ಬಿಟ್ ಕಾಯಿನ್ ಹಗರಣ: ಮಕ್ಕಳನ್ನು ಹೆದರಿಸುವ ಆಟಿಕೆಯಂತಿದೆ; ಸಚಿವ ಕಾರಜೋಳ

Update: 2021-11-17 11:17 GMT

ಬೆಂಗಳೂರು, ನ. 17: `ಮೊದಲನೆಯದಾಗಿ ಇದು ಬಿಟ್ ಕಾಯಿನ್ ಹಗರಣ ಅಲ್ಲ. ಇದು ಬಿಟ್ ಕಾಯಿನ್ ಒಳಗೊಂಡ ಹಗರಣ. ಇದು ಸೈಬರ್ ಕ್ರೈಮ್ ಆಗಿದೆ. ಆರೋಪಿ ಶ್ರೀಕಿ ಒಬ್ಬ ಹ್ಯಾಕರ್. ಸರಕಾರಿ ವೈಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿಕೊಂಡಿರುವುದಾಗಿ ಆತನೇ ಹೇಳಿಕೊಂಡಿದ್ದಾನೆ' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪ್ರಮುಖ ಆರೋಪಿ ಶ್ರೀಕಿಯನ್ನು ಬಿಟ್ ಕಾಯಿನ್ ಬಳಕೆಯಿಂದ ಮಾದಕವಸ್ತು ಕಳ್ಳಸಾಗಾಣೆಗಾಗಿ ಎನ್‍ಡಿಪಿಸಿ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ. ಪ್ರತಿಪಕ್ಷಗಳು ಮಾಡುತ್ತಿರುವ `ಬಿಟ್ ಕಾಯಿನ್' ಹಗರಣ ಎನ್ನುವುದು ಒಂದು `ಭೂತ ಬಂತು ಭೂತ' ಎಂದು ಮಕ್ಕಳನ್ನು ಹೆದರಿಸುವ ಆಟಿಕೆಯಂತಿದೆ' ಎಂದು ವಾಗ್ದಾಳಿ ನಡೆಸಿದರು.

`ಭೂತ ಏನು ಎಂಬುದನ್ನು ಆಪಾದನೆ ಮಾಡುತ್ತಿರುವ ಪ್ರತಿಪಕ್ಷಗಳು ಮೊದಲು ಸಾಮಾನ್ಯಜನರಿಗೆ ಅರ್ಥ ಆಗುವ ಎಲ್ಲ ವಿವರ ಮತ್ತು ಆಧಾರಗಳೊಂದಿಗೆ ಸ್ಪಷ್ಟೀಕರಿಸಲಿ. ಈ ಹಗರಣದ ಬಗ್ಗೆ ಇರುವ ಪುರಾವೆಗಳನ್ನು ತನಿಖಾ ಸಂಸ್ಥೆಗಳಿಗೆ ಪ್ರತಿಪಕ್ಷಗಳು ನೀಡಲಿ. ಅದನ್ನು ಬಿಟ್ಟು ಸುಮ್ಮನೆ ಹಗರಣದ ಎಂದರೆ ಯಾರಿಗೂ ಅಂಜಿಕೆಯಿಲ್ಲ. ಏಕೆಂದರೆ ನಾವು ಇದನ್ನಾಗಲೇ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿದ್ದೇವೆ. ನಮ್ಮಲ್ಲಿ ಮುಚ್ಚಿಡುವುದು ಏನೂ ಇಲ್ಲ' ಎಂದು ಸ್ಪಷ್ಟಣೆ ನೀಡಿದರು.

`ಇದೊಂದು ಪ್ರಗತಿಯ ಹಂತದಲ್ಲಿರುವ ತನಿಖೆ. ಹೀಗಾಗಿ ಪ್ರತಿಪಕ್ಷಗಳು ಮಾಡುತ್ತಿರುವ ಹುರುಳಿಲ್ಲದ ಹಾಗೂ ತಿರುಳಿಲ್ಲದ ಆರೋಪಗಳಿಗೆ ನಾವು ಉತ್ತರಿಸುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರಕಾರ ಈ ವಿಚಾರದಲ್ಲಿ ಮುಕ್ತ ಮನಸ್ಸು ಹೊಂದಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ಸಾಬೀತುಪಡಿಸುವ ಜವಾಬ್ದಾರಿ ಅವರ ಮೇಲೆಯೇ ಇದೆ ಎಂದು ಗೋವಿಂದ ಕಾರಜೋಳ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News