ನೂತನ ತಂತ್ರಜ್ಞಾನ ಬಳಸಿ ಬಿಲ್ಡಿಂಗ್ ತ್ಯಾಜ್ಯದಿಂದಾಗುತ್ತಿರುವ ಮಾಲಿನ್ಯ ಕಡಿಮೆಗೊಳಿಸಿ: ಸಚಿವ ಡಾ.ಅಶ್ವಥ್ ನಾರಾಯಣ

Update: 2021-12-02 17:28 GMT

ಬೆಂಗಳೂರು, ಡಿ. 2: ‘ನಗರದ ಮಾಲಿನ್ಯಕ್ಕೆ ಕಟ್ಟಡ ನಿರ್ಮಾಣದ ತ್ಯಾಜ್ಯ ಪ್ರಮುಖ ಕಾರಣವಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಕರೆ ನೀಡಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಬಿಲ್ಡರ್ಸ್ ಅಸೋಷಿಯೇಷನ್ ಆಯೋಜಿಸಿದ್ದ ‘ಬಿಲ್ಡರ್ಸ್ ಡೇ'ನಲ್ಲಿ ಭಾಗವಹಿಸಿ, ‘ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಮೆಮೋರಿಯಲ್ ಪ್ರಶಸ್ತಿ'ಯನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದ ಅವರು, ನಗರಗಳ ಬೆಳವಣಿಗೆಯಲ್ಲಿ ಬಿಲ್ಡರ್ಸ್‍ಗಳ ಕೊಡುಗೆ ಅಪಾರ. ಸುಂದರ, ಆಧುನಿಕ ಹಾಗೂ ಕಡಿಮೆ ಸಮಸ್ಯೆಗಳನ್ನು ಹೊಂದುವ ನಗರಗಳ ನಿರ್ಮಾಣಕ್ಕೆ ನಮ್ಮಲ್ಲಿ ಸರಿಯಾದ ಸ್ಪಷ್ಟತೆ ಇಲ್ಲ. ಸಿಟಿ ಡೆವಲಪ್ಮೆಂಟ್ ಪ್ಲಾನ್‍ನಲ್ಲಿ ಇರುವ ದೊಡ್ಡ ಕೊರತೆ ಇದು. ಮುಂಬರುವ ಬೆಂಗಳೂರು ಸಿಡಿಪಿಯಲ್ಲಿ ಈ ಬಗ್ಗೆ ನಾವೆಲ್ಲರೂ ಸ್ಪಷ್ಟತೆಯನ್ನು ಹೊಂದಬೇಕಾಗಿದೆ ಎಂದು ತಿಳಿಸಿದರು. 

ನಮ್ಮ ನಗರದ ನಿರ್ಮಾಣದ ಬಗ್ಗೆ ಸ್ಪಷ್ಟ ಯೋಜನೆ ಹೊಂದುವುದು ಅವಶ್ಯ. ಇದರಿಂದ ನಮ್ಮ ನಗರಗಳನ್ನು ಇನ್ನಷ್ಟು ಸುಂದರಗೊಳಿಸಬಹುದು. ಅಲ್ಲದೆ, ಕಟ್ಟಡ ನಿರ್ಮಾಣದಲ್ಲಿ ಉಂಟಾಗುವ ತ್ಯಾಜ್ಯ ನಗರದ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. 2070ರ ಒಳಗಾಗಿ ಇದನ್ನು ಶೂನ್ಯದತ್ತ ಕೊಂಡೊಯ್ಯುವ ಗುರಿ ಹೊಂದಿದ್ದೇವೆ. ಕಟ್ಟಡ ನಿರ್ಮಾಣದಿಂದ ಆಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಹಾಗೂ ಕಡಿಮೆ ದರದಲ್ಲಿ ಕಟ್ಟಡ ನಿರ್ಮಾಣ ಮಾಡುವ ದೃಷ್ಟಿಯಿಂದ ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಕಾಸ್ಟ್ ಅಂಡ್ ಫ್ಯಾಬ್ರಿಕೇಟೆಡ್ ತಂತ್ರಜ್ಞಾನವನ್ನು ವಿದೇಶಗಳಲ್ಲಿ ಬಹಳಷ್ಟು ವರ್ಷಗಳಿಂದ ಬಳಸಲಾಗುತ್ತಿದೆ. ಇದರಿಂದಾಗಿ ಉತ್ತಮ ಗುಣಮಟ್ಟ ಹಾಗೂ ಕಡಿಮೆ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಬಹುದಾಗಿದೆ. ಅಲ್ಲದೆ, ಇದಕ್ಕೆ ತಗಲುವ ಸಮಯವೂ ಬಹಳ ಕಡಿಮೆ. ಇಂತಹ ತಂತ್ರಜ್ಞಾನಗಳ ಅಳವಡಿಕೆಗೆ ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮುಖ್ಯ ಇಂಜಿನೀಯರ್ ಬಿ.ಟಿ.ಮೋಹನ್ ಕೃಷ್ಣ ಹಾಗೂ ಬಿಲ್ಡರ್ಸ್ ಅಸೋಷಿಯೇಷನ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯರಾಘವ ರೆಡ್ಡಿ ಅವರಿಗೆ ಸರ್.ಎಂ.ವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, ಹಿರಿಯ ಬಿಲ್ಡರ್‍ಗಳಾದ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮತ್ತು ಗುತ್ತಿಗೆದಾರ ಎಂ.ತಿಬ್ಬೇಗೌಡ ಅವರನ್ನು ಸನ್ಮಾನಿಸಲಾಯಿತು. ಸೆಂಟ್ರಲ್ ವಿಭಾಗದ ಡಿಸಿಪಿ ಅನುಚೇತ್, ಅಧ್ಯಕ್ಷ ಎಂ.ರಮೇಶ್, ಜಿ.ಎಂ.ರವೀಂದ್ರ, ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News