ಎಂಜಿನಿಯರಿಂಗ್-ವೈದ್ಯಕೀಯ ವಿಷಯಗಳ ಪಠ್ಯ ಕ್ರಮ ಕನ್ನಡದಲ್ಲಿ ರಚನೆಯಾಗಲಿ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-11-24 17:28 GMT

ಬೆಂಗಳೂರು, ನ.24: ಕನ್ನಡ ಭಾಷೆಯು ಅತ್ಯಂತ ಪ್ರಾಚೀನವೂ ಮತ್ತು ಶಾಸ್ತ್ರೀಯ ಭಾಷೆಗಳಲ್ಲಿ ಪ್ರಮುಖವಾಗಿದ್ದು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಷಯಗಳನ್ನು ಸರಳವಾಗಿ ಮತ್ತು ಸುಲಲಿತವಾಗಿ ವಿದ್ಯಾರ್ಥಿಗಳಿಗೆ ಬೋಧಿಸಲು ನೆರವಾಗುವಂತೆ ಪಠ್ಯಕ್ರಮಗಳ ರಚನೆಯ ಅಗತ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಾದಿಸಿದರು.

ಬುಧವಾರ ನಗರದಲ್ಲಿ ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ.ಹಂಪ ನಾಗರಾಜಯ್ಯ ರಚಿಸಿದ ‘ಚಾರುಲತ-ವಸಂತ’ ಎಂಬ ಕಾವ್ಯ ಕಥನದ ಇಂಗ್ಲೀಷ್ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಂಪನಾ ರಚಿಸಿರುವ ಚಾರುಲತಾ-ವಸಂತ ಕೃತಿ ಕನ್ನಡದಲ್ಲಿ ರಚಿತವಾದ ಸುಂದರ ಕಥನಾ ಕಾವ್ಯವಾಗಿದ್ದು, ಇಂತಹ ಕೃತಿಯನ್ನು ಮೂಲ ಕೃತಿಗೆ ಧಕ್ಕೆ ಬಾರದಂತೆ ತರ್ಜುಮೆ ಮಾಡಲಾಗಿದೆ. ಅನುವಾದ ಕೃತಿಗಳಿಂದ ಕನ್ನಡ ಸಾರಸ್ವತ ಲೋಕ ವಿಸ್ತಾರವಾಗುತ್ತದೆ ಎಂದು ಅವರು ಹೇಳಿದರು.

ಪ್ರಪಚಂದ ಯಾವುದೇ ಭಾಷೆಗಳಿಗೂ ಪ್ರಬುದ್ಧತೆಯಲ್ಲಿ ಸರಿಸಾಟಿಯಾದ ಕನ್ನಡ ಭಾಷೆಯಲ್ಲಿಯೇ ತಾಂತ್ರಿಕ ವಿಷಯಗಳಾದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಷಯಗಳ ಪಠ್ಯಕ್ರಮಗಳು ರಚನೆಯಾಗಬೇಕು ಎಂದು ಪ್ರತಿಪಾದಿಸಿದ ಅವರು, ಈ ನಿಟ್ಟಿನಲ್ಲಿ ಸಾಹಿತಿಗಳೂ ಮತ್ತು ಚಿಂತಕರು ಸಲಹೆ ಸೂಚನೆಗಳನ್ನು ನೀಡಿ ಎಂದು ಕೋರಿದರು.

ಕನ್ನಡ ಭಾಷೆಯಲ್ಲಿ ರಚಿತವಾದ ಅತ್ಯುತ್ತಮ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಗೊಳಿಸಲು  ಅಡ್ಡಿಯಾಗಿರುವ ‘ಲೇಖಕರ ಹಕ್ಕು’ ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಲು ಭರವಸೆ ನೀಡಿದ ಅವರು, ಕನ್ನಡ ಭಾಷೆಯಲ್ಲಿ ರಚಿತವಾಗುವ ಎಲ್ಲ ಮೌಲ್ಯಯುತ ಕೃತಿಗಳು ನಾಡಿನ ಆಸ್ತಿಯಾಗಿದ್ದು, ಕನ್ನಡ ಹಾಗೂ ಸಾರಸ್ವತ ಲೋಕಕ್ಕೆ ನೀಡುವ ಕೊಡುಗೆಗಳಾಗಿವೆ ಎಂದರು.

ಚಾರುಲತಾ-ವಸಂತ ಕೃತಿಯ ಬಗ್ಗೆ ವಿಮರ್ಶಕ ರಾಜೇಂದ್ರ ಚನ್ನಿ ಮತ್ತು ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಕೃತಿಯನ್ನು ಪರಿಚಯಿಸಿ ಮಾತನಾಡಿದರು. ಕೃತಿಯ ರಚನಕಾರ ಹಂಪ ನಾಗರಾಜಯ್ಯ ಮತ್ತು ಅವರ ಪತ್ನಿ ಡಾ.ಕಮಲಾ ಹಂಪನಾ ಅವರನ್ನು ಸಚಿವ ಆರಗ ಜ್ಞಾನೇಂದ್ರ ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು. ಸಾಹಿತಿಗಳಾದ ಡಾ.ಎಚ್.ಎಸ್.ವೆಂಕಟೇಶ್‍ಮೂರ್ತಿ, ಗುರುರಾಜ ಕರ್ಜಗಿ ಹಾಗೂ ಇತರ ಗಣ್ಯರೂ ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News