×
Ad

ಸಿಎಂ ಬದಲಾವಣೆ ವಿಚಾರ: ಈಶ್ವರಪ್ಪ ಬಾಯಿ ತಪ್ಪಿ ಸತ್ಯ ಹೇಳಿದ್ದಾರೆ ಎಂದ ಸಿದ್ದರಾಮಯ್ಯ

Update: 2021-12-04 16:06 IST

ಶಿವಮೊಗ್ಗ, ಡಿ.4: ಮುರುಗೇಶ್ ನಿರಾಣಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು  ಸಚಿವ ಈಶ್ವರಪ್ಪ ಅವರು ನೀಡಿದ ಹೇಳಿಕೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈಶ್ವರಪ್ಪ ಬಾಯಿ ತಪ್ಪಿ ಸತ್ಯ ಹೇಳುತ್ತಾರೆ. ಅವರಿಗೆ ಸಿಎಂ ಮೇಲೆ ನಂಬಿಕೆ ಇಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳಿಗೆ ಟೀಕೆ ವಿಚಾರದ ಬಗ್ಗೆ ಮಾತನಾಡಿ. ಅವರಿಗೆ ನಿರ್ವಹಣೆ ಮಾಡಲು ಆಗದೇ ಇದ್ದರೆ ರಾಜೀನಾಮೆ ನೀಡಬೇಕು. ಅವರ ಇಲಾಖೆಯಲ್ಲಿ ಭ್ರಷ್ಟಾಚಾರ  ಕೊಳೆತು ನಾರುತ್ತಿದೆ ಎನ್ನುವುದು  ಮನವರಿಕೆ  ಆಗಿದೆ.  ಈ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಂತಹ ಹೇಳಿಕೆ ನೀಡಿದ್ದಾರೆ ಎಂದರು.

ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿಗೆ ಜೆಡಿಎಸ್ ಬೆಂಬಲಿಸುತ್ತದೆ. ಕೆಲವು ಕ್ಷೇತ್ರದಲ್ಲಿ ಜೆಡಿಎಸ್ ಸ್ಥಳೀಯ ಮುಖಂಡರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ ಎಂದರು.

ಅಧಿವೇಶನ ಆರಂಭವಾಗುತ್ತಿದೆ. ಅತಿವೃಷ್ಟಿ ಸಮಸ್ಯೆಯಾಗಿದೆ. ಮೂರು ನಾಲ್ಕು ಪಟ್ಟು ಹೆಚ್ಚು  ಮಳೆ ಹೆಚ್ಚಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ. ಒಂದು ತಿಂಗಳಾಯ್ತು, ಇನ್ನು  ಕೂಡಾ  ಸರ್ವೇ  ಆಗಿಲ್ಲ. 6 ಲಕ್ಷ  ಹೆಕ್ಟೇರ್ ಬೆಳೆ ಹಾನಿಯಾಗಿದೆ. ರೈತರ ವಿರೋಧಿ ಸರ್ಕಾರ ಇದಾಗಿದೆ.  ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಜನರು ಶಾಪ ಹಾಕುತ್ತಿದ್ದಾರೆ ಎಂದರು.

ರಾಜಕೀಯ ಧೃವೀಕರಣ ಶುರುವಾಗಿದೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಅನೇಕರು ಕಾಂಗ್ರೆಸ್ ಪಕ್ಷ  ಸೇರ್ಪಡೆಯಾಗುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಪತ್ತೆ  ಹಿನ್ನೆಲೆಯಲ್ಲಿ ಹೊರ ದೇಶದಿಂದ ಬಂದವರು ಮಿಸ್ಸಿಂಗ್ ಆಗಿದ್ದಾರೆ. ಏರ್ ಪೋರ್ಟ್ ನಲ್ಲಿ ಭ್ರಷ್ಟಾಚಾರ ಇರಬೇಕು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಮಿಸ್ಸಿಂಗ್ ಆಗಿದ್ದಾರೆ ಎಂದರು.

ಇದು ಲಂಚ ಹೊಡೆಯುವ ಸರ್ಕಾರ. ಇದರ ಮೇಲೆ ಯಾವುದೇ ನಿರೀಕ್ಷೆ ಇಲ್ಲ. 40 ಪರ್ಸೆಂಟ್ ಸರ್ಕಾರ ಆಗಿದೆ. ಗುತ್ತಿಗೆದಾರರು ಈಗಾಗಲೇ ಮೋದಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲರಿಗೆ ಪತ್ರ ಬರೆದಿರುವೆ.  ನ್ಯಾಯಾಂಗ ತನಿಖೆ ಆಗಬೇಕು. ರಾಜ್ಯಪಾಲ ಆಡಳಿತ ರಾಜ್ಯದಲ್ಲಿ   ಜಾರಿಯಾಗಬೇಕು. ಕಾಂಗ್ರೆಸ್ ಸರ್ಕಾರ ಸೇರಿ ಎಲ್ಲ ತನಿಖೆ ಮಾಡಲಿ. ಇವರಿಗೆ ಧಮ್ ಇಲ್ಲ. ತನಿಖೆ ಆದರೆ ಅವರು ಬೆತ್ತಲೆ ಆಗುತ್ತಾರೆ. ಸಿದ್ಧು ಟೀಕೆ ಮಾಡಿದ್ರೆ ಈಶ್ವರಪ್ಪ ಲೀಡರ್ ಆಗುತ್ತೇನೆ ಅಂದುಕೊಂಡಿದ್ದಾನೆ. ಜನರ ಆಶೀರ್ವಾದ ಇದ್ದರೆ ಮಾತ್ರ ನಾಯಕ ಆಗಲು ಸಾಧ್ಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News