯಾದವರು ಸರಿಯಾದ ತನಿಖೆ ನಡೆಸಿ ಆರೋಪಮುಕ್ತರಾಗಿ ಎಂಬ ಸಲಹೆ ನೀಡಬೇಕು. ನಿರ್ಲಕ್ಷಿಸಿ ಎಂದರೆ ಅರ್ಥವೇನು?' ಎಂದು ಪ್ರಶ್ನಿಸಿದ್ದಾರೆ.