ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ನೀಡುವ ಸರ್ಟಿಫಿಕೆಟ್ ಬೇಕಾಗಿಲ್ಲ: ಸಿ.ಟಿ.ರವಿ

Update: 2021-12-08 12:23 GMT
ಸಿ.ಟಿ.ರವಿ

ಚಿಕ್ಕಮಗಳೂರು, ಡಿ.8: ಜಗತ್ತಿನ ದೃಷ್ಟಿಯಲ್ಲಿ ಪ್ರಧಾನಿ ಮೋದಿ ಅವರು ಅಗ್ರಗಣ್ಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಸಿದ್ದರಾಮಯ್ಯ ನೀಡುವ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ನರೇಂದ್ರಮೋದಿ ಸುಳ್ಳುಗಾರ, ದೇಶದ ಇತಿಹಾಸದಲ್ಲಿ ಇಂತಹ ಪ್ರಧಾನಮಂತ್ರಿಯನ್ನು ನೋಡಿರಲಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬುಧವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರಮೋದಿ ಅವರು ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕಾ ಎಲ್ಲಿಗೆ ಹೋದರೂ ಜನರು ಮೋದಿ ಮೋದಿ ಎನ್ನುತ್ತಾರೆ. ಆದರೆ ಸಿದ್ದರಾಮಯ್ಯ ಅವರ  ಹೆಸರನ್ನು ಪಾಕಿಸ್ತಾನದಲ್ಲಿ ಯಾರಾದರೂ ಹೇಳಬೇಕಾಷ್ಟೆ ಎಂದು ವ್ಯಂಗ್ಯವಾಡಿದರು.

ಬಾವಿಯೊಳಗಿನ ಕಪ್ಪೆ ಬಾವಿಯನ್ನೇ ಪ್ರಪಂಚ ಎಂದು ಭಾವಿಸುತ್ತೆ, ಇಂಗ್ಲೆಂಡ್ ಅಧ್ಯಕ್ಷ ಬೋರಿಸ್ ಜಾನ್ಸನ್ ಅವರು ದೇಶದ ಪ್ರಧಾನಿ ಮೋದಿ ಅವರ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ. ಇಸ್ರೇಲ್ ಅಧ್ಯಕ್ಷ ನಮ್ಮ ದೇಶದಲ್ಲಿ ನನಗಿಂತ ಪ್ಯಾಪ್ಯುಲರ್ ಯಾರಾದರೂ ಇದ್ದರೇ ಅದು ಮೋದಿ ಎಂದು ಹೇಳಿದ್ದಾರೆ. ದೇಶದಲ್ಲಿ ಎಲ್ಲಿ ಹೋದರೂ ಮೋದಿ ಮೋದಿ ಎಂಬ ಶಬ್ಧ ಬಿಟ್ಟು ಬೇರೇನೂ ಕೇಳಿಸಲ್ಲ. ಕರ್ನಾಟಕದ ಆಚೆ ಸಿದ್ದರಾಮಯ್ಯ ಅವರ ಹೆಸರನ್ನು ಯಾರಾದರೂ ಹೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ದೇಶದ ಬೇರೆ ಕಡೆ ರಾಹುಲ್ ಗಾಂಧಿಯ ಹೆಸರನ್ನೇ ಯಾರೂ ಹೇಳಲ್ಲ, ನಾನಿದ್ದಂತೆ ಉಳಿದವರು ಎಂದು ಸಿದ್ಧರಾಮಯ್ಯ ಭಾವಿಸಿದ್ದಾರೆ. ಅವರು ಹಾಗೆಯೇ ಇದ್ದಾರೆ, ಅದಕ್ಕೆ ಅವರಿಗೆ ಎಲ್ಲರೂ ಹಾಗೆಯೇ ಕಾಣುತ್ತಾರೆ ಎಂದು ಟೀಕಿಸಿದರು.

ಬಿಜೆಪಿ ಜೆಡಿಎಸ್‍ನೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದು, ಬಿಜೆಪಿಯ ಸಾಮರ್ಥ್ಯ ಅಷ್ಟರ ಮಟ್ಟಿಗೆ ಕುಸಿದಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕಾಂಗ್ರೆಸ್‍ಗೆ ಈ ಹಿಂದೆ ಜೆಡಿಎಸ್ ಬೆಂಬಲ ಇಲ್ಲದಿದ್ದರೇ ಡಿಕೆಶಿ ಶಾಸಕರಾಗಲು ಹಾಗೂ ಅವರ ಸಹೋದರ ಸಂಸದರಾಗಲೂ ಸಾಧ್ಯವಿರಲಿಲ್ಲ. ಬಿಜೆಪಿ ಅಲೆಯ ಮಧ್ಯೆ ಕಾಂಗ್ರೆಸ್‍ಗೆ ಅಂದು ಜೆಡಿಎಸ್ ಬೆಂಬಲ ಇದ್ದ ಕಾರಣ ನೀವು ಶಾಸಕರಾಗಿ ನಿಮ್ಮ ಸಹೋದರ ಸಂಸದರಾಗಿದ್ದೀರು ಎಂದು ತಿರುಗೇಟು ನೀಡಿದರು.

ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿ.ಎಂ.ಸ್ಥಾನದಲ್ಲಿ ಕೂರಿಸಿ ಕಾಲೆಳೆದಿದ್ದು ಅವರೇ, ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋಂದು ಕಾಂಗ್ರೆಸ್‍ಗೆ ಅನ್ವಯಿಸುತ್ತದೆ. ಒಪ್ಪಂದವೆಲ್ಲಾ ಕಾಂಗ್ರೆಸ್‍ಗೆ ಬಿಟ್ಟಿದ್ದು, ನಮ್ಮದು ಜನರೊಂದಿಗಿನ ಸಂಬಂಧ ಎಂದ ಅವರು, ಜೆಡಿಎಸ್ ಎಲ್ಲಿ ಸ್ಫರ್ಧೆ ಮಾಡಿಲ್ಲವೋ ಅಲ್ಲಿ ನಮಗೆ ಬೆಂಬಲ ಕೊಡುವಂತೆ ಯಡಿಯೂರಪ್ಪ ಜೆಡಿಎಸ್ ಮುಖಂಡರನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ಅವರು ಏನೂ ಹೇಳಿಲ್ಲ, ಮತದಾರರಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಗೊತ್ತಿದೆ. ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಪಕ್ಷದಿಂದ 20ಸ್ಥಾನಗಳಲ್ಲಿ ಸ್ಫರ್ಧೆ ಮಾಡಿದ್ದು, 11-16 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News