ಮಡಿಕೇರಿ: ಕಾರಿನ ಮೇಲೆ ಕಾಡಾನೆ ದಾಳಿ; ಪ್ರಾಣಾಪಾಯದಿಂದ ಪಾರಾದ ಕುಟುಂಬ

Update: 2021-12-02 10:02 GMT

ಮಡಿಕೇರಿ ಡಿ.2 : ಕುಶಾಲನಗರದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿದೆ. ಆನೆಕಾಡು ಬಳಿ ಘಟನೆ ನಡೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮೂವರು ಮಕ್ಕಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಪ್ರವಾಸಿತಾಣ ನಿಸರ್ಗಧಾಮವನ್ನು ವೀಕ್ಷಿಸಿ ಕುಶಾಲನಗರಕ್ಕೆ ತೆರಳಿದ್ದ ಕುಟುಂಬ ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿತು. ರಾತ್ರಿ ಸುಮಾರು 8 ಗಂಟೆ ಹೊತ್ತಿನಲ್ಲಿ ಕಾಡಾನೆ ದಿಢೀರ್ ಆಗಿ ಹೆದ್ದಾರಿಯಲ್ಲಿ ಪ್ರತ್ಯಕ್ಷವಾಗಿದೆ. ಕಾರನ್ನು ನಿಧಾನವಾಗಿ ಚಲಾಯಿಸಲಾಯಿತ್ತಾದರೂ ಕಾಡಾನೆ ಸಮೀಪಕ್ಕೆ ಬಂದಾಗಿತ್ತು. ಮಡದಿ, ಮಕ್ಕಳು ಆತಂಕದಿಂದ ಜೋರಾಗಿ ಕಿರುಚಿಕೊಳ್ಳಲು ಆರಂಭಿಸಿದರು. ದೂರದಲ್ಲಿ ಬೈಕ್ ನಲ್ಲಿ ಬರುತ್ತಿದ್ದವರು ವೇಗವಾಗಿ ಬರುವಂತೆ ಸನ್ನೆ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಕಾಡಾನೆ ತನ್ನ ದಂತದಿಂದ ಕಾರನ್ನು ಮಗುಚಲು ಯತ್ನಿಸಿದೆ. 

ಕಾರನ್ನು ವೇಗವಾಗಿ ಚಲಾಯಿಸಿ ಪ್ರಾಣಾಪಾಯದಿಂದ ಪಾರಾಗುವಲ್ಲಿ ಕುಟುಂಬ ಯಶಸ್ವಿಯಾಯಿತ್ತಾದರೂ ಆನೆ ಸ್ವಲ್ಪ ದೂರ ಹಿಂಬಾಲಿಸಿ ಆತಂಕವನ್ನು ಸೃಷ್ಟಿಸಿತು. ಹೇಗೋ ಜೀವ ಉಳಿಸಿಕೊಂಡು ಮಡಿಕೇರಿ ತಲುಪಿದ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ದಂತದಿಂದ ತಿವಿದ ಪರಿಣಾಮ ಕಾರಿನ ಒಂದು ಭಾಗ ಜಖಂ ಗೊಂಡಿದೆ.

ಹೆದ್ದಾರಿಯಲ್ಲಿ ಚಲಿಸುವವರು ಎಚ್ಚರದಿಂದಿರುವುದು ಉತ್ತಮ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News