ಪದ್ಮನಾಭ ತೀರ್ಥರ ಆರಾಧನಾ ಮಹೋತ್ಸವ ವಿವಾದ: ಮಂತ್ರಾಲಯ, ಉತ್ತರಾದಿ ಮಠಗಳ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2021-11-30 13:42 GMT

ಬೆಂಗಳೂರು, ನ.30: ಪೂಜೆ, ಆರಾಧನೆ ನಡೆಸುವ ಕುರಿತು ಪ್ರತಿಬಾರಿಯೂ ನ್ಯಾಯಾಲಯವೇ ತೀರ್ಮಾನಿಸಬೇಕು ಎಂಬಂತೆ ವರ್ತಿಸುತ್ತಿದ್ದೀರಿ. ನೀವು ಮಠ ನಡೆಸುತ್ತಿದ್ದೀರೋ ಅಥವಾ ಕಾಲೇಜನ್ನೋ ಎಂದು ಹೈಕೋರ್ಟ್ ಪೀಠವು ಮಂತ್ರಾಲಯ ಹಾಗೂ ಉತ್ತರಾದಿ ಮಠಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.

ಕೊಪ್ಪಳದ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ 2021ರ ಡಿ.2ರಿಂದ ಆರಂಭವಾಗಲಿರುವ ಪದ್ಮನಾಭ ತೀರ್ಥರ 697ನೆ ಆರಾಧನಾ ಮಹೋತ್ಸವವನ್ನು ಯಾರು ನಡೆಸಬೇಕೆಂಬ ಕುರಿತು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠಗಳ ನಡುವೆ ಏರ್ಪಟ್ಟಿರುವ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಅಸಮಾಧಾನ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಎರಡೂ ಮಠಗಳ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠ, ಎರಡೂ ಮಠಗಳಿಗೆ ಅತಿ ದೊಡ್ಡ ಪರಂಪರೆ ಇದೆ. ಆದರೆ, ಇಬ್ಬರೂ ಪ್ರತಿಬಾರಿ ಕೋರ್ಟ್ ಆದೇಶ ಪಡೆದೇ ಆರಾಧನೆ ಮಾಡುವುದನ್ನು ನೋಡಿದರೆ ನೀವು ಮಠ ನಡೆಸುತ್ತಿದ್ದೀರೊ ಅಥವಾ ಕಾಲೇಜು ನಡೆಸುತ್ತಿದ್ದೀರೊ ಎಂಬ ಅನುಮಾನ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. 

ಈ ವ್ಯಾಜ್ಯವನ್ನು ಮಠಗಳು ಮುಂದುವರಿಸಿಕೊಂಡು ಹೋಗುವುದೂ ಸರಿಯಲ್ಲ. ಆದಷ್ಟು ಬೇಗ ಎರಡೂ ಬಣಗಳ ವ್ಯವಸ್ಥಾಪನಾ ಮಂಡಳಿಯವರು ಒಟ್ಟಿಗೆ ಕುಳಿತು ವಿವಾದ ಬಗೆಹರಿಸಿಕೊಳ್ಳಿ. ಬೇಕಿದ್ದರೆ ಇಲ್ಲೇ ಕೋರ್ಟ್ ಆವರಣದ ಯಾವುದಾದರೂ ಮರದ ಕೆಳಗೆ ಕುಳಿತು ಮಾತನಾಡಿ ಎಂದು ತಾಕೀತು ಮಾಡಿತು.

ಅಲ್ಲದೇ, ಸಂವಿಧಾನದ 226ನೇ ವಿಧಿಯನ್ನು ಈ ನೆಲದ ಶೋಷಿತ ವರ್ಗಗಳು ಉಪಯೋಗಿಸಬೇಕೆ ಹೊರತು ನಿಮ್ಮಂತಹವರ ಈ ರೀತಿಯ ವ್ಯಾಜ್ಯಗಳಿಗಲ್ಲ ಎಂದಿತು. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್, ಮೊದಲ ಪೂಜೆಯನ್ನು ಉತ್ತರಾದಿ ಮಠದವರು ನಡೆಸಬೇಕು ಮತ್ತು ಉತ್ತರಾರ್ಧದ ಪೂಜೆಯನ್ನು ರಾಘವೇಂದ್ರಸ್ವಾಮಿ ಮಠದವರು ನಡೆಸಬೇಕು ಎಂದು ತಿಳಿಸಿತು.

2021ರ ಡಿಸೆಂಬರ್ 2ರಿಂದ ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ಪದ್ಮನಾಭ ತೀರ್ಥರ 697ನೇ ಆರಾಧನಾ ಮಹೋತ್ಸವ ನಡೆಯಲಿದೆ. ಪದ್ಮನಾಭ ತೀರ್ಥರು ಮಧ್ವಾಚಾರ್ಯರ ಮೊದಲನೇ ಶಿಷ್ಯರಾಗಿದ್ದು ಅವರ ಆರಾಧನೆ ಡಿಸೆಂಬರ್ 2ರಿಂದ ಮೂರು ದಿನಗಳ ಕಾಲ ನಡೆಯಲಿದೆ. 

ಶೋಷಿತ ವರ್ಗಗಳು ಉಪಯೋಗಿಸಬೇಕು, ನೀವಲ್ಲ

‘ಸಂವಿಧಾನದ 226ನೆ ವಿಧಿಯನ್ನು ಈ ನೆಲದ ಶೋಷಿತ ವರ್ಗಗಳು ಉಪಯೋಗಿಸಬೇಕೆ ಹೊರತು, ಮಠಗಳು ಈ ರೀತಿಯ ವ್ಯಾಜ್ಯಗಳನ್ನು ಮುಂದಿಟ್ಟುಕೊಂಡು ಕೋರ್ಟ್ ಮೆಟ್ಟಿಲೇರುವುದು ಸೂಕ್ತವಲ್ಲ.’

-ಕೃಷ್ಣ ಎಸ್. ದೀಕ್ಷಿತ್, ಹೈಕೋರ್ಟ್ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News