ಬಿಟ್ ಕಾಯಿನ್ ಹಗರಣ; ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಮುಜುಗರ ಆಗಿದೆ ಎಂದ ಎಚ್.ಡಿ.ಕುಮಾರಸ್ವಾಮಿ

Update: 2021-11-13 15:25 GMT

ಬೆಂಗಳೂರು, ನ.13: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡದೇ ಇದ್ದಿದ್ದರೆ ಬಹುಶಃ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಅವರು ಮೌನವಾಗಿದ್ದಾರೆ ಎಂದರೆ ಹಗರಣವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಅಮೆರಿಕದಲ್ಲಿ ಅವರಿಗೆ ಆಗಿರುವ ಮುಜುಗರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶನಿವಾರ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಜನತಾ ಪರ್ವ 1.0 ಎರಡನೇ ಹಂತದ ಕಾರ್ಯಾಗಾರ ‘ಜನತಾ ಸಂಗಮ'ದ ವೇಳೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಬಿಟ್ ಕಾಯಿನ್ ಹಗರಣದ ವಿವರ ನೀಡಿದ್ದಾರೆ. ಅಲ್ಲಿ ಅವರಿಗೆ ಕಸಿವಿಸಿ ಆಗಿರುವುದು ನಿಜ. ಹೀಗಾಗಿ ಪ್ರಧಾನಿ ಮೌನವಾಗಿದ್ದರೂ ಇಡೀ ಹಗರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಬಿಟ್ ಕಾಯನ್ ಪ್ರಕರಣ ಕಳೆದ 15 ದಿನಗಳಿಂದ ಸದ್ದು ಮಾಡುತ್ತಿದೆ. ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನಡೆಯುತ್ತಿರುವುದನ್ನು ಗಮನಿಸುತ್ತಿದ್ದೇನೆ. ಸೂಕ್ಷ್ಮ ವಿಚಾರಗಳ ಬಗ್ಗೆ ಜವಾಬ್ದಾರಿಯುತವಾಗಿ ಮಾತನಾಡದಂತೆ ನಾಯಕರಿಗೆ ಹೇಳಲು ಬಯಸುತ್ತೇನೆ. ನಾನು ಹಾಗೆ ಮಾತನಾಡಲು ಬಯಸುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

58,000 ಕೋಟಿ ರೂ. ಅವ್ಯವಹಾರ ಆಗಿದೆ ಅಂತ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ನನ್ನಲ್ಲಿ ಇರುವ ಮಾಹಿತಿ ಪ್ರಕಾರ ಶ್ರೀಕಿ ಎಂಬ ಯುವಕನನ್ನು ಎಂಟರಿಂದ ಹತ್ತು ಬಾರಿ ಬಂಧನ ಮಾಡಲಾಗಿದೆ. 2020ರ ನವೆಂಬರ್‍ನಿಂದ 8-10 ಬಾರಿ ಪೊಲೀಸರು ಕರೆದುಕೊಂಡು ಬಂಧನ ಮಾಡಿ ಬಿಡುಗಡೆ ಮಾಡಿದ್ದು ಆಗಿದೆ. ಇನ್ನು ಹದಿನೈದು ದಿನ ಸಮಯ ಕೊಡಿ, ಈ ಹಗರಣದ ಬಗ್ಗೆ ನಾನೇ ಪೂರ್ಣ ಮಾಹಿತಿ ಕೊಡುತ್ತೇನೆ ಎಂದು ಅವರು ಹೇಳಿದರು.

ಕಾಂಗ್ರೆಸ್ ತನಿಖೆ ಹಾದಿ ತಪ್ಪಿಸುವುದು ಬೇಡ: ನಾನು ಈಗಾಗಲೇ ಜನಧನ್ ಖಾತೆಗಳಿಂದ ಹಣ ಎತ್ತಿರುವುದನ್ನು ಕೂಡ ಹೇಳಿದ್ದೇನೆ. ಈ ಬಗ್ಗೆ ಕೂಡ ಕೇಂದ್ರ ಗಂಭೀರವಾಗಿದೆ ಎನ್ನುವುದು ನನ್ನ ಭಾವನೆ.  ಸುಖಾಸುಮ್ಮನೆ ಕಾಂಗ್ರೆಸ್ ನಾಯಕರು ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆ ತನಿಖೆಯ ಹಾದಿ ತಪ್ಪಿಸುವುದು ಬೇಡ. ಅದಕ್ಕೆ ಅವರು ಕಾರಣರಾಗುವುದು ಬೇಡ ಎಂದು ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.

ನಿಖರವಾಗಿ ಯಾವ ರಾಜಕೀಯ ಮುಖಂಡರಿಗೆ ಅಥವಾ ಅಧಿಕಾರಿಗೆ ಹಣ ವರ್ಗಾವಣೆ ಆಗಿದೆ ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ದಾಖಲೆ ನೀಡುವುದು ಸೂಕ್ತ. ಆಗ ಜನರಿಗೂ ಸರಿಯಾದ ಮಾಹಿತಿ ಸಿಕ್ಕಿದಂತೆ ಆಗುತ್ತದೆ. ಈ ಹಗರಣದಿಂದ ಸಾರ್ವಜನಿಕರಲ್ಲೂ ಆತಂಕದ ಜತೆಗೆ ನೂರಾರು ಪ್ರಶ್ನೆಗಳೂ ಉಂಟಾಗಿವೆ ಎಂದು ಕುಮಾರಸ್ವಾಮಿ ಹೇಳಿದರು.

ಯುಬಿ ಸಿಟಿ ಘಟನೆ ನೆನಪಿಸಿದ ಎಚ್‍ಡಿಕೆ: 2016 ರಿಂದಲೇ ಬಿಟ್ ಕಾಯಿನ್ ದಂಧೆ ಪ್ರಾರಂಭ ಆಗಿದೆ ಅಂತ ಮಾಹಿತಿ ಇದೆ. 2018ರ ಫೆಬ್ರವರಿಯಲ್ಲಿ ಯುಬಿ ಸಿಟಿಯಲ್ಲಿ ಹಲ್ಲೆಯ ಘಟನೆ ನಡೆದಿತ್ತು. ಅದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಂಘರ್ಷ ಅಲ್ಲ ಅಂತ ಆಗಲೇ ನಾನು ಹೇಳಿದ್ದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇತ್ತು. ಆ ಘಟನೆ ನಡೆದ ಸಂದರ್ಭದಲ್ಲಿ ಶ್ರೀಕಿ ಕೂಡ ಅಲ್ಲಿಯೇ ಇದ್ದ ಎನ್ನುವುದು ಗೊತ್ತು. ಆಗ ಯಾಕೆ ಶ್ರೀಕಿಯನ್ನು ಬಂಧಿಸಲಿಲ್ಲ? ಆಗ ಪಶ್ಚಿಮ ಬಂಗಾಳದಿಂದ ಒಬ್ಬ ಆರೋಪಿಯನ್ನು ಬಂಧಿಸಿ ಕರೆ ತರಲಾಗಿತ್ತು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News