ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಜ.16ಕ್ಕೆ `ಪುನೀತ್ ನಮನ'
ಬೆಂಗಳೂರು, ನ. 12: ಚಿತ್ರನಟ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನ.16ರಂದು ನಗರದ ಅರಮನೆ ಮೈದಾನದಲ್ಲಿ `ಪುನೀತ ನಮನ' ಕಾರ್ಯಕ್ರಮ ಏರ್ಪಡಿಸಿದ್ದು, ಪಾಸ್ ಇದ್ದವರು ಅಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಟ ಪುನೀತ್ ನಿಧನರಾದ ಮರುದಿನವೇ ಸಿನಿಮಾ ಕ್ಷೇತ್ರದ ಎಲ್ಲರ ಒಕ್ಕೊರಲ ಅಭಿಪ್ರಾಯದಂತೆ ರೂಪಿಸಲಾದ ಕಾರ್ಯಕ್ರಮ ಇದು. ಹೀಗಾಗಿ ಎಲ್ಲರೂ ಭಾಗವಹಿಸಲಿದ್ದಾರೆ. ಆದರೆ, ಸ್ಥಳಾವಕಾಶದ ಇತಿಮಿತಿ ಒಂದೂವರೆ ಸಾವಿರ ಮಂದಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ' ಎಂದು ಮಾಹಿತಿ ನೀಡಿದರು.
ಡಾ.ರಾಜ್ ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪಾಸ್ ಹಾಗೂ ಸಂಘಟಕರು ನೀಡಿದ ಗುರುತಿನಚೀಟಿ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ. ಹೀಗಾಗಿ ಅಭಿಮಾನಿಗಳು ತಾವಿರುವಲ್ಲಿಯೇ ನೇರ ಪ್ರಸಾರ ವೀಕ್ಷಿಸಿ ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಸಾ.ರಾ.ಗೋವಿಂದು ಹಾಜರಿದ್ದರು.