ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ ಪತ್ತೆ

Update: 2021-11-20 15:55 GMT

ಚಿಕ್ಕಮಗಳೂರು, ನ.20: ಶುಕ್ರವಾರ ರಾತ್ರಿ ತರೀಕೆರೆ ತಾಲೂಕಿನಾದ್ಯಂತ ಭಾರೀ ಮಳೆಯಾಗಿದ್ದು, ತಾಲೂಕಿನ ಹುಲಿತಿಮ್ಮಾಪುರ ಗ್ರಾಮದಲ್ಲಿ ಹಳ್ಳವೊಂದು ತುಂಬಿ ಹರಿದು ಈ ಹಳ್ಳದ ಕಿರುಸೇತುವೆಯನ್ನು ಸ್ಕೂಟಿಯಲ್ಲಿ ದಾಟುತ್ತಿದ್ದ ವ್ಯಕ್ತಿಯೊಬ್ಬರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ವರದಿಯಾಗಿದೆ.

ಗ್ರಾಮದ ಪೊನ್ನುಸ್ವಾಮಿ(45) ಸ್ಕೂಟಿಯೊಂದಿಗೆ ರಾತ್ರಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಶನಿವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು,  ತರೀಕೆರೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಲಿಂಗದಹಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವವನ್ನು ಹೊರತೆಗೆದಿದ್ದಾರೆ. ಪೊನ್ನುಸ್ವಾಮಿ ಲಿಂಗದಹಳ್ಳಿಯಿಂದ ಹುಲಿತಿಮ್ಮಾಪುರ ಗ್ರಾಮದ ಮೂಲಕ ಸಿದ್ದರಹಳ್ಳಿಗೆ ತೆರಳುತ್ತಿದ್ದಾಗ ಕಿರುಸೇತುವೆಯಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

ಹವಾಮಾನ ವೈಫರೀತ್ಯದ ಪರಿಣಾಮ ಕಾಫಿನಾಡಿನ ಮಲೆನಾಡು ಹಾಗೂ ಬಯಲು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಜಿಲ್ಲಾದ್ಯಂತ ಮನೆ, ರಸ್ತೆ, ಸೇತುವೆ, ವಿದ್ಯುತ್ ಕಂಬಗಳಿಗೆ ಭಾರೀ ಹಾನಿ ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಕೃಷಿ, ತೋಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ಬಯಲು ಭಾಗದಲ್ಲಿ ತಗ್ಗುಪ್ರದೇಶಗಳಲ್ಲಿದ್ದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡ ವರದಿಯಾಗಿದೆ.

ಜಿಲ್ಲಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಿರಂತರ ಮಳೆ ಹಾಗೂ ಮೋಡಕವಿದ ವಾತಾವರಣದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ, ಕಾಳು ಮೆಣಸು, ಭತ್ತ ಮೊದಲಾದ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಕಾಫಿ, ಅಡಿಕೆ ಕಟಾವಿಗೆ ಮಳೆ ಅಡ್ಡಿಯಾಗಿರುವುದು ಒಂದೆಡೆಯಾದರೇ, ಕಟಾವು ಮಾಡಿದ ಅರೇಬಿಕಾ ಕಾಫಿ ಹಾಗೂ ಅಡಿಕೆಯನ್ನು ಒಣಗಿಸಲು ಸಾಧ್ಯವಾಗದೇ ಬೆಳೆ ಕೊಳೆತು ಹೋಗುತ್ತಿದೆ. ಪ್ರತಿದಿನ ಮಳೆ ಹಾಗೂ ಧಟ್ಟ ಮೋಡದ ಪರಿಣಾಮ ಲಕ್ಷಾಂತರ ಮೌಲ್ಯದ ಕಾಫಿ, ಅಡಿಕೆ ಬೆಳೆ ಸಂರಕ್ಷಿಸಿಕೊಳ್ಳಲು ಬೆಳೆಗಾರರು ಪರದಾಡುತ್ತಿದ್ದು, ಸೌದೆ ಒಲೆಯ ಬೆಂಕಿಯಲ್ಲಿ ಕಾಫಿ, ಅಡಿಕೆಯನ್ನು ಒಣಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಡೂರು, ತರೀಕೆರೆ ಭಾಗದ ಅಲ್ಲಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಕಟಾವು ಮಾಡಿದ ಅಡಿಕೆ ಬೆಳೆ ಮಳೆ ನೀರು ಪಾಲಾಗುತ್ತಿದೆ.

ಕಳೆದೊಂದು ತಿಂಗಳುಗಳಿಂದ ಜಿಲ್ಲಾದ್ಯಂತ ಮಳೆಯಾಗುತ್ತಿದ್ದು, ಕಟಾವಿಗೆ ಬಂದಿರುವ ಕಾಫಿ ಹಾಗೂ ಅಡಿಕೆ ಬೆಳೆ ತೋಟಗಳಲ್ಲಿ ಉದುರಿ ಮಣ್ಣು ಪಾಲಾಗುತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಬೆಳೆಗಾರರದ್ದಾಗಿದೆ. ಇನ್ನು ನಿರಂತರ ಮಳೆ ಪರಿಣಾಮ ಕಾಳುಮೆಣಸು ಬೆಳೆಯೂ ಉದುರುತ್ತಿದ್ದು, ಕಾಳುಮೆಣಸು ಬಳ್ಳಿಗಳು ಕೊಳೆ ರೋಗಕ್ಕೆ ತುತ್ತಾಗುತ್ತಿವೆ. ಇನ್ನು ಜಿಲ್ಲಾದ್ಯಂತ ಭತ್ತದ ಗದ್ದೆಗಳಲ್ಲಿ ಉತ್ತಮ ಫಸಲು ಬಂದಿರುವ ಭತ್ತದ ಬೆಳೆಯೂ ಮಳೆಯಿಂದಾಗಿ ಮಣ್ಣು ಪಾಲಾಗುತ್ತಿದ್ದು, ಭಾರೀ ಮಳೆಯಿಂದಾಗಿ ಬೆಳೆಯನ್ನು ಕೊಯ್ಲು ಮಾಡಲೂ ಸಾಧ್ಯವಾಗದೇ ಭತ್ತದ ಕೃಷಿಕರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. 

ಇನ್ನು ಜಿಲ್ಲೆಯ ಬಯಲು ಭಾಗದ ತಾಲೂಕುಗಳಾದ ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಬಯಲು ಭಾಗದಲ್ಲಿ ಬೆಳೆದಿರುವ ಈರುಳ್ಳಿ, ಆಲೂಗಡ್ಡೆ, ಟೊಮಾಟೊ, ಬೀನ್ಸ್ ಮೊದಲಾದ ತರಕಾರಿ ಬೆಳೆಗಳು ಹಾಗೂ ರಾಗಿ, ಜೋಳದಂತಹ ಬೆಳೆಗಳೂ ಸಂಪೂರ್ಣವಾಗಿ ನೆಲಕಚ್ಚಿದೆ. ಚಿಕ್ಕಮಗಳೂರು , ಕಡೂರು, ತರೀಕೆರೆ ಭಾಗದಲ್ಲಿ ಈರುಳ್ಳಿ, ಆಲೂಗಡ್ಡೆ, ರಾಗಿಯನ್ನು ಯಥೇಚ್ಚವಾಗಿ ಬೆಳೆಯಲಾಗುತ್ತಿದ್ದು, ಅಕಾಲಿಕ ಮಳೆ ಈ ಬೆಳೆಗಳನ್ನು ಮಣ್ಣಿನಲ್ಲೇ ಕೊಳೆಯುವಂತೆ ಮಾಡಿದ್ದು, ರೈತರು ಭಾರೀ ನಷ್ಟ ಅನುಭವಿಸಿದ್ದಾರೆ.

ಶುಕ್ರವಾರ ಸಂಜೆ, ರಾತ್ರಿ ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಕಡೂರು ತಾಲೂಕಿನಾದ್ಯಂತ ಸುರಿದ ಭಾರೀ ಮಳೆಗೆ ಚಿಕ್ಕವಂಗಲ ಗ್ರಾಮದ ಬುಳ್ಳನಕೆರೆ ಕೋಡಿ ಬಿದ್ದ ಪರಿಣಾಮ ಕೆರೆ ಪಕ್ಕದ ಅರಸು ಬಡಾವಣೆಗೆ ಕೆರೆ ನೀರು ನುಗ್ಗಿ ಬಡಾವಣೆಯ ಸುಮಾರು 25 ಮನೆಗಳು ಜಲಾವೃತಗೊಂಡಿವೆ. ಅಲ್ಲದೇ ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ಮಳೆಯಿಂದಾಗಿ ನಿವಾಸಿಗಳು ತೊಂದರಗೀಡಾಗಿದ್ದರೂ ಸ್ಥಳಕ್ಕೆ ಬಾರದ ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಮೂಡಿಗೆರೆ ತಾಲೂಕಿನ ನೀರ್ ಗಂಡಿ ಎಂಬಲ್ಲಿ ಹಾಸನದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು ಮುಂಜಾನೆ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ರಸ್ತೆ ಕಾಣದೇ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ಕಾರು ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದ್ದು, ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಯುವಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು,ಕಾರು ನಜ್ಜುಗುಜ್ಜಾಗಿದೆ. 

ಜಿಲ್ಲಾದ್ಯಂತ ನ.1ರಿಂದ ನ.19ರವರೆಗೆ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಮೂರು ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, ಅಂದಾಜು 1ಲಕ್ಷ ರೂ. ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ 34 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 17 ಲಕ್ಷ ರೂ. ನಷ್ಟ ಸಂಭವಿಸಿದೆ. ಜಿಲ್ಲಾದ್ಯಂತ ಭಾರೀ ಮಳೆಯಿಂದಾಗಿ 68 ಕಿಮೀ ರಸ್ತೆಗೆ ಹಾನಿಯಾಗಿದ್ದು, 31.55 ಲಕ್ಷ ರೂ. ನಷ್ಟವಾಗಿದ್ದರೇ, 9 ಸೇತವೆಗಳಿಗೆ ಹಾನಿಯಾಗಿ 35.25 ಲಕ್ಷ ರೂ. ನಷ್ಟ ಸಂಭವಿಸಿದೆ. ಜಿಲ್ಲಾದ್ಯಂತ ಮಳೆಯಿಂದಾಗಿ 104 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, 8.62 ಲಕ್ಷ ರೂ. ನಷ್ಟವಾಗಿದೆ. ಇನ್ನು ಜಿಲ್ಲಾದ್ಯಂತ 24.34 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕೃಷಿ ಬೆಳೆಗೆ ಹಾನಿಯಾಗಿದ್ದರೇ, 6491 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಮಳೆ ಹಾನಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News