×
Ad

ಹೋರಾಟ ಮುಂದುವರೆಯುತ್ತದೆ: ವೈಯಕ್ತಿಕ ನಿಂದನೆಗೆ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

Update: 2021-11-21 10:39 IST
ಫೈಲ್ ಫೋಟೊ

ಕಲಬುರಗಿ: ತಮ್ಮ ಮೇಲೆ ನಡೆಯುತ್ತಿರುವ ಬಿಜೆಪಿ ನಾಯಕರ ವೈಯಕ್ತಿಕ‌ ದಾಳಿಯ ಕುರಿತು ಸ್ಪಷ್ಟ ಸಂದೇಶ ನೀಡಿರುವ ಮಾಜಿ ಸಚಿವ, ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸತ್ಯದ ಮಾರ್ಗದಲ್ಲಿ ಹೋಗುವಾಗ ಅಡೆತಡೆಗಳು ಸಹಜ. ನನ್ನ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು " ಸತ್ಯದ ವಿಚಾರ ಮಾತನಾಡುವಾಗ ಅನೇಕ ಅಡೆ-ತಡೆಗಳು ಬರುತ್ತವೆ. ಆದರೆ, ಅದಕ್ಕೆಲ್ಲಾ ಎದೆಗುಂದದೆ ಮುನ್ನುಗ್ಗಲು‌ ಕಲಿತಿದ್ದು ಬುದ್ಧ-ಬಸವ-ಅಂಬೇಡ್ಕರ್ ಅವರ ಜೀವನ ಮತ್ತು ವಿಚಾರಧಾರೆಗಳಿಂದ. ಅವರು ಹಾಕಿಕೊಟ್ಟ ಸತ್ಯ, ಹೋರಾಟದ ಮಾರ್ಗದಲ್ಲಿ ಸಾಗುತ್ತೇನೆ ಮತ್ತು ಇದರಲ್ಲಿ‌ ಗೆಲುವು ಕಾಣುತ್ತೇನೆ ಎಂಬ ಭರವಸೆ ಇದೆ" ಎಂದಿದ್ದಾರೆ.

ಬಿಟ್ ಕಾಯಿನ್ ವಿಚಾರದಲ್ಲಿ ನಿರಂತರವಾಗಿ ಜನರಿಗೆ ಸ್ಪಷ್ಟತೆಯುಳ್ಳ ಸತ್ಯದ ವಿಚಾರ ತಲುಪಿಸುತ್ತಿರುವ ಶಾಸಕರ ವಿರುದ್ಧ ಮೈಸೂರು ಎಂಪಿ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರ ವೈಯಕ್ತಿಕ ದಾಳಿ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಕಲಬುರಗಿ ನಗರದಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರತಾಪ್ ಸಿಂಹ ಅವರು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.

ಈ ಸರ್ಕಾರ ಹಾಗೂ ಸರ್ಕಾರದ ಭಾಗವಾಗಿರುವ ಎಷ್ಟೇ ಜನರು ನನ್ನ ವಿರುದ್ಧ ಏನೇ ನಾಲಿಗೆ ಹರಿಬಿಟ್ಟು, ವೈಯಕ್ತಿಕ ನಿಂದನೆ ಮಾಡಿದರೂ ಸತ್ಯ ಹೇಳುವುದನ್ನು ನಾನು ಮುಂದುವರೆಸುತ್ತೇನೆ ಎಂದರು.

ಬಿಜೆಪಿಯ ನಾಯಕರ ಹೇಳಿಕೆಗಳ ವಿರುದ್ಧವಾಗಿ ಹಾಗೂ ನನಗೆ ಬೆಂಬಲವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದೀರಿ. ನನಗೆ ಬೆಂಬಲವಾಗಿ, ನನ್ನ ಹೋರಾಟಕ್ಕೆ ಬಲ ತುಂಬಿದ ಪ್ರತಿಯೊಬ್ಬರ ಅಭಿಮಾನಕ್ಕೆ ನಾನು ಸದಾ ಚಿರ ಋಣಿ. ಈ ನನ್ನ ಹೋರಾಟಕ್ಕೆ ಬೆಂಬಲವಾಗಿ ನಿಂತ, ಸತ್ಯದ ಪರವಾಗಿನ ನನ್ನ ಪ್ರತಿ ಹೋರಾಟದಲ್ಲೂ ಜೊತೆ ನಿಲ್ಲುವ ತಮಗೆಲ್ಲಾ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಹೋರಾಟ ಮುಂದುವರೆಯಲಿದೆ. ಸತ್ಯ ಮೇವ ಜಯತೆ ಎಂದು ಬರೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News