ಚಾಮರಾಜನಗರ: ಗೃಹಿಣಿ ಮೃತ್ಯು; ಕೊಲೆ ಆರೋಪ

Update: 2021-12-15 14:51 GMT
ಸಾಂದರ್ಭಿಕ ಚಿತ್ರ

ಚಾಮರಾಜನಗರ : ವರದಕ್ಷಿಣೆಗಾಗಿ ಪತ್ನಿಗೆ ಹಿಂಸೆ ನೀಡಿದ್ದಲ್ಲದೆ ಕೊಲೆ ಮಾಡಿ ನೇತು ಹಾಕಿದ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ದೇವಪ್ಪ ಎಂಬುವರ ಪುತ್ರಿ ದಿವ್ಯಾ (22) ಮೃತ ದುರ್ದೈವಿ. ಘಟನೆ ಬಳಿಕ ದಿವ್ಯಾ ಪತಿ ಜಯಶಂಕರ್, ಮಾವ ಸಿದ್ದಮಲ್ಲಪ್ಪ, ಅತ್ತೆ ಸುಂದ್ರಮ್ಮ, ಬಾವ ಚಂದ್ರಶೇಖರ್, ವಾರಗಿತ್ತಿ ರೇಖಾ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಳೆದ 9 ತಿಂಗಳ ಹಿಂದೆಯಷ್ಟೇ ಉಡಿಗಾಲ ಗ್ರಾಮದ ಜಯಶಂಕರ್ ಜೊತೆ ದಿವ್ಯಾ ವಿವಾಹವಾಗಿತ್ತು. ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯಾಗಿ 2 ಲಕ್ಷ ರೂ. ನಗದು, ಚಿನ್ನಾಭರಣ, ಬೆಳ್ಳಿಯನ್ನು ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಹೆಚ್ಚಿನ ಹಣಕ್ಕಾಗಿ ಗಂಡ ಪೀಡಿಸುತ್ತಿದ್ದ ಆರೋಪಿಸಲಾಗಿದೆ.

ಪತಿ ಮನೆಯವರು ಕೊಲೆ ಮಾಡಿ ಬಳಿಕ ಮನೆಯ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಮೃತ ದೇಹವನ್ನು ನೇತು ಹಾಕಿ ಪರಾರಿಯಾಗಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಮೃತಳ ಕುಟುಂಬಸ್ಥರು ದೂರು ನೀಡಿದ್ದಾರೆ.

ಮೃತದೇಹವನ್ನು ಚಾ.ನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News