ತಮ್ಮ ಕಾಲೇಜಿನಲ್ಲಿ ಎಬಿವಿಪಿ ರಾಜ್ಯ ಸಮ್ಮೇಳನ ಮಾಡಿದವರಿಗೆ ಕಾಂಗ್ರೆಸ್ ಟಿಕೆಟ್: ದಿನೇಶ್ ಅಮೀನ್ ಮಟ್ಟು ಟೀಕೆ
ಮಂಗಳೂರು, ನ. 24 : ವಿಧಾನ ಪರಿಷತ್ ಚುನಾವಣೆಗೆ ಮಂಗಳೂರಿನಿಂದ ಮಂಜುನಾಥ್ ಭಂಡಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಹಿರಿಯ ಪತ್ರಕರ್ತ , ಲೇಖಕ ದಿನೇಶ್ ಅಮೀನ್ ಮಟ್ಟು ಅವರು ಕಾಂಗ್ರೆಸ್ ನ ಈ ನಡೆಯನ್ನು ಪರೋಕ್ಷವಾಗಿ ಟೀಕಿಸಿ, ವ್ಯಂಗ್ಯವಾಡಿದ್ದಾರೆ.
ಬುಧವಾರ ಫೇಸ್ ಬುಕ್ ಪೋಸ್ಟ್ ಹಾಕಿರುವ ದಿನೇಶ್ ಅಮೀನ್ ಮಟ್ಟು " ಕರಾವಳಿಯ ಕೋಮುವಾದದ ವಿರುದ್ದ ಕಾಂಗ್ರೆಸ್ ಪಕ್ಷ ನಡೆಸಲಿರುವ ನಿರ್ಣಾಯಕ ಹೋರಾಟದ ನೇತೃತ್ವ ವಹಿಸಲು ವಿಧಾನ ಪರಿಷತ್ ಸದಸ್ಯರಾಗಿ ಹೊಸ ಸೇನಾಪತಿ ಆಗಮಿಸಲಿದ್ದಾರೆ. ಅವರ ಹೆಸರು ಮಂಜುನಾಥ ಭಂಡಾರಿ. ತಮ್ಮ ಕಾಲೇಜಿನಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಸಂಘ ಪರಿವಾರದ ಅಂತರಂಗವನ್ನು ಚೆನ್ನಾಗಿ ಅರಿತಿರುವ ಕಾರಣದಿಂದಾಗಿ ಅದರ ವಿರುದ್ಧ ಹೋರಾಟಕ್ಕೆ ಇವರೇ ಸರಿ ಎಂದು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆಯಂತೆ" ಎಂದು ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಗೆ ಭಾರೀ ಪೈಪೋಟಿ ಏರ್ಪಟ್ಟು ಕೊನೆಗೆ ಕಾಂಗ್ರೆಸ್ ಮುಖಂಡ, ಮಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರ ಮಾಲಕ ಮಂಜುನಾಥ್ ಭಂಡಾರಿ ಅವರಿಗೆ ಪಕ್ಷ ಮಣೆ ಹಾಕಿದೆ. ಆದರೆ ಪಕ್ಷದ ಈ ನಡೆ ಈಗ ಟೀಕೆಗೆ ಒಳಗಾಗಿದೆ.