ಶಿವಮೊಗ್ಗ ಕೃಷಿ ವಿವಿ 6ನೇ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ

Update: 2021-11-25 12:47 GMT

ಶಿವಮೊಗ್ಗ,ನ.25: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದರು.

ಕೆಳದಿ ಶಿವಪ್ಪನಾಯಕ  ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ನವುಲೆಯ ವಿವಿ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ 6 ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಘಟಿಕೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಬಿ.ಎಸ್ಸಿ.ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಭಾಗದ ಸ್ನಾತಕ ಪದವಿಯಲ್ಲಿನ  238 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ 105 ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 15 ವಿದ್ಯಾರ್ಥಿಗಳಿಗೆ ಪಿಹೆಚ್.ಡಿ.ಪದವಿಯನ್ನು  ರಾಜ್ಯಪಾಲರೂ ಹಾಗೂ ವಿವಿಯ ಕುಲಾಧಿಪತಿಗಳೂ ಆದ ಥಾವರ್‌ಚಂದ್ ಗೆಹ್ಲೋಟ್   ಪ್ರದಾನ ಮಾಡಿದರು.

ಇದರಲ್ಲಿ 9 ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕ,14 ಎಂ.ಎಸ್ಸಿ. ವಿದ್ಯಾರ್ಥಿಗಳಿಗೆ 15 ಚಿನ್ನದ ಪದಕ ಮತ್ತು 5 ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕ ಸೇರಿ ಒಟ್ಟು 35 ಚಿನ್ನದ ಪದಕಗಳನ್ನು 28 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಿದರು.

ಗೌರವ ಡಾಕ್ಟರೇಟ್ ಪದವಿ ಪ್ರಧಾನ:

ಘಟಿಕೋತ್ಸವದಲ್ಲಿ  ಹೆಸರಾಂತ ಅಣು ಜೀವಶಾಸ್ತ್ರಜ್ಞ ಭಾರತೀಯ ಸಂಜಾತ ವಿಜ್ಞಾನಿ ಡಾ.ಕೃಷ್ಣಮೂರ್ತಿ ಎಲ್ಲಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.  ವಿಶ್ವವಿದ್ಯಾಲಯದ ವತಿಯಿಂದ ಪ್ರಪ್ರಥಮ ಬಾರಿಗೆ ಚೊಚ್ಚಲ ಗೌರವ ಡಾಕ್ಟರೇಟ್ ಪದವಿಯನ್ನು ಹೈದ್ರಾಬಾದ್‌ನ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ  ಡಾ.ಕೃಷ್ಣಮೂರ್ತಿ ಎಲ್ಲಾ ಅವರಿಗೆ ಪ್ರದಾನ ಮಾಡಲಾಯಿತು.ಕೃಷ್ಣಮೂರ್ತಿ ಅವರು ತಮ್ಮ ಸಂಸ್ಥೆಯ ಮೂಲಕ ರೋಟವೈರಸ್, ಟೈಫಾಯಿಡ್ ಕಾಂಜುಗೇಟ್, ಚಿಕೂನ್ ಗುನ್ಯಾ ಮತ್ತು ಜಿಕಾ ಮುಂತಾದ ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕೈಗೆಟುಕುವ ದರದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಪ್ರಸಿದ್ಧರಾಗಿದ್ದಾರೆ.

ವಿವಿ ಉಪಕುಲಪತಿ ಡಾ. ಎಂ.ಕೆ. ನಾಯಕ್ ಎಲ್ಲರನ್ನು ಸ್ವಾಗತಿಸಿ ವಿವಿಯ ಸಾಧನೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ರಿಜಿಸ್ಟ್ರಾರ್ ಡಾ. ಆರ್. ಲೋಕೇಶ್, ಆಡಳಿತ ಮಂಡಳಿ ಸದಸ್ಯರು  ಉಪಸ್ಥಿತರಿದ್ದರು.

ಆಹಾರೋತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿ: ಡಾ.ಸಿ.ಆರ್. ಅಗರವಾಲ್

ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ  ಆಹಾರೋತ್ಪಾದನೆಗೆ ಆದ್ಯತೆ ನೀಡಬೇಕು ಎಂದು ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಉಪ ಮಹಾ ನಿರ್ದೇಶಕ ಡಾ.ಸಿ.ಆರ್. ಅಗರವಾಲ್ ಕರೆ ನೀಡಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದವತಿಯಿಂದ ಗುರುವಾರ ನವುಲೆಯ ವಿವಿ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ 6 ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಿದ ಅವರು, ಪೋಷಕಾಂಶಯುಕ್ತ ಆಹಾರ ಬೆಳೆಗಳ  ಕಡೆ ಹೆಚ್ಚಿನ ಒತ್ತು ನೀಡಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಪೋಷಕಾಂಶಯುಕ್ತ ಆಹಾರ ಉತ್ಪಾದನೆ ಇಂದು ತುಂಬಾ ಅಗತ್ಯವಾಗಿದ್ದು, ಇದನ್ನು  ಕೃಷಿ ಪದವೀಧರರು ಸವಾಲಾಗಿ ಸ್ವೀಕರಿಸಿ ಹೆಚ್ಚಿನ ಪೋಷಕಾಂಶ ಇರುವ ಆಹಾರ ಬೆಳೆಗಳನ್ನು ಬೆಳೆಯುವ ಕಡೆ ಗಮನ ನೀಡುವಂತೆ ಕರೆ ನೀಡಿದರು.

ತಂತ್ರಜ್ಞಾನ  ಹೊರತುಪಡಿಸಿ ಪೋಷಕಾಂಶಯುಕ್ತ ಬೆಳೆ ಬೆಳೆಯುವುದು ಸಾಧ್ಯವಿಲ್ಲ.  ಇಂದಿನ ಆಧುನಿಕ  ಯುಗದಲ್ಲಿ ಜನರ ಆಹಾರ ಕ್ರಮ ಕೂಡ ಬದಲಾಗುತ್ತಿದೆ.  ಇದರಿಂದಾಗಿ ಆರೋಗ್ಯದ ಮೇಲೂ  ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಹಣ್ಣು, ದ್ವಿದಳ ಧಾನ್ಯಗಳ ಉತ್ಪಾದನೆಗೆ ಹೆಚ್ಚಿನ  ಒತು ನೀಡಬೇಕೆಂದರು ಹೇಳಿದರು.

ಇಂದು ಶೇ.75 ರಷ್ಟು ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತಿದ್ದು, ಇದನ್ನು ಸರಿಪಡಿಸಕೊಂಡು ಹೋಗುವಂತಹ ಕೃಷಿ ಪದ್ಧತಿಗೆ ಒತ್ತು ನೀಡಬೇಕಿದೆ. ಪೋಷಕಾಂಶಯುಕ್ತ ಹಣ್ಣುಗಳನ್ನು ಬೆಳೆಯುವ ಕಡೆ ಗಮನ ನೀಡಿದರೆ  ಕೃಷಿ  ಪದವಿಗೂ ಒಂದು ತೂಕ ಬರುತ್ತದೆ. ಪದವಿಗಿಂತ ಬದ್ಧತೆ ಅತೀ ಮುಖ್ಯವಾಗಿದ್ದು,  ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡರು ಬದ್ಧತೆ ಇರಬೇಕೆಂದು ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರದ ಭವಿಷ್ಯಕ್ಕೆ ಹೊಸ ದಿಕ್ಸೂಚಿ ನೀಡುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಓದಿನ ಕ್ರಮವೇ ಬದಲಾಗುತ್ತಿದೆ. ಕೌಶಲ್ಯ  ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದರಿಂದ ಮುಂದಿನ  ದಿನಗಳಲ್ಲಿ ಪದವೀಧರರಿಂದ ನಾವಿನ್ಯತೆಯ ಶೋಧ ಹಾಗೂ ಉದ್ಯಮಗಳ ಸ್ಥಾಪನೆ  ನಿರೀಕ್ಷಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News