ಹಾಸನ: ತಾಯಿಯ ಮೊಬೈಲ್ ಗೆ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿಯ ರಕ್ಷಣೆ ​

Update: 2021-11-26 18:13 GMT

ಹಾಸನ: ತಾಯಿ ಮೊಬೈಲ್‌ಗೆ ಮೆಸೇಜ್ ಮಾಡಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಲಾಗಿದೆ. 

ನಗರದ ಸತ್ಯಮಂಗಳ ಬಡಾವಣೆಯ 9 ನೇ ತರಗತಿ ವಿದ್ಯಾರ್ಥಿನಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಎಂದು ಇಂದು ಬೆಳಗಿನ ಜಾವ ತಾಯಿಯ ಮೊಬೈಲ್ ಗೆ ಮೆಸೇಜ್ ಮಾಡಿ ಹೊರಗಡೆ ತೆರಳಿದ್ದಳು. 

ಮೆಸೇಜ್ ನೋಡಿ ಆತಂಕಗೊಂಡ ಬಾಲಕಿ ಪೋಷಕರು, ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಪೊಲೀಸರು ಹಾಗೂ ಅಗ್ನಿಶಾಮಕ ತಂಡ, ಸತ್ಯಮಂಗಲ ಕೆರೆ ಆವರಣಕ್ಕೆ ದೌಡಾಯಿಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತದೇಹದ ಶೋಧ ಕಾರ್ಯದಲ್ಲಿ ನಿರತರಾಗಿದ್ದರು.

ಈ ವೇಳೆ ನಿತ್ರಾಣ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಸಿಕ್ಕಿದ್ದಾಳೆ. ನಾನು ಸಾಯುತ್ತೇನೆ ಎಂದು ಹೋದ ಬಾಲಕಿ ಕೆರೆಗೆ ಬಿದ್ದ ಬಳಿಕ ಪ್ರಾಣರಕ್ಷಣೆಗಾಗಿ ಪೊದೆಯ ಆಶ್ರಯ ಪಡೆದಿದ್ದಳು ಎನ್ನಲಾಗಿದೆ. 

ಕೂಡಲೇ ಆಕೆಯನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಅಸ್ವಸ್ಥಗೊಂಡಿದ್ದ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News