ಬಿಟ್ ಕಾಯಿನ್ ಪ್ರಕರಣ: ಕಾಂಗ್ರೆಸ್ಸಿನವರದು ಹುಳಿ ಹಿಂಡುವ ರಾಜಕಾರಣ ಎಂದ ಸಚಿವ ಸಿ.ಸಿ.ಪಾಟೀಲ್

Update: 2021-11-14 12:04 GMT

ಬೆಂಗಳೂರು, ನ. 14: `ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಜನಪರವಾದ ಆಡಳಿತವನ್ನು ನೀಡುತ್ತಾ ಈಗಾಗಲೇ ಯಶಸ್ವಿಯಾಗಿ ಶತದಿನಗಳನ್ನು ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಕಾರ್ಯಸಾಧನೆಯನ್ನು ಕಂಡು ಹತಾಶರಾಗಿ ಕಾಂಗ್ರೆಸ್ ನಾಯಕರು `ಬಿಟ್ ಕಾಯಿನ್' ಹೆಸರಿನಲ್ಲಿ ವಿನಾಕಾರಣ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ' ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಆರೋಪಿಸಿದ್ದಾರೆ.

ರವಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ವಿವಾದ ಸೃಷ್ಟಿಸಿ ಅದರಿಂದ ರಾಜಕೀಯ ದುರ್ಲಾಭ ಪಡೆದುಕೊಳ್ಳಬಹುದು ಎಂಬ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಮುಖಂಡರಿಗೆ, ಇದೇ ಬಿಟ್ ಕಾಯಿನ್ ತಿರುಗುಬಾಣವಾಗಿ ಮುಳುವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ ಎಂದು ಟೀಕಿಸಿದ್ದಾರೆ. `ಬಿಜೆಪಿ ನಾಯಕರೇ ತಮಗೆ ಬಿಟ್ ಕಾಯಿನ್ ಹಗರಣದ ಮಾಹಿತಿ ನೀಡುತ್ತಿದ್ದಾರೆಂದು ಕಾಂಗ್ರೆಸ್ಸಿನ ಮುಖಂಡರೊಬ್ಬರು ಹೇಳುವ ಮೂಲಕ ಈ ತನಿಖೆಯ ಹಾದಿ ತಪ್ಪಿಸಲು ಮತ್ತು ಬಿಜೆಪಿಯಲ್ಲಿ ಹುಳಿ ಹಿಂಡಿ ಒಡಕು ಸೃಷ್ಟಿಸಲು ಹವಣಿ ಸಿರುವುದು ಸ್ಪಷ್ಟವಾಗಿದೆ. ಆದರೆ, ಇಂತಹ ಹುನ್ನಾರಗಳ ಆಟ ನಡೆಯುವುದಿಲ್ಲ. ಬಿಜೆಪಿಯಲ್ಲಿ ಆಂತರಿಕ ಒಕ್ಕಟ್ಟು ಗಟ್ಟಿಯಾಗಿದೆ.  ಕಾಂಗ್ರೆಸ್ಸಿನ ಹಾಗೆ `ಒಂದು ಮನೆ ಹಲವು ಬಾಗಿಲು' ಎಂಬಂಥ ಪರಿಸ್ಥಿತಿ ನಮ್ಮಲ್ಲಿಲ್ಲ ಎಂದು ಸಿ.ಸಿ.ಪಾಟೀಲರು ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ.

`ಬಿಟ್ ಕಾಯಿನ್ ಹಗರಣ ಈಗಾಗಲೇ ಕೆಲವು ಕಾಂಗ್ರೆಸ್ ಮುಖಂಡರ ಕಾಲಿಗೆ ಸುತ್ತಿಕೊಂಡಿರುವುದು ಬಹಿರಂಗವಾಗಿದ್ದರೂ, ತಾವೇ ಸ್ವತಹ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ದುಸ್ಸಾಹಸಕ್ಕೆ ಕಾಂಗ್ರೆಸ್ ಮುಖಂಡರು ಇಳಿಯುತ್ತಿರುವ ವರ್ತನೆ ನಿಜಕ್ಕೂ ವಿಚಿತ್ರವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಬಿಟ್ ಕಾಯಿನ್ ಹಗರಣದ ಬಗ್ಗೆ ಸೂಕ್ತ ತನಿಖೆ ಮಾಡಿದ್ದು, ಈಡಿ ಹಾಗೂ ಸಿಬಿಐಗೆ ಶಿಫಾರಸು ಮಾಡಿದ್ದೆ ನಮ್ಮ ಸರಕಾರ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿಯವರೇ ಸ್ಪಷ್ಟಪಡಿಸಿದ್ದಾರೆ. ಅದರಂತೆ ಈಗ ತನಿಖೆ ಸರಿಯಾದ ದಿಕ್ಕಿನಲ್ಲಿಯೇ ನಡೆಯುತ್ತಿರುವುದರಿಂದ ಯಾರೂ ಸ್ವ ಕಪೆÇೀಲಕಲ್ಪಿತವಾಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಿ.ಸಿ.ಪಾಟೀಲ್ ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News