ವಕ್ಫ್ ಆಸ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಮುಸ್ಲಿಮರ ಆರ್ಥಿಕ, ಶೈಕ್ಷಣಿಕ ಪ್ರಗತಿಗೆ ಸಹಾಯವಾಗಲಿದೆ: ಶಾಫಿ ಸಅದಿ

Update: 2021-11-23 12:13 GMT

ಸಕಲೇಶಪುರ: ವಕ್ಫ್ ಆಸ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಮುಸ್ಲಿಮರ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಸಹಾಯವಾಗಲಿದೆ ಎಂದು ರಾಜ್ಯ ವಕ್ವ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ಹೇಳಿದರು.

ತಾಲೂಕಿನ ಮಂಜರಾಬಾದ್ ದರ್ಗಾದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಮಂಜರಾಬಾದ್ ದರ್ಗಾ  ಮಾಹಿತಿ ಕೈಪಿಡಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ದೇಶದ ಅತಿ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ಮಂಡಳಿಯನ್ನು ಸುಧಾರಣೆ ಮಾಡುವ ಕೆಲಸಕ್ಕೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.

 ರಾಜ್ಯ ಬೋರ್ಡ್ ಅಧೀನದಲ್ಲಿ ಮೂವತ್ತೈದು ಸಾವಿರಕ್ಕೂ ಹೆಚ್ಚು ನೊಂದಾಯಿತ ಸಂಸ್ಥೆಗಳಿದ್ದು ಲೆಕ್ಕಪತ್ರ ಸೇರಿದಂತೆ ಇತರೆ ಕಾರ್ಯಚಟುವಟಿಕೆಗಳನ್ನು ಸುಧಾರಣೆ ಮಾಡುವಲ್ಲಿ ಬಹಳಷ್ಟು ಸಮಯ ಅಗತ್ಯತೆ ಇದೆ ಎಂದರು.

ವಕ್ವ್ ಸಂಸ್ಥೆ ಜನ ಸಾಮಾನ್ಯರ ಕೈಗೆಟುಕುವ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಸಮಸ್ಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಸ್ಪಂದಿಸದಿದ್ದರೆ ನೇರವಾಗಿ ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.

 ಜಿಲ್ಲೆಯಲ್ಲಿ ಇರುವಂತಹ ಆಸ್ತಿಯನ್ನು ಸಮರ್ಪಕವಾಗಿ ಸರ್ವೆ ಮಾಡಿಸಿ ಅತಿಕ್ರಮಣವನ್ನು ತೆರವುಗೊಳಿಸುವ ಹಾಗೂ ವಿದ್ಯಾ ಸಂಸ್ಥೆ ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ವಾಗಿರುವಂತೆ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದಾಗ ಲಾಗುವುದು ಎಂದು ಹೇಳಿದರು.

 ವಕ್ವ್ ಅಧಿಕಾರಿಗಳು ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದರೆ ಸಂಸ್ಥೆ ಜನಸಾಮಾನ್ಯರ ಸಂಸ್ಥೆಯಾಗುತ್ತದೆ ಆದರೆ ಅಧಿಕಾರಿಗಳ ನಿರ್ಲಕ್ಷ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು.

 ಮಂಡಳಿಯ ಮಾಜಿ ರಾಜ್ಯಾಧ್ಯಕ್ಷ ರಿಯಾಜ್ ಖಾನ್ ಮಾತನಾಡಿ, ಸಮರ್ಥ ವ್ಯಕ್ತಿ ಧಾರ್ಮಿಕ ವಿದ್ವಾಂಸರ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ ಅಧ್ಯಕ್ಷರಾಗುವ ಹಾದಿ ಸುಗಮವಾಗಿರಲಿಲ್ಲ ಬಹಳಷ್ಟು ಕಷ್ಟಕರವಾದ ಹಾದಿಯನ್ನು ತುಳಿದು ಅಧ್ಯಕ್ಷ ಸ್ಥಾನವನ್ನು  ಅಲಂಕರಿಸಿದ್ದಾರೆ ಇವರಿಂದ ಸಮಾಜ ನಿರೀಕ್ಷಿಸುವ ಅಂತಹ ಎಲ್ಲಾ ಕೆಲಸಗಳನ್ನು ಪಡೆಯಬಹುದಾಗಿದೆ ಎಂದರು.

ರಾಜ್ಯ ವಕ್ಫ್ ಮಂಡಳಿಯ ನಿರ್ದೇಶಕರಾದ ಯಾಕೂಬ್ ಯೂಸೂಪ್,  ಮಾತನಾಡಿ ಮಂಡಳಿ ಮಸೀದಿಯ ಆಡಳಿತದ ಜೊತೆಗೆ ಸಮಾಜದ ಸುಧಾರಣೆಗೆ ಅಗತ್ಯವಿರುವ ಕೆಲಸಗಳನ್ನು ಸಹ ನೆರವೇರಿಸಬೇಕು ಬರುವ ಆದಾಯದಲ್ಲಿ ನಿರ್ಗತಿಕರಿಗೆ ಬಡವರಿಗೆ ಶೈಕ್ಷಣಿಕ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯಕೀಯ ಅಗತ್ಯವಿರುವ ವ್ಯಕ್ತಿಗಳನ್ನು ಗುರುತಿಸಿ ಆರ್ಥಿಕ ನೆರವು ನೀಡಬೇಕು ಎಂದರು.

ವೇದಿಕೆಯಲ್ಲಿ ಮಂಜ್ರಾಬಾದ್ ದರ್ಗಾ ಸಮಿತಿ ಅಧ್ಯಕ್ಷ ಮಲ್ನಾಡ್ ಮೆಹಬೂಬ್, ಕಾರ್ಯದರ್ಶಿ ಹಸೆನಾರ್ ಆನೆ ಮಹಲ್ ಇದ್ದರು.

ಕಾರ್ಯಕ್ರಮದಲ್ಲಿ ಜಾಮೀಯ ಮಸೀದಿ ಅಧ್ಯಕ್ಷ ಜಾಫರ್ ಸಾಬ್, ಕಾರ್ಯದರ್ಶಿಯಾದ ತಜಮುಲ್, ಪುರಸಭೆಯ ಮಾಜಿ ಅಧ್ಯಕ್ಷ ಸಯ್ಯದ್ ಮುಪೀಝ್, ಇಬ್ರಾಹಿಂ ಯಾದ್ಗಾರ್, ವಕ್ವ್ ಮಂಡಳಿ ಮಾಜಿ ಅಧ್ಯಕ್ಷ ಪರ್ವೀಜ್,  ಮುಸ್ಲಿಂ ಜಮಾತ್ ಅಧ್ಯಕ್ಷರಾದ ಅಬೂಬಕ್ಕರ್,ದರ್ಗಾ ಸಮಿತಿಯ ಸದಸ್ಯರಾದ ಹಾರೀಸ್, ಎಸ್ಸೆಸೆಫ್ ಮುಖಂಡ ಹಸೈನಾರ್,  ಸುನ್ನಿ ವೆಲ್ ಫೇರ್  ಅಧ್ಯಕ್ಷ ಹನೀಫ್ ಸೇರಿದಂತೆ ತಾಲೂಕಿನ ಹಲವು ಮಸೀದಿಗಳ ಅಧ್ಯಕ್ಷರು ಕಾರ್ಯಕರ್ತರು ಸಂಘ ಸಂಸ್ಥೆಯ ಪ್ರಮುಖರು ಹಾಜರಿದ್ದರು.

ಮಂಜರಾಬಾದ್ ದರ್ಗಾದ ಸಮಗ್ರ ಮಾಹಿತಿ ನೀಡುವ ಕೈಪಿಡಿಯನ್ನು  ಮಂಡಳಿಯ ರಾಜ್ಯ ಅಧ್ಯಕ್ಷ ಶಾಫಿ ಸಅದಿ ಅವರು ಬಿಡುಗಡೆಗೊಳಿಸಿ ಮಂಜ್ರಾಬಾದ್ ದರ್ಗಾ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರವಾಸಿಗರಿಗೆ ಅಗತ್ಯವಿರುವವರಿಗೆ ಶೌಚಾಲಯ ಸೇರಿದಂತೆ ವ್ಯವಸ್ಥೆಯೂ ಸಹ ಇಲ್ಲಿದೆ. ಬಡವರಿಗೆ ಮಧ್ಯಮವರ್ಗದವರಿಗೆ ಶುಭಕಾರ್ಯಗಳಿಗೆ ಅನುಕೂಲವಾಗಲು ಶಾದಿ ಮಹಲ್ ನಿರ್ಮಿಸಲಾಗಿದೆ. ಗ್ರಂಥಾಲಯ ವ್ಯವಸ್ಥೆ ಇದೆ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ನೀಡುವುದರ ಜೊತೆಗೆ ಉನ್ನತ ದರ್ಜೆಯ ಶಿಕ್ಷಣಕ್ಕಾಗಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥಿತವಾದ ವಸತಿಗೃಹಗಳು ವ್ಯವಸ್ಥೆ ಇಲ್ಲಿದೆ ವಾತಾವರಣವು ಸಹ ಸುಂದರವಾಗಿ ಇಟ್ಟುಕೊಂಡಿದ್ದಾರೆ ಎಂದು ಶ್ಲಾಘಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News