ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ನಾಮವಾಗಲಿದೆ: ಜಗದೀಶ್ ಶೆಟ್ಟರ್

Update: 2021-11-21 11:33 GMT

ಬೆಂಗಳೂರು, ನ. 21: `ರಾಜ್ಯದಲ್ಲಿ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ನಾಮವಾಗಲಿದೆ. ಕಾಂಗ್ರೆಸ್ ಪಕ್ಷವು ಈಗ ತುರ್ತುನಿಗಾ ಘಟಕ (ಐಸಿಯು)ದಲ್ಲಿದೆ' ಎಂದು ಮಾಜಿ ಮುಖ್ಯಮಂತ್ರಿ ಜಗದಿಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ರವಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ `ಜನಸ್ವರಾಜ್ ಯಾತ್ರೆ'ಯ ನೇತೃತ್ವವಹಿಸಿ ಮಾತನಾಡಿದ ಅವರು, `ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಸಿಎಂ ಆಗುವ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಪಡೆಯಲಿದ್ದು, ಕಾಂಗ್ರೆಸ್ ಮುಖಂಡರ ಕನಸು ನುಚ್ಚುನೂರಾಗಲಿದೆ. ಕೇಂದ್ರದಲ್ಲೂ ಮತ್ತೊಮ್ಮೆ ಬಿಜೆಪಿ ಸರಕಾರ ರಚನೆಯಾಗಲಿದೆ ಎಂದು ನುಡಿದರು.

`19 ಕೋಟಿ ಬಿಜೆಪಿ ಸದಸ್ಯರಿದ್ದು, ಮೋದಿ ಅವರ ನಾಯಕತ್ವವನ್ನು ವಿಶ್ವವೇ ಮೆಚ್ಚಿಕೊಂಡಿದೆ. ನೈಜ ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ವಿಸರ್ಜನೆಗೆ ಮಹಾತ್ಮ ಗಾಂಧೀಜಿ ತಿಳಿಸಿದ್ದರು. ಈಗ ಕಾಂಗ್ರೆಸ್ ವಿಸರ್ಜನೆ, ಕಾಂಗ್ರೆಸ್ ಮುಕ್ತ ಭಾರತ ಮತ್ತು ಕರ್ನಾಟಕ ಆಗುವ ಕಾಲ ಬಂದಿದೆ. ಲೋಕಸಭೆಯಲ್ಲಿ ಅಧಿಕೃತ ಪಕ್ಷವಾಗಿಯೂ ಕಾಂಗ್ರೆಸ್ ಪಕ್ಷ ಗುರುತಿಸಿಕೊಳ್ಳಲಾಗದ ದುಸ್ಥಿತಿ ಬಂದಿದೆ ಎಂದು ಟೀಕಿಸಿದರು.

`ಮೋದಿಯವರು ಜನಪ್ರಿಯ-ಸಮರ್ಥ ವಿಶ್ವನಾಯಕ ಎಂದು ಜನರು ಗುರುತಿಸಿದ್ದಾರೆ. ಇದು ನಮ್ಮೆಲ್ಲರ ಪುಣ್ಯ. ಇವತ್ತಿನ ಮತ್ತು ಭವಿಷ್ಯದ ಪಕ್ಷ ಎಂದರೆ ಅದು ಬಿಜೆಪಿ. ಉತ್ತಮ ಆಡಳಿತಕ್ಕಾಗಿ ಮತ್ತು ಮಸೂದೆಗಳನ್ನು ಸುಲಭವಾಗಿ ಅನುಮೋದಿಸಿ ಜನಪರ ಆಡಳಿತ ನೀಡುವ ದೃಷ್ಟಿಯಿಂದ ವಿಧಾನ ಪರಿಷತ್‍ನಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕಿದೆ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಇದು ಅತ್ಯಂತ ಮಹತ್ವದ್ದು. ಈ ಭಾಗದಲ್ಲೂ ಬಿಜೆಪಿ ದೃಢಗೊಳ್ಳುತ್ತಿದೆ. ರಾಜ್ಯದೆಲ್ಲೆಡೆ ಬಿಜೆಪಿಗೆ ಅಪಾರ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

`ನಾಲ್ಕು ತಂಡಗಳ ಜನಸ್ವರಾಜ್ ಪ್ರವಾಸ ನಡೆಯುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಸ್ವರಾಜ್ ಯಾತ್ರೆ ನಡೆಯುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಜನಬೆಂಬಲ ಸಿಗುತ್ತಿದೆ. ಬಿಜೆಪಿ ಶಕ್ತಿ ಬೆಳೆಯುತ್ತಾ ಹೋಗಿದೆ. ಪಂಚಾಯತ್ ಚುನಾವಣೆಯಲ್ಲಿ 45 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆಂದು ಹೇಳಿದರು. ಸಚಿವರಾದ ಡಾ.ಅಶ್ವಥ್ ನಾರಾಯಣ, ಬಿ.ಎ.ಬಸವರಾಜು, ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಕಾರ್ಯದರ್ಶಿ ಮುನಿರಾಜು ಗೌಡ, ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News