ಬಿಜೆಪಿಯವರ ಜೇಬಿಗೆ ಮಾತ್ರ ಅಮೃತ, ಜನರ ಪಾಲಿಗೆ ವಿಷ: ಅಮೃತ ಯೋಜನೆಗೆ ಸಿದ್ದರಾಮಯ್ಯ ಟೀಕೆ

Update: 2021-12-06 10:17 GMT

ಬಾದಾಮಿ: ''ಈಗ ಅಮೃತ ಯೋಜನೆಯಡಿ ಕೆಲವು ಗ್ರಾಮಗಳಿಗೆ ಕೇವಲ 25 ಲಕ್ಷ ರೂ.ನೀಡುತ್ತೇವೆಂದು ಬೊಮ್ಮಾಯಿವರು ಹೇಳುತ್ತಾರೆ. 25 ಲಕ್ಷ ರೂಪಾಯಿಗಳಲ್ಲಿ ಏನು ಮಾಡುತ್ತಾರೆ. ಈ ಬಿಜೆಪಿ ಸರ್ಕಾರದಲ್ಲಿ ಲಂಚಕ್ಕಾಗಿ ಶೇ 40-52 ಹೋಗುತ್ತಿದೆಯೆಂದು ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗೆ, ರಾಜ್ಯಪಾಲರಿಗೆ ದೂರು ನೀಡಿದ್ದಾರೆ'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಜಿಎಸ್ ಟಿ ಗೆ ಶೇ.18-28 ಹೋಗುತ್ತದೆ. ಅಲ್ಲಿಗೆ ಶೇ.70 ರಷ್ಟು ಕೊಚ್ಚಿ ಕೊಂಡು ಹೋಯಿತಲ್ಲ. ಗುತ್ತಿಗೆದಾರನಿಗೆ ಶೇ.10 ಲಾಭ ಬೇಕು. ಉಳಿದದ್ದು ಶೇ.20 ಮಾತ್ರ. ಬೊಮ್ಮಾಯಿಯವರು 25 ಲಕ್ಷ ರೂ. ನೀಡುತ್ತೇನೆ ಎಂದರೆ ಗ್ರಾಮಗಳ ಕಾಮಗಾರಿಗಳಿಗೆ ಸಿಗುವುದು ಕೇವಲ 5 ಲಕ್ಷ ರೂ. ಅದಕ್ಕಾಗಿ ಅಮೃತ ಎಂದು ಯೋಜನೆ. ಇದು ಬಿಜೆಪಿಯವರ ಜೇಬಿಗೆ ಮಾತ್ರ ಅಮೃತ. ಜನರ ಪಾಲಿಗೆ ವಿಷ ಎಂದು ಟೀಕಿಸಿದರು.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರ ಆರೋಪ ಪಟ್ಟಿ ಹೀಗಿದೆ...  

15 ನೇ ಹಣಕಾಸು ಯೋಜನೆಯಲ್ಲಿ ಪಂಚಾಯತಿಗಳಿಗೆ ಮೊದಲು 3,300 ಕೋಟಿ ರೂ.ಕೊಡುತ್ತೇವೆ ಅಂದರು. ಆದರೆ ಈಗ ಕೇವಲ 2400 ಕೊಟಿ ರೂ.ಗೆ ಇಳಿಸಿದ್ದಾರೆ.

ನಮ್ಮ ಸರ್ಕಾರ ಇದ್ದಾಗ ಗ್ರಾಮೀಣ ಸುಮಾರ್ಗ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಪ್ರಾರಂಭಿಸಿದ್ದೆವು. ಅದನ್ನೂ ನಿಲ್ಲಿಸಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕಳೆದ ವರ್ಷ ಗ್ರಾಮೀಣ ರಸ್ತೆಗಳಿಗೆಂದು 1350 ಕೋಟಿ ರೂ. ನೀಡುವುದಾಗಿ ಆದೇಶ ಹೊರಡಿಸಿ ಕೆಲಸ ಮಾಡಿಸಿದರು. ಆದರೆ ಇದುವರೆಗೆ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ. ಕೆಲಸ ಮಾಡಿದ ಗುತ್ತಿಗೆದಾರ ಏನು ಮಾಡಬೇಕು? ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಗ್ರಾಮಚಾಯತಿಯ ನೌಕರರಿಗೆ ಸಂಬಳ ನೀಡಲೆಂದು ಪ್ರತಿ ವರ್ಷ 912 ಕೋಟಿ ರೂಗಳನ್ನು ನೀಡುವ ನಿರ್ಧಾರ ತೆಗೆದುಕೊಂಡೆವು. ಅದರಿಂದ ಸಾವಿರಾರು ನೌಕರರಿಗೆ ಅನುಕೂಲವಾಯ್ತು. ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವಧನ ಹೆಚ್ಚಿಸುವ ಮಾತನ್ನು ಬಿಜೆಪಿಯವರು ಆಡುತ್ತಿದ್ದಾರೆ. ಅದು ಇವರು ಮಾಡುವುದಿಲ್ಲ. ನಮ್ಮ ಪಕ್ಷಕ್ಕೆ ಮಾತ್ರ ಅಂಥ ಬದ್ಧತೆ ಇರುವುದು ಎಂದು ತಿಳಿಸಿದರು.

2014 ಕ್ಕಿಂತ ಮೊದಲು ಗ್ರಾಮ ಪಂಚಾಯತ್‌ಗಳಿಗೆ ನೇರವಾಗಿ ಒಂದು ರೂಪಾಯಿಯೂ ಬರುತ್ತಿರಲಿಲ್ಲ. ನರೇಂದ್ರ ಮೋದಿ ಎಂಬ ಪುಣ್ಯಾತ್ಮ ಬಂದ ಮೇಲೆ ಗ್ರಾಮ ಪಂಚಾಯತಿಗಳಿಗೆ ದುಡ್ಡು ಬಂತು ಅಂತ ಬಿಜೆಪಿಯ ಅಧ್ಯಕ್ಷರು ಇತ್ತೀಚೆಗೆ ಕಲಬುರರಗಿಯಲ್ಲಿ ಹೇಳಿದ್ದರು. ಇದೂ ಕೂಡ ದೊಡ್ಡ ಸುಳ್ಳು. ಗ್ರಾಮ ಪಂಚಾಯತಿಗಳಿಗೆ ಹಣ ಬರಲು ಪ್ರಾರಂಭಿಸಿದ್ದು ಮನಮೋಹನ್‌ಸಿಂಗ್‌ರವರು ನರೇಗಾ ಯೋಜನೆ ಪ್ರಾರಂಭಿಸಿದ ಮೇಲೆ. 

ನರೇಗಾ ಯೋಜನೆ ಸೆಪ್ಟೆಂಬರ್ 2005 ರಲ್ಲಿ  ಜಾರಿಗೆ ಬಂತು. ಅಧಿಕೃತವಾಗಿ ಫೆಬ್ರವರಿ 2006 ರ ಫೆಬ್ರವರಿಯಿಂದ ಅಸ್ತಿತ್ವಕ್ಕೆ ಬಂತು. ಇದು ಮನಮೋಹನಸಿಂಗ್ ಅವರ ಯುಪಿಎ ಸರ್ಕಾರದ ಕೊಡುಗೆ. ಹಾಗೆ ನೋಡಿದರೆ ಪುಣ್ಯಾತ್ಮ ಅಂತ ಇದ್ದರೆ ಅದು ಮನಮೋಹನ್ ಸಿಂಗ್ ಮಾತ್ರ. ಮೋದಿಯವರಲ್ಲ.

ನರೇಗಾ ಯೋಜನೆಯನ್ನು ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರು ನಖ ಶಿಖಾಂತ ವಿರೋಧಿಸಿದ್ದರು, 2015ರ ವರೆಗೂ ಗೇಲಿ ಮಾಡುತ್ತಲೆ ಇದ್ದರು. ವಿರೋಧ ಮಾಡಿದವರು, ಜನಪರವಾದ ಒಂದು ಯೋಜನೆಯನ್ನು ಹಂಗಿಸಿದವರು ಹೇಗೆ ಪುಣ್ಯಾತ್ಮರಾಗುತ್ತಾರೆ?

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಜನ ಬಿಪಿಎಲ್ ಕಾರ್ಡುದಾರರಿದ್ದಾರೆ. ಅದರಲ್ಲಿ ಒಂದು ಕೋಟಿ ಜನರಿಗೆ 100 ಮಾನವ ದಿನಗಳಷ್ಟು ಕೆಲಸ ಕೊಟ್ಟರೆ 100 ಕೋಟಿ ಮಾನವ ದಿನಗಳ ಗುರಿ ನೀಡಬೇಕಾಗುತ್ತದೆ. ಆದರೆ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಗುರಿಯನ್ನು ನೀಡಲಾಗುತ್ತಿದೆ.

ಇದು ಕೇವಲ 13 ಲಕ್ಷ ಜನರಿಗೆ ಮಾತ್ರ ಸಾಕಾಗುತ್ತಿದೆ. ರಾಜ್ಯದಲ್ಲಿ ಈಗಾಗಾಲೆ ಸೆಪ್ಟೆಂಬರ್ ಅಂತ್ಯದ ವೇಳೆಗಾಗಲೆ ಈ ಟಾರ್ಗೆಟ್ ಮುಗಿದು ಹೋಗಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಆರು ತಿಂಗಳಿದ್ದಾಗಲೆ ಟಾರ್ಗೆಟ್ ಮುಗಿದು ಹೋಗಿದೆ. ಬೊಮ್ಮಾಯಿಯವರು ಸುಳ್ಳು ಹೇಳಿಕೊಂಡು ಓಡಾಡುವ ಬದಲು ಡೆಲ್ಲಿಗೆ ಹೋಗಿ ನರೇಗಾ ಯೋಜನೆಗೆ  ಬೇಡಿಕೆ ಆಧಾರಿತವಾಗಿ ಹೊಸ ಟಾರ್ಗೆಟ್ ತರಲಿ. ಇದನ್ನು ಮಾಡದೆ ರಾಜ್ಯದ ಜನರಿಗೆ ಟೋಪಿ ಹಾಕಿಕೊಂಡು ಓಡಾಡಿದರೆ ರಾಜ್ಯದ ಜನರಿಗೇನು ಲಾಭ. ಮೋದಿಯವರು ಸಂಸದರ ಆದರ್ಶ ಗ್ರಾಮ ಎಂದು ಯೋಜನೆ ಘೋಷಿಸಿದರು. ಅದೂ ಸಹ  ಇನ್ನೂ ಪೇಪರ್ ಮೇಲೆ ಇದೆ ಎಂದರು.

ಬೊಮ್ಮಾಯಿಯವರು ಇನ್ನೂ ಒಂದು ಮಾತನ್ನು ಹೇಳಿದ್ದಾರೆ.  ಕಾಂಗ್ರೆಸ್ ವಯಸ್ಸಾದ ಪಕ್ಷ ಅದನ್ನು ವಿಸರ್ಜಿಸಬೇಕು ಅಂದಿದ್ದಾರೆ. ಅವರಿಗೆ ತಿಳಿಸಬಯಸುತ್ತೇನೆ.  ಪಕ್ಷಗಳು ಸಿಂಬಲ್ ಮೇಲೆ ಮಾತ್ರ ನಿಂತಿರುವುದಿಲ್ಲ. ಸಿದ್ಧಾಂತಗಳ ಮೇಲೆ ನಿಂತಿರುತ್ತವೆ. ಬಿಜೆಪಿಯವರ ಸಿದ್ಧಾಂತ ಯಾವುದು? ಮನುವಾದ ಅಲ್ಲವೆ? ಎಂದು ಪ್ರಶ್ನಿಸಿದರು. 

ಈ ಸಿದ್ಧಾಂತವನ್ನು  ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನವು ಸಂಪೂರ್ಣ ಅಳಿಸಿ ಹಾಕಿದೆ.  ಸಮಾನತೆ, ಭ್ರಾತೃತ್ವ, ನ್ಯಾಯ, ಸಾಮಾಜಿಕ ನ್ಯಾಯ, ಸರ್ವೋದಯ ತತ್ವ ಮುಂತಾದವುಗಳು ನಮ್ಮ ಸಂವಿಧಾನದ ಪ್ರಮುಖ ಆಶಯಗಳು. ಕನಿಷ್ಠ ಎರಡೂವರೆ ಸಾವಿರ ವರ್ಷಗಳಷ್ಟು ಓಬೀರಾಯನ ಕಾಲದ ಮನುವಾದವನ್ನು ಅಳವಡಿಸಿಕೊಂಡ ಬಿಜೆಪಿಯನ್ನು ವಿಸರ್ಜಿಸಬೇಕೋ, ಸಾಮಾಜಿಕ ನ್ಯಾಯವನ್ನು ಸಿದ್ದಾಂತವಾಗಿಸಿಕೊಂಡ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೊ ಎಂದು ಬೊಮ್ಮಾಯಿಯವರೇ ಹೇಳಲಿ.

ಈ ಕಾಲಕ್ಕೆ ಹೊಂದಿಕೆಯಾಗದ ಪಳಿಯುಳಿಕೆಯಂಥ ಸಿದ್ಧಾಂತವನ್ನು ಹೊತ್ತುಕೊಂಡು ಓಡಾಡುತ್ತಿರುವ ಬಿಜೆಪಿಯನ್ನು ವಿಸರ್ಜನೆ ಮಾಡಬೇಕೆ ಹೊರತು ಯುಗಧರ್ಮದ ಜೊತೆ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ ಪಕ್ಷವನ್ನಲ್ಲ.

ಬಾಬಾ ಸಾಹೇಬರು ಮನು ಸಿದ್ಧಾಂತವನ್ನು ತಿರಸ್ಕರಿಸಿ ಬೌದ್ಧರಾಗಿ ಪರಿನಿಬ್ಬಾಣಗೊಂಡ ಪವಿತ್ರ ದಿನ ಇಂದು.  ಅವರು ಯಾಕೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು ಎಂದು ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಸತ್ಯ ನಿಮಗೆ ತಿಳಿಯುತ್ತದೆ. 

ನೀವು ಕೂಡ  ಮನುಷ್ಯ ವಿರೋಧಿಯಾದ ಮನು ಸಿದ್ಧಾಂತವನ್ನು ತೊರೆದು ಹೊರ ಬನ್ನಿ ಎಂದು ತಿಳಿಸಬಯಸುತ್ತೇನೆ. ಕನಿಷ್ಟ ಪಕ್ಷ ಸುಳ್ಳು ಹೇಳುವುದನ್ನು ನಿಲ್ಲಿಸಿ; ಕಳಬೇಡ, ಕೊಲಬೇಡ, ಹುಸಿಯ ನಡಿಯಲು ಬೇಡ ಎಂದ ಬಸವಣ್ಣನವರ ತತ್ವವನ್ನು ಹಾಗೂ ಬಾಬಾ ಸಾಹೇಬರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸುತ್ತೇನೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News