ಧಾರವಾಡ; ಎಸ್.ಡಿ.ಎಮ್. ಆಸ್ಪತ್ರೆಯ 500 ಮೀಟರ್ ವ್ಯಾಪ್ತಿಯಲ್ಲಿ ಸೀಲ್ ಡೌನ್: ತಪ್ಪು ಸಂದೇಶದ ಬಗ್ಗೆ ಸ್ಪಷ್ಟೀಕರಣ

Update: 2021-12-01 07:02 GMT
ಫೈಲ್ ಫೋಟೊ

ಧಾರವಾಡ : ಇಲ್ಲಿನ ಧಾರವಾಡದ ಎಸ್.ಡಿ.ಎಮ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಮತ್ತು ವೈದ್ಯರಲ್ಲಿ  ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದರಿಂದ ಕಳೆದ ನ.25ರಿಂದ  ಎಸ್.ಡಿ.ಎಮ್. ಮಹಾವಿದ್ಯಾಲಯ ಬಂದ್ ಮಾಡಲಾಗಿದೆ ಮತ್ತು ಸೋಂಕಿತ ವಿದ್ಯಾರ್ಥಿಗಳು ಇರುವ ಎರಡು ವಸತಿ ನಿಲಯಗಳನ್ನು ಮಾತ್ರ ನಿಯಮಾನುಸಾರ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು,  ಮಕ್ಕಳ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಎಸ್.ಡಿ.ಎಮ್. ಆಸ್ಪತ್ರೆಯ ಸಮೀಪದ ಅಂಗನವಾಡಿ, ಶಾಲೆ,ಕಾಲೇಜುಗಳಿಗೆ ಡಿ.1ರವರೆಗೆ ತರಗತಿಗಳನ್ನು ನಡೆಸದಂತೆ  ಸೂಚಿಸಲಾಗಿದೆ. ಆದರೆ ಜಿಲ್ಲಾಡಳಿತದಿಂದ ಯಾವುದೇ ಇತರ ಪ್ರದೇಶ ಅಥವಾ 500 ಮೀಟರ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಿದ ಕುರಿತು ಆದೇಶ ಹೊರಡಿಸಿರುವುದಿಲ್ಲ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಗೂ ಕೋವಿಡ್ ಪ್ರಸರಣವಾಗದಂತೆ ತಡೆಯಲು ಎಸ್.ಡಿ.ಎಮ್.ಆಸ್ಪತ್ರೆಯ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಮತ್ತು ಒಳರೋಗಿ ದಾಖಲಾತಿ ಮಾಡುವುದನ್ನು ಕೆಲವು ದಿನಗಳ ಕಾಲ ನಿಲ್ಲಿಸಲಾಗಿದೆ. ಉಳಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ, ಉದ್ಯಮಗಳನ್ನು ತೆರೆಯಲು ಅನುಮತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೆಗ್ಗಡೆ ಕಲಾಕ್ಷೇತ್ರದ ಆವರಣ ಮತ್ತು ಒಳಾಂಗಣದಲ್ಲಿ ಈಗಾಗಲೇ ಎರಡ-ಮೂರು ಬಾರಿ ಸ್ಯಾನಿಟೈಝೇಶನ್ ಮಾಡಲಾಗಿದ್ದು, ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಮದುವೆ, ಸಭೆಗಳಿಗೆ ಅನುಮತಿ ನೀಡಲಾಗುತ್ತಿದೆ. ಹೆಗ್ಗಡೆ ಕಲಾಕ್ಷೇತ್ರದಲ್ಲಿನ ಕಾರ್ಯಕ್ರಮಗಳಿಗೆ ಆಗಮಿಸುವ ಮತ್ತು ನಿರ್ಗಮನಕ್ಕೆ ಇರುವ ಸ್ಥಳವು ಪ್ರತ್ಯೇಕವಾಗಿರುತ್ತದೆ.

ಕಳೆದ ರವಿವಾರದಿಂದ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಕೇವಲ ನೂರು ಜನರಿಗೆ ಮಾತ್ರ ಅಲ್ಲಿ ಅವಕಾಶ ಕಲ್ಪಸಲಾಗಿದ್ದು, ಪ್ರತಿಯೊಬ್ಬರಿಗೂ ಮಾಸ್ಕ್ ಧಾರಣೆ, ಸ್ಯಾನಿಟೈಝರ್ ಬಳಕೆ, ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದೆ ಮತ್ತು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ ಎಂದು ತಿಳಿಸಿದರು.

ಆದರೆ ಕೆಲವು ಮಾಧ್ಯಮಗಳಲ್ಲಿ ಈ ಕುರಿತು ತಪ್ಪು ಮಾಹಿತಿ ಇರುವ ಸಂದೇಶ ಪ್ರಕಟವಾಗುತ್ತಿದೆ. ಸಾರ್ವಜನಿಕರಲ್ಲಿ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ ಮಾಡಲು ಜಾಗೃತಿ ಮೂಡಿಸುವ ವರದಿಗಳನ್ನು ಪ್ರಕಟಿಸಲು ಮಾಧ್ಯಮ ಮಿತ್ರರಲ್ಲಿ ವಿನಂತಿಸಲಾಗಿದೆ ಎಂದರು.

ವಿದ್ಯಾರ್ಥಿಗಳಿರುವ ಎರಡು ವಸತಿ ನಿಲಯ ಹಾಗೂ ಎಸ್.ಡಿ.ಎಮ್. ಆಸ್ಪತ್ರೆಯನ್ನು ಹೊರತುಪಡಿಸಿ, ಉಳಿದ ಕಡೆಗೆ ಎಲ್ಲೂ ಕಂಟೊನ್ಮೆಂಟ್ ಝೋನ್ ಅಥವಾ ಸೀಲ್ ಡೌನ್ ಪ್ರದೇಶವೆಂದು ಆದೇಶಿಸಿರುವುದಿಲ್ಲವೆಂದು  ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News