×
Ad

ಮಡಿಕೇರಿಯ ಜ.ತಿಮ್ಮಯ್ಯ ಮ್ಯೂಸಿಯಂನಲ್ಲಿ ಡಿ.13ಕ್ಕೆ ಯುದ್ಧ ಸಾಧನಗಳ ಮಾದರಿ ಲೋಕಾರ್ಪಣೆ

Update: 2021-12-11 23:31 IST

ಮಡಿಕೇರಿ ಡಿ.11 : ನಗರದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ನೂತನವಾಗಿ ಅಳವಡಿಸಲಾಗಿರುವ ಶಿವಾಲಿಕ್ ಯುದ್ಧ ನೌಕೆಯ ಮಾದರಿ, ಆ್ಯಂಟಿ ಏರ್ ಕ್ರಾಫ್ಟ್ ಮಿಷಿನ್ ಗನ್ ಹಾಗೂ ಒಂದು ಸಬ್‍ಮೆರಿನ್‍ನ್ನು ಡಿ.13ರಂದು ಲೋಕಾರ್ಪಣೆಯಾಗಲಿದೆ. 

ವಿಶಾಖಪಟ್ಟಣ ನೌಕಾ ನೆಲೆಯಿಂದ ಈ ಪರಿಕರಗಳನ್ನು ತರಲಾಗಿದ್ದು, ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಸೋಮವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ವಿಶಾಖಪಟ್ಟಣ ನೌಕಾನೆಲೆಯ ಅಧಿಕಾರಿ, ಮಾದರಿ ಯುದ್ಧ ನೌಕೆಯ ವಿನ್ಯಾಸಗಾರ ಸುದಾಂಶು ಹಾಗೂ ಸಿಬ್ಬಂದಿಗಳು ಮ್ಯೂಸಿಯಂಗೆ ಆಗಮಿಸಿದ್ದು, ಎಲ್ಲಾ ಮಾದರಿಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.  

ಸೇನಾಧಿಕಾರಿಯಿಂದ ಲೋಕಾರ್ಪಣೆ 

ನೌಕಾಸೇನೆಗೆ 2012ರಲ್ಲಿ ಸೇವೆಗೆ ನಿಯೋಜಿಸಲ್ಪಟ್ಟ ಶಿವಾಲಿಕ್ ಯುದ್ದ ನೌಕೆಯ ಮಾದರಿ, ಆ್ಯಂಟಿ ಏರ್‍ಕ್ರಾಫ್ಟ್ ಮಿಷಿನ್ ಗನ್ ಹಾಗೂ ಸಬ್‍ಮೆರಿನ್ ಅನ್ನು ವೈಸ್ ಎಡ್ಮಿರಲ್, ಕಮಾಂಡರ್ ಇನ್ ಚೀಫ್ ವೆಸ್ಟರ್ನ್ ಕಮಾಂಡ್‍ನ ಬಿಸ್ವಾಸ್ ದಾಸ್ ಗುಪ್ತ ಅವರು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. 

ಕಾರ್ಯಕ್ರಮದ ಅಂಗವಾಗಿ ಡಿ.12ರಂದೇ ಮಡಿಕೇರಿಯ ಗಾಲ್ಫ್ ಮೈದಾನದ ಹೆಲಿಪ್ಯಾಡ್‍ಗೆ ನೌಕಾ ಸೇನಾಧಿಕಾರಿ ಬಿಸ್ವಾಸ್ ದಾಸ್ ಗುಪ್ತ ಬಂದಿಳಿಯಲಿದ್ದಾರೆ. ಬಳಿಕ ಕೊಡಗು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಖಾಸಗಿ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. 

ಡಿ.13ರಂದು ಬೆಳಗ್ಗೆ 11 ಗಂಟೆಗೆ ಶಿವಾಲಿಕ್ ಯುದ್ಧ ನೌಕೆ, ಏರ್ ಕ್ರಾಫ್ಟ್ ಮಿಷಿನ್ ಗನ್ ಮತ್ತು ಸಬ್‍ಮೆರಿನ್ ಅನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂಗೆ ಹಸ್ತಾಂತರಿಸುವ ಮೂಲಕ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಲಿದ್ದಾರೆ. 

ನೌಕಾ ಸೇನೆಯ ರಿಯರ್ ಎಡ್ಮಿರಲ್ ಐಚೆಟ್ಟಿರ ಉತ್ತಪ್ಪ, ನಿವೃತ್ತ ಲೆಫ್ಟಿನೆಂಟ್ ಜನರಲ್ ಪಟ್ಟಚೆರುವಂಡ ತಿಮ್ಮಯ್ಯ, ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಸಂಚಾಲಕ ಮೇಜರ್ ಬಿದ್ದಂಡ ನಂದಾ ನಂಜಪ್ಪ, ನಿವೃತ್ತ ಸೇನಾಧಿಕಾರಿಗಳು, ಜಿಲ್ಲಾಧಿಕಾರಿ ಡಾ.ಸತೀಶ, ಎಸ್.ಪಿ. ಕ್ಷಮಾಮಿಶ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ದರ್ಶನ, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಮೋದ್ ಹಾಗೂ ಮತ್ತಿತ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

 ಐಚೆಟ್ಟಿರ ಉತ್ತಪ್ಪ ಕೊಡುಗೆ 

ಮ್ಯೂಸಿಯಂನಲ್ಲಿ ಯುದ್ದ ಮತ್ತು ವಿವಿಧ ಸೈನಿಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಸೇನಾ ನಿವೃತ್ತಿಯಾಗಿರುವ ಭೂ ಸೇನೆಗೆ ಸೇರಿದ ‘ಹಿಮ್ಮತ್’ ಹೆಸರಿನ ಟಿ.55 ಯುದ್ಧ ಟ್ಯಾಂಕರ್, ವಾಯು ಸೇನೆಗೆ ಸೇರಿದ ಮಿಗ್-20 ಶ್ರೇಣಿಯ ಯುದ್ಧ ವಿಮಾನ ಹಾಗೂ ನೌಕಾ ಸೇನೆಗೆ ಸೇರಿದ ಯುದ್ಧ ನೌಕೆಯ ಒಂದು ಜೊತೆ ಆ್ಯಂಕರ್ ಮಾತ್ರವೇ ಇತ್ತು. ಇದೀಗ ರಿಯರ್ ಎಡ್ಮಿರಲ್ ಐಚೆಟ್ಟಿರ ಉತ್ತಪ್ಪ ಅವರು ಕೊಡುಗೆಯಾಗಿ ನೀಡಿರುವ ಶಿವಾಲಿಕ್ ಯುದ್ಧ ನೌಕೆ, ಸಬ್‍ಮೆರಿನ್ ಮಾದರಿ ಹಾಗೂ ಆ್ಯಂಟಿ ಏರ್‍ಕ್ರಾಫ್ಟ್ ಗನ್ ಕೂಡ ಅಳವಡಿಕೆಯಾಗಿದ್ದು, ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಮೆರುಗು ತುಂಬಿದೆ. ಆ ಮೂಲಕ ಭಾರತೀಯ ರಕ್ಷಣಾ ಪಡೆಗಳ 3 ವಿಭಾಗಗಳ ಯುದ್ಧ ಸಾಮಾಗ್ರಿಗಳನ್ನು ಹೊಂದುವ ಮೂಲಕ ಮ್ಯೂಸಿಯಂ ಪರಿಪೂರ್ಣಗೊಂಡಿದೆ.

ಹೆಲಿಕಾಪ್ಟರ್ ಸರ್ವೆ

ನೌಕಾ ಸೇನೆಯ ಉನ್ನತಾಧಿಕಾರಿ ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ನೌಕಾ ಸೇನೆಯ ಹೆಲಿಕಾಫ್ಟರ್ ಒಂದು ಶನಿವಾರ ಮಡಿಕೇರಿಯಲ್ಲಿ ಏರಿಯಲ್ ಸರ್ವೇ ನಡೆಸಿತು. ನಗರದ ಗಾಲ್ಫ್ ಮೈದಾನಕ್ಕೆ ಬಂದಿಳಿದ ಹೆಲಿಕಾಫ್ಟರ್ ಲ್ಯಾಂಡಿಗ್ ಮತ್ತು ಟೇಕಾಫ್ ಟ್ರಯಲ್ ನಡೆಸಿತು. ಬಳಿಕ ಸುತ್ತ ಮುತ್ತಲ ಪ್ರದೇಶಗಳ ಏರಿಯಲ್ ಸರ್ವೇ ನಡೆಸಿ, ಬೆಂಗಳೂರು ಕಡೆ ಹಾರಾಟ ನಡೆಸಿತು. ಫೋಟೋ :: ವಾರ್ ಶಿಪ್
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News