ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ಜಗದೀಶ್ ಶೆಟ್ಟರ್

Update: 2021-11-19 12:37 GMT

ತುಮಕೂರು.ನ.19: ಮುಂದಿನ ತಿಂಗಳು ವಿಧಾನಪರಿಷತ್‍ನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನಗರದ ಅರ್ಬನ್ ರೆರ್ಸಾಟ್ ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರ ಮತ್ತು ರಾಜ್ಯ ಸರಕಾರದ ಸುಭದ್ರ ಮತ್ತು ಜನಪರ ಆಡಳಿತಕ್ಕೆ ಗ್ರಾಮಪಂಚಾಯಿತಿ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಬಿಜೆಪಿಗೆ ಮತಹಾಕಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ಸುಮಾರು 45 ಸಾವಿರದಷ್ಟು ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರು ಗ್ರಾಮಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ದೇಶದಲ್ಲಿ ಅತಿ ಹೆಚ್ಚು ಶಾಸಕರು ಮತ್ತು ಸಂಸದರನ್ನು ಹೊಂದಿರುವ ಪಕ್ಷ ಬಿಜೆಪಿಯಾಗಿದೆ. ಹಾಗಾಗಿ ದೇಶದಲ್ಲಿ ನಡೆದ ಉಪಚುನಾವಣೆಗಳು, ಮುಂದೆ ನಡೆಯುವ ಚುನಾವಣೆಗಳಲ್ಲಿಯೂ ಭಾರತೀಯ ಜನತಾಪಾರ್ಟಿಗೆ ಹೆಚ್ಚಿನ ಮತಗಳು ಬರಲಿವೆ ಎಂಬ ವಿಶ್ವಾಸವಿದೆ. ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ ಐವರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಹಾಗೂ ಇಬ್ಬರು ಸಂಸದರು ಇದ್ದು,ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ನೇತೃತ್ವದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ 8 ಜಿಲ್ಲೆಗಳಲ್ಲಿ ಜನಸ್ವರಾಜ್ ಯಾತ್ರೆ ನಡೆಯುತ್ತಿದ್ದು, ಇದುವರೆಗೂ ನಡೆದ ಯಾತ್ರೆಗಳಲ್ಲಿ ಅತಿ ಹೆಚ್ಚು ಗ್ರಾಮಪಂಚಾಯಿತಿ ಸದಸ್ಯರು ಭಾಗವಹಿಸಿ,ಬೆಂಬಲಿಸಿದ್ದಾರೆ.ಚಿತ್ರದುರ್ಗದಲ್ಲಿ 1500,ದಾವಣಗೆರೆಯಲ್ಲಿ 1200 ಜನರು ಜನಸ್ವರಾಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮುಂದಿನ ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿಯೂ ಹೆಚ್ಚಿನ ಮತದಾರರು ಸೇರುವ ನಿರೀಕ್ಷೆ ಇದೆ.ವಿಧಾನಸಭೆಯ ರೀತಿಯಲ್ಲಿ, ವಿಧಾನಪರಿಷತ್ತಿನಲ್ಲಿಯೂ ಬಹುಮತ ಪಡೆಯಲು ಈ ಚುನಾವಣೆ ಬಿಜೆಪಿಗೆ ನರವಾಗಲಿದೆ ಎಂದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಭೂತಗನ್ನಡಿ ಹಾಕಿ ಹುಡಬೇಕಾಗಿದೆ.ಡಿಕೆಶಿ-ಸಿದ್ದರಾಮಯ್ಯನಂತಹ ನಾಯಕರ ಅಂತರಿಕ ಕಿತ್ತಾಟದ ಫಲವಾಗಿ ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷ ಸರ್ವ ನಾಶವಾಗಲಿದೆ.ಮುಂದಿನ ದಿನಗಳಲ್ಲಿ ಪಂಜಾಬ್‍ನಲ್ಲಿಯೂ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದ ಜಗದೀಶ್ ಶೆಟ್ಟರ್, ಬಿಟ್‍ಕಾಯಿನ್ ಎಂಬುದು ಮಕ್ಕಳನ್ನು ಎದುರಿಸಲು ಗುಮ್ಮ ಬಂದಿದೆ ಎನ್ನುವಂತೆ ಕಾಂಗ್ರೆಸ್ ಬಿಜೆಪಿಯನ್ನು ಎದುರಿಸಲು ಬಳಸುತ್ತಿದೆ. ನಿಜವಾಗಿಯೂ ಬಿಟ್‍ಕಾಯಿನ್ ಬಗ್ಗೆ ಮಾಹಿತಿ ಇದ್ದರೆ ಸಲ್ಲಿಸಲಿದೆ.ಅದನ್ನು ಬಿಟ್ಟು, ಈ ರೀತಿಯ ಉಹಾಪೋಹದ ಆರೋಪ ಸರಿಯಲ್ಲ.ಈಗಾಗಲೇ ಮುಖ್ಯಮಂತ್ರಿಗಳು ಅವರಿಗೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದರು.

ಕೇಂದ್ರ ಸರಕಾರ ವಿವಾದಿತ ಎನ್ನಲಾದ ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವ ಬಗ್ಗೆ ನಮಗೆ ತಿಳಿದಿಲ್ಲ. ಈಗಷ್ಟೇ ಮಾಹಿತಿ ಪಡೆಯುತ್ತಿದ್ದೇನೆ.ಯಾವ ಕಾರಣಕ್ಕೆ ಹಿಂಪಡೆದಿದ್ದಾರೆ ಎಂಬುದನ್ನು ಪರಾಮರ್ಶಿಸಿ, ಪ್ರತಿಕ್ರಿಯೆ ನೀಡುತ್ತೇನೆ ಎಂದ ಅವರು,ಕೇಂದ್ರ ಮತ್ತು ರಾಜ್ಯದಲ್ಲಿ ನರೇಂದ್ರಮೋದಿ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ.ಕಾಲ ಕಾಲಕ್ಕೆ ಒದಗಿದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡುತ್ತಿದೆ ಎಂದು ಜಗದೀಶ್ ಶೆಟ್ಟರ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ,ಬಿ.ಸಿ.ನಾಗೇಶ್,ನಾರಾಯಣಗೌಡ,ಭೈರತಿ ಬಸವರಾಜು,ಶಾಸಕರಾದ ರಾಜೇಶ್‍ಗೌಡ, ಜೋತಿಗಣೇಶ್,ಮಸಾಲೆ ಜಯರಾಮ್,ನಾರಾಯಣಸ್ವಾಮಿ,ಮುಖಂಡರಾದ ವಿಜಯೇಂದ್ರ, ಬಿ.ಕೆ.ಮಂಜುನಾಥ್, ಮಹೇಶ್ ತೆಂಗಿನಕಾಯಿ,ಮಾಜಿ ಸಚಿವ ಎಸ್.ಶಿವಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News