ಮೈಸೂರು: ಪ್ರಯಾಣಿಕನ ಸೋಗಿನಲ್ಲಿ ಬಂದು ಆಟೋ ಚಾಲಕನ ಕತ್ತು ಕುಯ್ದ ದುಷ್ಕರ್ಮಿ

Update: 2021-12-08 06:24 GMT
Photo: PTI

ಮೈಸೂರು, ಡಿ.8: ಪ್ರಯಾಣಿಕರ ಸೋಗಿನಲ್ಲಿ ಆಟೋ ರಿಕ್ಷಾವನ್ನು ಏರಿದ ದುಷ್ಕರ್ಮಿಯೋರ್ವ ಆಟೋ ಚಾಲಕನ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ಗೋಕುಲಂನಲ್ಲಿ ಮಂಗಳವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ತೌಸಿಫ್ ಪಾಶ ಹಲ್ಲೆಗೊಳಗಾದ ಯುವಕ. ಮೈಸೂರಿನಲ್ಲಿ ಆಟೋ ರಿಕ್ಷಾ ಓಡಿಸುತ್ತಿರುವ ಇವರ ಆಟೋವನ್ನು ಮಂಗಳವಾರ ರಾತ್ರಿ ಚಲುವಾಂಬ ಆಸ್ಪತ್ರೆಯ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ಏರಿದ್ದಾನೆ. ತನ್ನನ್ನು ಗೋಕುಲಂನ ನಿರ್ಮಲ ಕಾನ್ವೆಂಟ್ ಬಳಿ ಬಿಡುವಂತೆ ಹೇಳಿದ್ದಾನೆ. ಅದರಂತೆ ನಿರ್ಮಲ ಕಾನ್ವೆಂಟ್ ಬಳಿ ತಲುಪಿದಾಗ ಆಟೋದಿಂದ ಇಳಿಯುತ್ತಿದ್ದಂತೆ ದುಷ್ಕರ್ಮಿಯು ಹಿಂಬದಿಯಿಂದ ಆಟೋ ಚಾಲಕನ ಕತ್ತು ಕೊಯ್ದು ಪರಾರಿಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ತೌಸಿಫ್ ಪಾಶ ದುಷ್ಕರ್ಮಿಯನ್ನು ಹಿಡಿಯಲು ಯತ್ನಿಸಿದರಾದರೂ ಆಟೋ ರಿಕ್ಷಾವನ್ನು ಹಿಂಬಾಲಿಸಿಕೊಂಡು ಬಂದಿದ್ದ ದ್ವಿಚಕ್ರ ವಾಹನವನ್ನು ಏರಿ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ತೌಸಿಫ್ ರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ತೌಸಿಫ್ ಪಾಶರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಎಸ್.ಡಿ.ಪಿ.ಐ. ಕಾರ್ಯಕರ್ತರೆನ್ನಲಾಗಿದೆ.

ಈ ಸಂಬಂಧ ತೌಸಿಫ್ ಪಾಶ ಸಹೋದರ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News