ಪೊಲೀಸರು ಅಸಹಾಯಕರ, ಬಡವರ ಬಗ್ಗೆ ಸದಾ ಕಾಳಜಿ ಹೊಂದಿರಬೇಕು: ಪಿ.ಹರಿಶೇಖರನ್
ಧಾರವಾಡ, ನ.15: ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಅದರಲ್ಲೂ ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮವಾದ ಸಂಪರ್ಕ ಮತ್ತು ಸೌಹಾರ್ದಯುತವಾದ ಸಂಬಂಧ ಹೊಂದಿದ್ದರೆ ಮಾತ್ರ ಜನಸ್ನೇಹಿ ಪೊಲೀಸ್ ಆಗಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪಿ.ಹರಿಶೇಖರನ್ ಹೇಳಿದರು.
ಸೋಮವಾರ ಧಾರವಾಡ ಪೊಲೀಸ್ ತರಬೇತಿ ಶಾಲೆ ವತಿಯಿಂದ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ 7ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪೊಲೀಸ್ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಶಿಕ್ಷಣಾರ್ಥಿಗಳು ಅಸಹಾಯಕರ, ಬಡವರ ಬಗ್ಗೆ ಸದಾ ಕಾಳಜಿ ಹೊಂದಿರಬೇಕು ಎಂದು ಕರೆ ನೀಡಿದರು.
ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸಾರ್ವಜನಿಕರ ಸಂಪರ್ಕದ ಕೊರತೆ ಇದ್ದಾಗ ಅಲ್ಲಿ ಕಾನೂನು, ಸುವ್ಯವಸ್ಥೆಯ ಕೊರತೆ ಉಂಟಾಗುತ್ತದೆ. ಜನರೊಂದಿಗೆ ಬೆರೆತು ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆ ಜನಸಂಪರ್ಕ ಕಾರ್ಯಕ್ರಮ ಜಾರಿಗೊಳಿಸಿದೆ ಎಂದು ಅವರು ಹೇಳಿದರು.
ನಾಗರಿಕ ಸಮಾಜದ ನೋವು, ತೊಂದರೆಗಳಿಗೆ ಸ್ಪಂದಿಸದ ಮತ್ತು ಜನರೊಂದಿಗೆ ಬೆರೆಯದ ಅಧಿಕಾರಿಗೆ ಎಷ್ಟೋ ಅಧಿಕಾರ ಕೊಟ್ಟರು ವ್ಯರ್ಥ. ಪ್ರತಿ ಅಧಿಕಾರಿ, ಸಿಬ್ಬಂದಿಗಳು ತಮಗೆ ನೀಡಿರುವ ಅಧಿಕಾರ ಮತ್ತು ಅವಕಾಶಗಳನ್ನು ಬಳಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡಿ, ಇಲಾಖೆ ಮತ್ತು ಸರಕಾರಕ್ಕೆ ಕೀರ್ತಿ, ಗೌರವ ತರಬೇಕು ಎಂದು ಅವರು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಪೊಲೀಸ್ ಸಿಬ್ಬಂದಿಗಳ ಸಮಾಜದಲ್ಲಿನ ಸಕ್ರಿಯ ಮತ್ತು ಪ್ರಾಮಾಣಿಕ ಪಾಲ್ಗೊಳ್ಳುವಿಕೆ ಕಾನೂನು, ಸುವ್ಯವಸ್ಥೆ ಕಾಪಾಡುವುದರೊಂದಿಗೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡಲು ಸಹಾಯವಾಗುತ್ತದೆ ಎಂದು ಹರಿಶೇಖರನ್ ತಿಳಿಸಿದರು.
ಇಲಾಖೆಗೆ ಇತ್ತೀಚೆಗೆ ಪದವಿ, ಸ್ನಾತಕೋತ್ತರ ಪದವೀಧರರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಅರ್ಹತೆ ಇರುವ ಅಂತಹವರಿಗೆ ಹೆಚ್ಚುವರಿ ಜವಾಬ್ದಾರಿ, ಕಾಲಕಾಲಕ್ಕೆ ಪದೋನ್ನತಿ ನೀಡಲು ಸರಕಾರ ಕ್ರಮವಹಿಸಿದೆ. ತಾಂತ್ರಿಕ ಶಿಕ್ಷಣ ಪಡೆದ ಅನೇಕರು ಪೊಲೀಸ್ ಇಲಾಖೆಗೆ ಬರುತ್ತಿದ್ದು, ಅವರಿಗೆ ನೀಡುವ ತರಬೇತಿ ಪಠ್ಯದಲ್ಲಿ ಸೈಬರ್ ಕ್ರೈಮ್, ಸೆಲ್ ಫೋನ್ ಟೆಕ್ನಾಲಜಿ ಮುಂತಾದ ಪ್ರಸ್ತುತ ಅಗತ್ಯ ಇರುವ ವಿಷಯಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಪೊಲೀಸ್ ವ್ಯವಸ್ಥೆಯಲ್ಲಿ ಯಾವುದೇ ಜಾತಿ, ಧರ್ಮ, ಪಂಗಡವಿಲ್ಲ. ಇಲ್ಲಿ ಖಾಕಿ ಒಂದೇ ಜಾತಿ. ಖಾಕಿ ಒಂದೇ ಧರ್ಮ. ಒಂದೆ ಕುಟುಂಬದ ಸದಸ್ಯರಂತೆ ಬದುಕುತ್ತೇವೆ. ಸೇವೆಗೆ ಸೇರುವ ಪೂರ್ವದಲ್ಲಿ ಮಾಡುವ ಪ್ರತಿಜ್ಞೆಗೆ ಎಲ್ಲರೂ ಎಲ್ಲ ಸಮಯದಲ್ಲೂ ಬದ್ಧರಾಗಿರುತ್ತೇವೆ ಎಂದು ಹರಿಶೇಖರನ್ ನುಡಿದರು.
ನಂತರ ಅವರು ಕಾರ್ಯಕ್ರಮದಲ್ಲಿ ಪೊಲೀಸ್ ತರಬೇತಿ ಶಾಲೆಯ ಸ್ಮರಣ ಸಂಚಿಕೆಯಾದ ಸ್ಪೂರ್ತಿ ಅನ್ನು ಬಿಡುಗಡೆ ಮಾಡಿದರು. ಪೆÇೀಲಿಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಪೊಲೀಸ್ ಅಧೀಕ್ಷಕ ಉಮೇಶ್ ಪಿ. ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಉಪ ಪ್ರಾಂಶುಪಾಲರಾದ ಡಿಎಸ್ಪಿ ಹರಿಶ್ಚಂದ್ರ ನಾಯ್ಕ ವಂದಿಸಿದರು.
ಪೆರೇಡ್ ಕಮಾಂಡರ್ ಬಸವರಾಜ ಬಿರಾದಾರ ಮತ್ತು ನಾಗರಾಜ ಸಿ. ಅವರ ಮುಂದಾಳತ್ವದ ಪಥ ಸಂಚಲನದಲ್ಲಿ ಕಲಬುರಗಿ, ಬೆಂಗಳೂರು ನಗರ, ಉತ್ತರ ಕನ್ನಡ, ಬೀದರ್, ತುಮಕೂರು, ಉಡುಪಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ 19 ಘಟಕಗಳ 351 ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಬಸರಗಿ, ಫೈಝುದ್ದೀನ್, ಹಂಝಾ ಹುಸೇನ್, ಅಮ್ ಸಿದ್ದ ಗೋಂದಳಿ, ಶರಣಪ್ಪ ಸುಳಿಭಾವಿ ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಕುಟುಂಬ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.