ಬಿಟ್ ಕಾಯಿನ್ ತನಿಖೆ ಪಾರದರ್ಶಕವಾಗಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
Update: 2021-11-24 18:25 IST
ಬೆಂಗಳೂರು: ಬಿಟ್ ಕಾಯಿನ್ ಹ್ಯಾಕಿಂಗ್ ಆರೋಪ ಎದುರಿಸುತ್ತಿರುವ ಶ್ರೀಕಿ ವಿರುಧ್ದ ಮೊಕದ್ದಮೆಗಳು ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದು, ಸರಕಾರ ಸತ್ಯಾಸತ್ಯತೆ ಹೊರತರಲು ಬದ್ಧವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಅವಧಿಯಲ್ಲಿ ಯಾವ ರೀತಿಯಲ್ಲಿ ತನಿಖೆ ಯಾಗಿದೆ ಎಂಬುದು ಮುಗಿದ ಅಧ್ಯಾಯವಾಗಿದೆ. ನಮ್ಮ ಸರಕಾರದ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಸತ್ಯಾ ಸತ್ಯತೆ ಹೊರಬರಲಿದೆ ಎಂದು ಸಚಿವರು ತಿಳಿಸಿದರು.
ಹ್ಯಾಕಿಂಗ್ ಗೆ ಒಳಗಾಗಿ ಮೋಸ ಹೋಗಿದ್ದೇವೆ ಎಂದು ಇದುವರೆಗೂ ಯಾವ ಸಂಸ್ಥೆಯೂ ಪೊಲೀಸರಿಗೆ ದೂರು ದಾಖಲಿಸಿಲ್ಲ ಎಂದ ಸಚಿವರು, ಕಾಂಗ್ರೆಸ್ ಮುಖಂಡರು ಸರಕಾರದ ಮೇಲೆ ಊಹಾಪೋಹ ಗಳ ಮೇಲೆ ಆರೋಪ ಹೊರಿಸಿದ್ದಾರೆ ಎಂದೂ ಹೇಳಿದರು.
ಪ್ರತಿಪಕ್ಷಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸದನದಲ್ಲಿ ಸಮರ್ಪಕವಾಗಿ, ಉತ್ತರಿಸುವುದಾಗಿ ಸಚಿವರು ತಿಳಿಸಿದರು.