ಗ್ರಾಮ ಪಂಚಾಯತ್ ಗಳ ಸಶಕ್ತೀಕರಣ ಸರ್ಕಾರದ ಗುರಿ: ಸಿ.ಎಂ ಬಸವರಾಜ ಬೊಮ್ಮಾಯಿ

Update: 2021-12-05 17:02 GMT

ಬೀದರ್, ಡಿ.4: ಗ್ರಾಮ ಪಂಚಾಯತ್ ಗಳ  ಸಶಕ್ತೀಕರಣ ನಮ್ಮ ಸರ್ಕಾರದ ಗುರಿ.  ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಕಾರ್ಯಕ್ರಮಗಳು ರೂಪಿತವಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಬೀದರ್ ನಲ್ಲಿ ಭಾರತೀಯ ಜನತಾ ಪಕ್ಷ  ಆಯೋಜಿಸಿದ್ದ  ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು. 

ಬೀದರ್ ಜಿಲ್ಲೆ ಕರ್ನಾಟಕ ಹಾಗೂ ಕನ್ನಡಾಂಬೆಯ ಕಿರೀಟ. ಭಾರತೀಯ ಜನತಾ ಪಕ್ಷದ ಮೇಲೆ ಬೀದರ್ ಜಿಲ್ಲೆಯ ಜನತೆಗೆ ಅಪಾರ ಪ್ರೀತಿ. ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿ ಯಾದಾಗ ಮಾತ್ರ ಕಿರೀಟಕ್ಕೊಂದು ಶೋಭೆ ಎಂದರು. 

ಜನರು ಅಭಿವೃದ್ಧಿಯಾಗಬೇಕು. ಅವರು ಕೆಲಸಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಚೇರಿಗಳಿಗೆ ಓಡಾಡುವುದು ನಿಲ್ಲಬೇಕು. ಜನರಿರುವ ಕಡೆಗೆ ಸೇವೆಗಳು ಲಭಿಸುವಂತಾಗಬೇಕು. ಸರ್ಕಾರದ ಲಕ್ಷ್ಯ ಗ್ರಾಮದ ಅಭಿವೃದ್ಧಿಯ ಕಡೆಗಿದೆ.   ಗ್ರಾಮ ಪಂಚಾಯಿತಿ ಗಳಿಗೆ ಮೂಲಭೂತ ಸೌಕರ್ಯ, ಅಧಿಕಾರ ವಿಕೇಂದ್ರೀಕರಣ, ಕೌಶಲ್ಯಾಭಿವೃದ್ಧಿ ಮುಂತಾದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ಜನಬಲವಿಲ್ಲದಾಗ ಹಣಬಲದಿಂದ ಚುನಾವಣೆ ಗೆಲ್ಲಬಹುದು ಎಂದು ಕಾಂಗ್ರೆಸ್ ಭಾವಿಸಿದೆ. ಪ್ರೀತಿ ವಿಶ್ವಾಸದಿಂದ ಜನರ ಕೆಲಸ ಮಾಡಿ ಅವರ ಹೃದಯ ಗೆಲ್ಲಬೇಕು. ಆ ಕೆಲಸವನ್ನು ಭಾರತೀಯ ಜನತಾ ಪಕ್ಷ  ಮಾಡಿದೆ.  ಸಹಜ ನ್ಯಾಯವನ್ನು ಅನುಸರಿಸಿ ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ ಎಂದು ಅವರು  ಕರೆ ನೀಡಿದರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 3,000 ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. 

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹುದ್ದೆಗಳನ್ನು ತುಂಬುವ ಕೆಲಸ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ 1400 ಹುದ್ದೆಗಳನ್ನು ಭರ್ತಿ ಮಾಡಲು ಮಂಜೂರಾತಿ  ನೀಡಿ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಂಡಿದೆ. ಜನರ ಹತ್ತಿರಕ್ಕೆ ಆಡಳಿತವನ್ನು ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದೆ ಎಂದರು. 

ಬಿಜೆಪಿ ಗುರಿ, ದೃಷ್ಟಿ ಸ್ಪಷ್ಟವಿದೆ.  ಸಮಾಜವೇ ನಮ್ಮ ಕುಟುಂಬ ಎಂದು ಭಾವಿಸಿ ಬಡತನ ರೇಖೆಗಿಂತ ಕೆಳಗಿರುವವರ  ಏಳಿಗೆ ಸೇರಿದಂತೆ ವಿಶೇಷ ಯೋಜನೆಗಳನ್ನು ಈ ಭಾಗದ ಅಭಿವೃದ್ಧಿಗೆ  ರೂಪಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News